ಮಧುಗಿರಿ : ಕೃಷಿ ಜಮೀನೊಂದರಲ್ಲಿ ಹೊಂಡದಲ್ಲಿ ಕೆಮಿಕಲ್ ಬಳಸಿ ಬಾಂಬ್ ಸಿಡಿಸಿದ್ದ ಆರೋಪಿ ಡ್ರೋನ್ ಪ್ರತಾಪ್ಗೆ ಮಧುಗಿರಿಯ ಜೆ.ಎಂಎಫ್.ಸಿ ನ್ಯಾಯಾಲಯ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ತಾಲೂಕಿನ ಐಡಿಹಳ್ಳಿ ಹೋಬಳಿಯ ಜನಕಲೋಟಿ ಗ್ರಾಮದ ರಾಯರ ಬೃಂದಾವನ ಫಾರಂ ಹೌಸ್ಗೆ ಸೇರಿರುವ ಕೃಷಿ ಹೊಂಡದಲ್ಲಿ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ಕೆಮಿಕಲ್ ಬಳಸಿ ಬಾಂಬ್ ಪರೀಕ್ಷೆ ನಡೆಸಿ ತನ್ನ ಸಾಮಾಜಿಕ ಜಾಲ ತಾಣದಲ್ಲಿ ವೀಡಿಯೋ ತುಣುಕುಗಳನ್ನು ಹಂಚಿಕೊOಡಿದ್ದ. ನೀರು ತುಂಬಿದ್ದ ಕೃಷಿ ಹೊಂಡಕ್ಕೆ ಕೆಮಿಕಲ್ ಎಸೆದಿದ್ದೇ ತಡ ಅದು ದೊಡ್ಡ ಮಟ್ಟದಲ್ಲಿ ಸಿಡಿದು ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದ್ದವು. ಬಾಂಬ್ ಸಿಡಿಯುವ ದೃಶ್ಯ ಕಂಡು ಬಂದಿದ್ದು, ಇದನ್ನು ನಗುತ್ತಲೇ ವೀಡಿಯೋ ಮಾಡಿದ್ದ ಪ್ರತಾಪ್ ದೊಡ್ಡ ಬ್ಲಾಸ್ಟ್ ಇದು ಎಂದು ಕೂಗಿದ್ದರು.
ಈ ವೀಡಿಯೋ ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಇದು ಕಾನೂನು ಬಾಹಿರ. ಹೀಗಾಗಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

ಬಾಂಬ್ ಸಿಡಿಸಲು ಯಾವೆಲ್ಲ ರಾಸಾಯನಿಕಗಳನ್ನು ಬಳಸಬಹುದೆಂದು ಡ್ರೋನ್ ಪ್ರತಾಪ್ ಮಾಹಿತಿ ಹಂಚಿಕೊOಡಿರುವುದು ಸರಿಯಾದ ಕ್ರಮವಲ್ಲ. ಇದನ್ನು ಕಿಡಿಗೇಡಿಗಳು ಕೃತ್ಯಕ್ಕೆ ಬಳಸುವ ಸಾಧ್ಯತೆ ಇದೆ. ಕೂಡಲೇ ಪ್ರತಾಪ್ ಅವರನ್ನು ಬಂಧಿಸಬೇಕು ಎಂದು ಜಾಲತಾಣದಲ್ಲಿ ಹಲವು ಜನರು ಒತ್ತಾಯ ಸಹ ಮಾಡಿದ್ದರು.
ಈ ವೀಡಿಯೋ ತುಣುಕುಗಳನ್ನು ಆಧರಿಸಿ ತಾಲೂಕಿನ ಮಿಡಿಗೇಶಿ ಪೋಲೀಸರು ಪ್ರತಾಪ್ರವರನ್ನು ಬಂಧಿಸಿ ಬಿ.ಎನ್.ಎಸ್ ಕಾಯ್ದೆ ಸೆಕ್ಷನ್ 288ಮತ್ತು ಸ್ಪೋಟಕ ವಸ್ತುಗಳ ನಿಯಂತ್ರಣ ಕಾಯ್ದೆ ಸೆಕ್ಷನ್ 3 ಅಡಿ ಎಫ್.ಐ.ಆರ್ ಸುಮೊಟೋ ಕೇಸು ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಪೊಲೀಸರ ವಿಚಾರಣೆಗಾಗಿ ಪ್ರತಾಪ್ನನ್ನು ಮೂರು ದಿನಗಳ ಕಾಲ ಪೋಲೀಸರ ವಶಕ್ಕೆ ನೀಡಿದ್ದರು. ವಿಚಾರಣೆ ಬಳಿಕ ಮಿಡಿಗೇಶಿ ಪೊಲೀಸರು ಮತ್ತೆ ಸೋಮವಾರ ಡ್ರೋನ್ ಪ್ರತಾಪ್ ರವರನ್ನ ಮಧುಗಿರಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಾದ ಆಲಿಸಿದ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ನ್ಯಾಯಾಧೀಶರು ಡ್ರೋನ್ ಪ್ರತಾಪ್ಗೆ ಮತ್ತೆ ಡಿ.26 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.