ತುಮಕೂರು || ತುಮಕೂರಿಗೆ ನಮ್ಮ ಮೆಟ್ರೋ, ಸಚಿವರು ಕೊಟ್ಟ ಅಪ್ಡೇಟ್

ತುಮಕೂರು || ತುಮಕೂರಿಗೆ ನಮ್ಮ ಮೆಟ್ರೋ, ಸಚಿವರು ಕೊಟ್ಟ ಅಪ್ಡೇಟ್

ತುಮಕೂರು: ತುಮಕೂರು ನಗರಕ್ಕೆ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಕರ್ನಾಟಕ ಸರ್ಕಾರವು ಈ ಕುರಿತು ಚಿಂತಿಸಿದೆ. ಸದ್ಯ ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲುಗಳು ತುಮಕೂರು ರಸ್ತೆಯ ಮಾದಾವರ ತನಕ ಸಂಚಾರವನ್ನು ನಡೆಸುತ್ತಿವೆ. ತುಮಕೂರು ಭಾಗದ ಜನರು, ಜನಪ್ರತಿನಿಧಿಗಳು ಭವಿಷ್ಯದಲ್ಲಿ ತುಮಕೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕೊರಟಗೆರೆ ಕ್ಷೇತ್ರದ ಶಾಸಕ, ಗೃಹ ಸಚಿವ ಡಾ. ಜಿ. ಪರಮೇಶ್ವರ ನಮ್ಮ ಮೆಟ್ರೋ ರೈಲನ್ನು ತುಮಕೂರಿಗೆ ವಿಸ್ತರಣೆ ಮಾಡುವ ಕುರಿತು ಮಾತನಾಡಿದ್ದಾರೆ. ಬೆಂಗಳೂರು ನಗರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯಲ್ಲಿ ಸ್ಥಾಪಿಸಿದರೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

ತುಮಕೂರಿಗೆ ಮೆಟ್ರೋ ಸೇವೆ: ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಡಾ. ಜಿ. ಪರಮೇಶ್ವರ, “ನಮ್ಮ ಮೆಟ್ರೋ ಹಸಿರು ಮಾರ್ಗವನ್ನು ತುಮಕೂರು ತನಕ ವಿಸ್ತರಣೆ ಮಾಡುವ ಕುರಿತು ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದೆ. ಹೈದರಾಬಾದ್ ಮೂಲದ ಕಂಪನಿ ವರದಿಯನ್ನು ತಯಾರು ಮಾಡುತ್ತಿದೆ” ಎಂದರು.

“ವರದಿ ಸಿದ್ಧವಾದ ಬಳಿಕ ಯೋಜನೆ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಗುತ್ತದೆ. ಸದ್ಯ ರೇಷ್ಮೆ ಮಂಡಳಿಯಿಂದ ಮಾದಾವರ ತನಕ ಹಸಿರು ಮಾರ್ಗದ ಮೆಟ್ರೋ ಸೇವೆ ಇದೆ. ತುಮಕೂರು ತನಕ ಸೇವೆ ವಿಸ್ತರಣೆಗೊಂಡರೆ ಹೆದ್ದಾರಿ ಮೇಲಿನ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ” ಎಂದು ಹೇಳಿದರು.

ಮಾದಾವರದಿಂದ ತುಮಕೂರು ನಗರಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು 52.41 ಕಿ. ಮೀ. ಮಾರ್ಗವನ್ನು ನಿರ್ಮಾಣ ಮಾಡಬೇಕಿದೆ. ಕರ್ನಾಟಕ ಸರ್ಕಾರ ಈ ಯೋಜನೆಗೆ ಒಪ್ಪಿಗೆ ಸಿಕ್ಕಿದರೆ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಕೈಗೊಳ್ಳಲು ಚಿಂತನೆ ನಡೆಸಿದೆ.

ಸದ್ಯದ ಮಾಹಿತಿ ಪ್ರಕಾರ ತುಮಕೂರಿಗೆ ಮೆಟ್ರೋ ವಿಸ್ತರಣೆ ಯೋಜನೆಗೆ ಒಪ್ಪಿಗೆ ಸಿಕ್ಕಿದರೆ 19 ನಿಲ್ದಾಣಗಳು ಮಾರ್ಗದಲ್ಲಿ ಬರಲಿವೆ. ಮೊದಲ ಹಂತದಲ್ಲಿ ಮಾದಾವರದಿಂದ ನೆಲಮಂಗಲ ತನಕ ಮೆಟ್ರೋ ವಿಸ್ತರಣೆಯಾಗಲಿದೆ. ಡಿಪಿಆರ್ ಫೆಬ್ರವರಿಯಲ್ಲಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆಯಾಗುವ ನಿರೀಕ್ಷೆ ಇದ್ದು, ಬಳಿಕ ಯೋಜನೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಕರ್ನಾಟಕ ಸರ್ಕಾರ ಬಜೆಟ್ನಲ್ಲಿ ತುಮಕೂರಿಗೆ ಮೆಟ್ರೋ ಸೇವೆ ವಿಸ್ತರಣೆ ಮಾಡುವ ಘೋಷಣೆ ಮಾಡಿದೆ. ಸದ್ಯ ನಮ್ಮ ಮೆಟ್ರೋ ಕಾಮಗಾರಿ ಪೂರ್ಣಗೊಂಡಿರುವ ಆರ್. ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭವಾಗಬೇಕಿದೆ. ಬಳಿಕ ಬೆಂಗಳೂರು ನಗರದಲ್ಲಿ ಘೋಷಣೆ ಮಾಡಿರುವ ಗುಲಾಬಿ, ನೀಲಿ ಮಾರ್ಗಗಳು ಪೂರ್ಣವಾಗಬೇಕಿದೆ. ಕೆಂಪು, ಕಿತ್ತಲೆ ಮಾರ್ಗ ನಿರ್ಮಾಣಕ್ಕೂ ಒಪ್ಪಿಗೆ ಸಿಕ್ಕಿದೆ. ಈ ಎಲ್ಲಾ ಮಾರ್ಗಗಳ ಬಳಿಕ ಬೆಂಗಳೂರು-ತುಮಕೂರು ನಡುವೆ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸರ್ಕಾರ ಮುಂದಾಗಬಹುದು ಎಂದು ಅಂದಾಜಿಸಲಾಗಿದೆ.

ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಅತಿ ಹೆಚ್ಚು ವಾಹನ ದಟ್ಟಣೆಯ ಮಾರ್ಗವಾಗಿದೆ. ಉಭಯ ನಗರಗಳ ನಡುವೆ ಮೆಟ್ರೋ ಸಂಚಾರ ಆರಂಭವಾದರೆ ಹೆದ್ದಾರಿ ಮೇಲಿನ ಒತ್ತಡ ಕಡಿಮೆಯಾಗಲಿದೆ. ಪ್ರತಿದಿನ ರೈಲು, ಬಸ್ ಮೂಲಕ ಎರಡು ನಗರದ ನಡುವೆ ಸಂಚಾರ ನಡೆಸುವ ಜನರಿಗೂ ಅನುಕೂಲವಾಗಲಿದೆ. ಸದ್ಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಮೆಟ್ರೋ ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾಪವಿದ್ದು, ಮಾದಾವರದಿಂದ ಒಟ್ಟು 19 ನಿಲ್ದಾಣಗಳು ಇರಲಿವೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಮಾಕಳಿ, ದಾಸನಪುರ, ನೆಲಮಂಗಲ, ನೆಲಮಂಗಲ ಬಸ್ ನಿಲ್ದಾಣ, ಬೂದಿಹಾಳ, ಟಿ. ಬೇಗೂರು, ಕುಲುವನಹಳ್ಳಿ ನಿಲ್ದಾಣಗಳು ಬರುತ್ತವೆ. ಸೋಂಪುರ ಕೈಗಾರಿಕಾ ಪ್ರದೇಶ, ಡಾಬಸ್ಪೇಟೆ, ನಲ್ಲಯ್ಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ, ಪಂಡಿತನಹಳ್ಳಿ, ಕ್ಯಾತ್ಸಂದ್ರ, ಬಟವಾಡಿ, ತುಮಕೂರು ವಿವಿ ಮತ್ತು ತುಮಕೂರು ಬಸ್ ನಿಲ್ದಾಣ ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಲಿವೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *