ಬೆಂಗಳೂರು || ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಯಾವಾಗ?

ಬೆಂಗಳೂರು || ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಯಾವಾಗ?

ಬೆಂಗಳೂರು : ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಕರಗ ಶಕ್ತ್ಯುತ್ಸವಕ್ಕೆ ಇನ್ನೇನು ಕೆಲವೇ ತಿಂಗಳು ಬಾಕಿ ಇವೆ. ಈ ಹಿನ್ನೆಲೆ ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ಬರುವ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಅದರಂತೆ ಏಪ್ರಿಲ್ 12ರಂದು ಕರಗ ಶಕ್ತ್ಯೋತ್ಸವ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 4ರಿಂದ 14ರವರೆಗೆ ಬೆಂಗಳೂರು ಕರಗ ಮಹೋತ್ಸವದ ಧಾರ್ಮಿಕ ಆಚರಣೆಗಳು ನಡೆಯಲಿವೆ.

ಈ ಬಾರಿಯ ಬೆಂಗಳೂರು ಕರಗ ಮಹೋತ್ಸವದ ಸಂಬಂಧ ಸೋಮವಾರ ಸಭೆ ನಡೆದಿದೆ. ಬಾರಿಯೂ ಕೂಡ ಕರಗದ ಪೂಜಾರಿ ಎ.ಜ್ಞಾನೇಂದ್ರ ಅವರೇ ವಿಶ್ವವಿಖ್ಯಾತ ಕರಗ ಹೊರಲಿದ್ದಾರೆ. ಜ್ಞಾನೇಂದ್ರ ಅವರನ್ನು ಒಮ್ಮತದಿಂದ ಈ ಬಾರಿಯ ಕರಗ ಹೊರಲು ಆಯ್ಕೆ ಮಾಡಲಾಗಿದೆ. ಹಲವು ವರ್ಷಗಳಿಂದ ಜ್ಞಾನೇಂದ್ರ ಅವರು ಕರಗ ಹೊರುತ್ತಿದ್ದು, ಮೂಲಗಳ ಪ್ರಕಾರ ಇವರು ಕರಗ ಹೊರುವುದು ಇದೇ ಕೊನೆಯ ಬಾರಿ ಎಂದೂ ಹೇಳಲಾಗುತ್ತಿದೆ.

ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್, ಖಜಾಂಚಿ ಬಾಲಕೃಷ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಮರನಾರಾಯಣ, ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಸೇರಿದಂತೆ ಸಮುದಾಯದ ಪ್ರಮುಖರು ಈ ಸಭೆಯಲ್ಲಿ ಸೇರಿದ್ದರು. ಹಾಗಾಗಿ ಎಲ್ಲರೂ ಒಮ್ಮತದಿಂದ ಜ್ಞಾನೇಂದ್ರ ಅವರೇ ಈ ಬಾರಿಯ ಕರಗ ಹೊರಲಿ ಎಂದು ನಿರ್ಧಾರ ತಿಳಿಸಿದ್ದಾರೆ. ಬೆಂಗಳೂರಿನ ತಿಗಳರ ಪೇಟೆಯಲ್ಲಿರುವ ಶ್ರೀಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಸುಮಾರು ಹತ್ತು ದಿನಗಳಿಗೂ ಹೆಚ್ಚಿನ ಕಾಲ ಕರಗದ ಆಚರಣೆಗಳು ನಡೆಯುತ್ತವೆ. ಲಕ್ಷಾಂತರ ಮಂದಿ ಜನರು ಈ ಬೆಂಗಳೂರು ಕರಗವನ್ನು ಕಣ್ತುಂಬಿಕೊಳ್ಳಲು ತಡರಾತ್ರಿಯಲ್ಲೂ ಜಮಾಯಿಸುತ್ತಾರೆ. ಈ ಕರಗಕ್ಕೆ ಭಾರಿ ಐತಿಹ್ಯವಿದ್ದು, ಇದರಿಂದಲೇ ಜಗದ್ವಿಖ್ಯಾತಿಯೂ ಆಗಿದೆ. ಏಪ್ರಿಲ್ 4ರಿಂದ ಕರಗದ ಆಚರಣೆಗಳು ಶುರುವಾಗಲಿವೆ. ಮೊದಲಿಗೆ ರಥೋತ್ಸವ ಧ್ವಜಾರೋಹಣ ನೆರವೇರಲಿದೆ. ಬಳಿಕ ಪ್ರತಿದಿನವೂ ವಿಶೇಷ ಪೂಜೆ, ಆರತಿ ದೀಪಗಳು, ಹಸೀ ಕರಗ, ಪೊಂಗಲ್ ಸೇವೆ, ಕರಗ ಶಕ್ತ್ಯುತ್ಸವ- ಧರ್ಮರಾಯಸ್ವಾಮಿ ಮಹಾರಥೋತ್ಸವ, ಗಾವು ಶಾಂತಿ, ವಸಂತೋತ್ಸವ, ಧ್ವಜಾರೋಹಣದ ಮೂಲಕ ಕರಗ ಮಹೋತ್ಸವವು ಸಂಪನ್ನಗೊಳ್ಳಲಿದೆ.

ವಹ್ನಿಕುಲ ತಿಗಳ ಕ್ಷತ್ರಿಯ ಸಮುದಾಯದವರು ಈ ಆಚರಣೆಗಳನ್ನು ಶತಮಾನದಿಂದ ಆಚರಿಸಿಕೊಂಡು ಬಂದಿದ್ದಾರೆ. ದ್ರೌಪದಿದೇವಿ ಕರಗ ಶಕ್ತ್ಯೋತ್ಸವವೇ ಬೆಂಗಳೂರು ಕರಗ ಎಂದು ಪ್ರಖ್ಯಾತಿ ಪಡೆದಿದೆ. ಈ ಮಹೋತ್ಸವದ ಅಂಗವಾಗಿ ತಿಗಳರಪೇಟೆ, ನಗರ್ತಪೇಟೆ, ಕಬ್ಬನ್ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆ ಸೇರಿದಂತೆ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಹಬ್ಬದ ವಾತಾವರಣ ಮನೆ ಮಾಡಿರುತ್ತದೆ. ಈ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡ ಕರಗವನ್ನು ಕಣ್ತುಂಬಿಕೊಳ್ಳಲು ಜನ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುತ್ತಾರೆ. ಕಬ್ಬನ್ ಪಾರ್ಕ್ ಬಳಿ ಇರುವ ಸಂಪಂಗಿ ಕೆರೆಯಲ್ಲಿ ಹಸಿ ಕರಗದ ಪೂಜೆ ನಡೆದು ಶಕ್ತಿಪೀಠದಿಂದ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಹಸಿ ಕರಗವನ್ನು ಜ್ಞಾನೇಂದ್ರ ಮೆರಣಿಗೆಯಲ್ಲಿ ಹೊತ್ತು ತರಲಿದ್ದಾರೆ.

ಸಮುದಾಯದಿಂದ ಎಲ್ಲ ವಯೋಮಾನದ ವೀರಕುಮಾರರು ಧರ್ಮರಾಯ ಸ್ವಾಮಿ ದೇಗುಲದಲ್ಲೇ ಬೀಡುಬಿಡುತ್ತಾರೆ. ಕರಗ ಮಹೋತ್ಸವದ ವೇಳೆ ಕರಗ ಹೊತ್ತವರಿಗೆ ರಕ್ಷಕರಾಗಿ ವೀರಕುಮಾರರು ಸಂಚರಿಸುತ್ತಾರೆ. ಅಂತಿಮವಾಗಿ ಕರಗ ಕೆಳಗಿಡುವತನಕವೂ ಇವರೇ ಭದ್ರತೆಯ ಹೊಣೆ ಹೊತ್ತಿರುತ್ತಾರೆ. ಈ ಬಾರಿಯ ಬೆಂಗಳೂರು ಕರಗ ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *