ಬೆಂಗಳೂರು: ರಾಜಧಾನಿ ಬೆಂಗಳೂರಿನ ಮೈಸೂರು ರಸ್ತೆಯ ಟ್ರಾಫಿಕ್ನಲ್ಲಿ ಸಿಲುಕಿಕೊಂಡು ಪರದಾಟ ನಡೆಸುವ ವಾಹನ ಸವಾರರಿಗೆ ಗುಡ್ನ್ಯೂಸ್. ಹೊಸ 9 ಕಿ.ಮೀ ನೈಸ್ ಲಿಂಕ್ ರೋಡ್ ಆರಂಭವಾಗಲಿದೆ. ಈ ಮೂಲಕ ಟ್ರಾಫಿಕ್ ಜಂಜಾಟವಿಲ್ಲೇ ದೀಪಾಂಜಲಿ ನಗರ ಜಂಕ್ಷನ್ನಿಂದ ನೇರವಾಗಿ ಕೆಂಗೇರಿಗೆ ತಲುಪಬಹುದು.
ಬೆಂಗಳೂರಿನ ಮೈಸೂರು ರಸ್ತೆ ಎಂದರೆ ಸದಾ ಟ್ರಾಫಿಕ್ ಸಮಸ್ಯೆ ಇದ್ದೇ ಇರುತ್ತದೆ. ಮೈಸೂರು ಭಾಗದ ಊರುಗಳಿಗೆ ಹೋಗುವವರು ಮಾತ್ರವಲ್ಲದೇ, ಬೆಂಗಳೂರಿನ ಆರ್ಆರ್ ನಗರ, ಕೆಂಗೇರಿ ಸುತ್ತಮುತ್ತ ಬಡಾವಣೆಗೆ ತೆರಳುವವರೂ ವಾಹನ ದಟ್ಟಣೆಯಿಂದ ನಿತ್ಯ ಪರದಾಡ ನಡೆಸುತ್ತಾರೆ. ಇದಕ್ಕೆ ಪರಿಹಾರ ಎಂಬಂತೆ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ (ನೈಸ್) ಬಿಎಚ್ಇಎಲ್-ದೀಪಾಂಜಲಿ ನಗರ ಜಂಕ್ಷನ್ನಲ್ಲಿ 9 ಕಿಮೀ ಸಂಪರ್ಕ ರಸ್ತೆ ಆರಂಭಿಸುತ್ತಿದೆ.
ಈ ಲಿಂಕ್ ರಸ್ತೆಯಿಂದ ಮೈಸೂರು ರಸ್ತೆಯಲ್ಲಿ ನಾಯಂಡಹಳ್ಳಿ – ಕೆಂಗೇರಿ ನಡುವೆ ಸಂಚಾರ ಸುಗಮವಾಗಲಿದೆ. ಜತೆಗೆ ಪಿಇಎಸ್ ಕಾಲೇಜು ಮತ್ತು ಹೊಸಕೆರೆಹಳ್ಳಿ ಕಡೆಗೆ ವಾಹನಗಳ ಸಂಚಾರಕ್ಕೂ ಅನುಕೂಲವಾಗಲಿದೆ.
ನಾಲ್ಕೈದು ಸಿಗ್ನಲ್ ತಪ್ಪಿಸಬಹುದು
ನೈಸ್ ಹೊಸ ಲಿಂಕ್ ರಸ್ತೆಯಲ್ಲಿ ಸಾಗಿದರೆ ವಾಹನ ಸವಾರರು ರಾಜರಾಜೇಶ್ವರಿ ನಗರ ಜಂಕ್ಷನ್, ಬೆಂಗಳೂರು ವಿಶ್ವವಿದ್ಯಾಲಯ ಜಂಕ್ಷನ್, ಪಟ್ಟಣಗೆರೆಯಲ್ಲಿ ಜಂಕ್ಷನ್ ಸೇರಿದಂತೆ ನಾಲ್ಕೈದು ಪ್ರಮುಖ ಸಿಗ್ನಲ್ಗಳನ್ನು ತಪ್ಪಿಸಿಕೊಳ್ಳಬಹುದು.
20 ನಿಮಿಷ ಪ್ರಯಾಣ!
ಸದ್ಯ ಕೆಂಗೇರಿಯಿಂದ ದೀಪಾಂಜಲಿ ನಗರ ಜಂಕ್ಷನ್ಗೆ ತಲುಪುವುದಕ್ಕೆ ಸಾಮಾನ್ಯ ದಿನಗಳಲ್ಲಿ 50 ರಿಂದ 60 ನಿಮಿಷ ಬೇಕಾಗುತ್ತದೆ. ಈ ಹೊಸ ಲಿಂಕ್ ರಸ್ತೆ ಬಳಸಿದರೆ ಹಲವು ಟ್ರಾಫಿಕ್ ಸಿಗ್ನಲ್ಗಳನ್ನು ತಪ್ಪಿಸಿ ದೀಪಾಂಜಲಿ ನಗರದಿಂದ – ಕೆಂಗೇರಿಯ ಪಂಚಮುಖಿ ಗಣಪತಿ ದೇವಸ್ಥಾನವನ್ನು ಕೇವಲ 20 ನಿಮಿಷಗಳಲ್ಲಿ ತಲುಪಬಹುದು.
ಒಂದೂವರೆ ಕಿ.ಮೀ ಫ್ರೀ ರೋಡ್
ದೀಪಾಂಜಲಿ ನಗರ – ಬನಶಂಕರಿ ನಡುವೆ ಸಂಚರಿಸುವವರಿಗೂ ನೈಸ್ ಸಂಸ್ಥೆ ಸಂತಸದ ಸುದ್ದಿ ನೀಡಿದೆ. ದೀಪಾಂಜಲಿ ನಗರ – ಪಿಇಎಸ್ ಕಾಲೇಜು ನಡುವೆ ವಾಹನ ಸವಾರರಿಗೆ ಯಾವುದೇ ಮೊತ್ತವನ್ನು ಪಾವತಿಸದೇ ಲಿಂಕ್ ರಸ್ತೆಯಲ್ಲಿ ಸಂಚಾರ ನಡೆಸಲು ಅವಕಾಶ ನೀಡಲು ಮುಂದಾಗಿದೆ.