ತುಮಕೂರು || ಬೇನಾಮಿ ಹೆಸರಿನಲ್ಲಿ ಆಸ್ತಿ ; ನಿವೃತ್ತ ಆರ್ ಟಿ ಒ ಸೇರಿ ಆತನ ಆಪ್ತನ ಮನೆ ಮೇಲೂ ಲೋಕಾ ದಾಳಿ

ತುಮಕೂರು : ತುಮಕೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯ ಮೇಲೆ ಒಂದು ತಿಂಗಳಿಂದ ನಡೆಯುತ್ತಿರುವ ಲೋಕಾಯುಕ್ತ ದಾಳಿಯ ಮುಂದುವರೆದ ಭಾಗವಾಗಿ ಜ.8ರ ಬುಧವಾರ ಬೆಳಿಗ್ಗೆ ಆರ್ ಟಿ ಓ ಕಚೇರಿ ಏಜೆಂಟ್ ಸತೀಶ್  ಎಂಬಾತನ ದಿಬ್ಬೂರಿನ ಮನೆ ಮತ್ತು ತುಮಕೂರಿನಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿ ಇತ್ತೀಚೆಗೆ ನಿವೃತ್ತರಾಗಿರುವ ಆರ್ ಟಿ ಓ ರಾಜು ಅವರ ಬೆಂಗಳೂರು ಹಾಗೂ ಹೊಸಪೇಟೆಯ  ಮನೆ ಸೇರಿದಂತೆ ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತುಮಕೂರು ಆರ್ ಟಿ ಓ ಆಗಿ ಹಲವು ವರ್ಷ ಸೇವೆ ಸಲ್ಲಿಸಿದ ರಾಜು ನಿವೃತ್ತರಾಗಿದ್ದರು. ಬೆಂಗಳೂರಿನ ಅವರ ಮನೆ ಮತ್ತು ಬೇನಾಮಿ ಹೆಸರಿನಲ್ಲಿ ತಮ್ಮ ಅದಾಯಕ್ಕಿಂತ ಹೆಚ್ಚು ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಐದು ಕಡೆ ದಾಳಿ ನಡೆದಿದೆ. ಅವರಿಗೆ ಆಪ್ತನೆಂದು ಹೇಳಲಾದ ದಿಬ್ಬೂರು ಸತೀಶ್ ರವರ ಮನೆಗೂ ಲೋಕಾಯುಕ್ತ ಇನ್ಸೆಕ್ಟರ್ ಶಿವರುದ್ರಪ್ಪ ಮೇಟಿ ನೇತೃತ್ವದಲ್ಲಿ ದಾಳಿ ನಡೆದಿದೆ.

ಇತ್ತೀಚೆಗಷ್ಟೇ ತುಮಕೂರು ಆರ್ ಟಿ ಓ ಕಚೇರಿಗೆ ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ, ಡಿವೈಎಸ್ಪಿ ಹೆಚ್. ಜಿ. ರಾಮಕೃಷ್ಣ ಮತ್ತು ಸಿಬ್ಬಂದಿ ದಾಳಿ ನಡೆಸಿದ ಸಂದರ್ಭದಲ್ಲಿ ಹಲವು ಅಕ್ರಮಗಳು ಪತ್ತೆಯಾಗಿದ್ದವೆನ್ನಲಾಗಿದೆ. ಹಲವು ಅಕ್ರಮ ದಾಖಲಾತಿ ದೊರೆತಿದ್ದು ಈ ಹಿನ್ನಲೆಯಲ್ಲಿ ಸತೀಶ್ ಮನೆ ಮೇಲೆ ದಾಳಿ ಮಾಡಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸುವೆ.

ಲೋಕಾಯುಕ್ತ ಎಸ್ ಪಿ ಲಕ್ಷ್ಮೀನಾರಾಯಣ್, ಡಿ ವೈ ಎಸ್ ಪಿ ರಾಮಕೃಷ್ಣ ಹೆಚ್. ಜಿ. ಇನ್ಸೆಕ್ಟರ್ ಗಳಾದ ಸಲೀಂ, ಸುರೇಶ್ ಗೌಡ ಮತ್ತು ಸಿಬ್ಬಂದಿ ಬೆಂಗಳೂರಿನ ವಿಡಿಯ ಲೇಔಟ್, ನಾಗರಬಾವಿ ಮನೆಯಲ್ಲಿ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದು ಹೆಚ್ಚಿನ ಮಾಹಿತಿ  ಹೊರಬರಬೇಕಿದೆ.

Leave a Reply

Your email address will not be published. Required fields are marked *