ತುಮಕೂರು:- ಜಿಲ್ಲೆಯಲ್ಲಿ ವಿವಿಧ ಪ್ರತ್ಯೇಕ ಪ್ರಕರಣಗಳಲ್ಲಿ ಒಂದೇ ದಿನ ಮೂವರು ಮಹಿಳೆಯರು ಹಾಗೂ ಓರ್ವ ಬಾಲಕ ಸೇರಿ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಕ್ರೋ ಫೈನಾನ್ಸ್ ಕಾಟಕ್ಕೆ ಓರ್ವ ಮಹಿಳೆ ಸಾವನ್ನಪ್ಪಿದ್ದರೆ, ಕೆರೆಗೆ ಬಿದ್ದು ಮತ್ತಿಬ್ಬರು ಮಹಿಳೆಯರು ಹಾಗೂ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೈಕ್ರೋ ಫೈನಾನ್ಸ್ ಕಾಟಕ್ಕೆ ಮಹಿಳೆ ಬಲಿ:- ರಾಜ್ಯದಲ್ಲಿ ದಿನೇ ದಿನೇ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಬಡವರ ಜೀವ ಹಿಂಡುತ್ತಿದೆ. ಅದೆಷ್ಟೋ ಮಂದಿ ಸಾಲ ವಾಪಸು ಕಟ್ಟಲಾಗದೆ ಸಾವಿನ ದಾರಿ ತುಳಿಯುತ್ತಿದ್ದಾರೆ. ಅಂತಹದ್ದೆ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಪೈನಾನ್ಸ್ ಕಾಟಕ್ಕೆ ಮತ್ತೊಂದು ಜೀವ ಬಲಿಯಾಗಿದೆ.
ಮೈಕ್ರೊಪೈನಾನ್ಸ್ ವಿರುದ್ಧ ಮಹಿಳೆಯೊಬ್ಬಳು ಸೆಲ್ಫಿ ವಿಡಿಯೋ ಮಾಡಿಟ್ಟು, ಹೇಮಾವತಿ ನಾಲೆಗೆ ಹಾರಿರುವ ಘಟನೆ ಜಿಲ್ಲೆಯ ತಿಪಟೂರು ನಗರದ ಗಾಂಧಿನಗರದಲ್ಲಿ ನಡೆದಿದೆ.

ಸಾಧಿಕ ಬೇಗಂ (42) ವಿಡಿಯೊ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದುಬಂದಿದೆ.
ಮೈಕ್ರೋಪೈನಾನ್ಸ್ ವಿರುದ್ಧ ವಿಡಿಯೊ ಮಾಡಿಟ್ಟು ಮನೆಯಿಂದ
ಕಾಣೆಯಾಗಿದ್ದರು. ಪತಿ ಸಯಿದಾ ನಯಾಜ್ ಅವರು ತನ್ನ ಪತ್ನಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಪತ್ತೆಯಾಗಿರಲಿಲ್ಲ. ಆ ಬಳಿಕ ತಿಪಟೂರು ನಗರ ಠಾಣೆಗೆ ದೂರು ನೀಡಿದ್ದರು.
ಹೇಮಾವತಿ ನಾಲೆಯಲ್ಲಿ ಶವವಾಗಿ ಪತ್ತೆ:- ಗುರುವಾರ ಕಿಬ್ಬನಹಳ್ಳಿ ಹೋಬಳಿ ಕಲ್ಲುಶೆಟ್ಟಿಹಳ್ಳಿ ಬಳಿ ಹೇಮಾವತಿ ನಾಲೆಯಲ್ಲಿ ಸಾಧಿಕ ಶವ ಪತ್ತೆಯಾಗಿದೆ. ಈ ಘಟನೆ ಬೆನ್ನಲ್ಲೇ ಕಿಬ್ಬನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.
ಯಾವ ಫೈನಾನ್ಸ್ ಗಳಿಂದ ಎಷ್ಟು ಸಾಲ ಮಾಡಿದ್ದಾರೆ ಎಂಬ ತನಿಖೆ ಆರಂಭಿಸಿದ್ದಾರೆ. ಸಾಲಗಾರರಿಂದ ಟೆನ್ಷನ್ ಆಗ್ತಿದೆ. ಜೀವನವೇ ಬೇಜಾರ್ ಆಗ್ಬಿಟ್ಟಿದೆ. ಮಗನನ್ನ ಚೆನ್ನಾಗಿ ನೋಡ್ಕೊಳಿ ಎಂದು ಸಾಧಿಕ ಅವರು ಸೆಲ್ಫಿ ವಿಡಿಯೊ ಮಾಡಿಟ್ಟಿದ್ದಾರೆ.
ವಿದ್ಯಾರ್ಥಿ ಆತ್ಮಹತ್ಯೆ:- ನೇಣುಬಿಗಿದುಕೊಂಡು 7 ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸರ್ವೊದಯ ಸ್ಕೂಲ್ ನಲ್ಲಿ 7 ನೇ ತರಗತಿ ಓದುತ್ತಿದ್ದ ತ್ರಿಶಾಲ್ (13) ಮೃತ ದುರ್ದೈವಿಯಾಗಿದ್ದಾನೆ. ನಗರದ ವಿಜಯನಗರದ 2 ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ತ್ರಿಶಾಲ್ ಬಿಜೆಪಿ ಕಾರ್ಯಕರ್ತೆ ಶಂಕುತಲಾ ನಟರಾಜ್ ಪುತ್ರನಾಗಿದ್ದಾನೆ. ತನ್ನ ತಾಯಿ ಶಂಕುತಲಾ ಜೊತೆ ವಿಜಯನಗರದ 2 ನೇ ಮುಖ್ಯ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಶಾಲಾ ಸಮವಸ್ತ್ರದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡೇತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಪಾರಿವಾಳದ ಬೆಟ್ಟಿಂಗ್ ವಿಚಾರಕ್ಕೆ ಸ್ನೇಹಿತರ ಜೊತೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಗೆ ಹಾರಿ ತಾಯಿ,ಮಗಳು ಆತ್ಮಹತ್ಯೆ:- ಕೆರೆಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಅದಲೆಗೆರೆ ಕೆರೆಯಲ್ಲಿ ನಡೆದಿದೆ.
ವಿರೂಪಾಕ್ಷಿಪುರದ ನಿವಾಸಿಯಾದ ತಾಯಿ ಪ್ರೇಮ್ ಕುಮಾರಿ (50), ಮಗಳು ಪೂರ್ಣಿಮಾ (30) ಮೃತರಾಗಿದ್ದಾರೆ.
ಬುದ್ಧಿಮಾಂದ್ಯಳಾಗಿದ್ದ ಪುರ್ಣಿಮಾಗೆ ಇನ್ನು ಮದುವೆ ಆಗಿರಲಿಲ್ಲ. ಗುರುವಾರ ಮಧ್ಯಾಹ್ನ ತೋಟಕ್ಕೆ ಎಮ್ಮೆ ಮೇಯಿಸಲು ತೆರಳಿದ್ದ ತಾಯಿ ಮಗಳು ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಮಾನಸಿಕ ಖಿನತ್ತೆಗೊಳಗಾಗಿ ಸಾವು ಶಂಕೆ ವ್ಯಕ್ತವಾಗಿದೆ. ಗುರುವಾರ ರಾತ್ರಿಯಿಡೀ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಶುಕ್ರವಾತ ಬೆಳಗ್ಗೆ ತಾಯಿ ಮಗಳ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿತ್ತು.ಬಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಕೆರೆಯಿಂದ ಮೃತದೇಹಗಳನ್ನ ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದು, ಶವಗಾರಕ್ಕೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.