ಮೈಸೂರು || ನೆಚ್ಚಿನ ಹೋಟೆಲ್ಗೆ ತೆರಳಿ ಬೆಣ್ಣೆದೋಸೆ ಸವಿದ ಸಿಎಂ ಸಿದ್ದರಾಮಯ್ಯ

ಮೈಸೂರು || ನೆಚ್ಚಿನ ಹೋಟೆಲ್ಗೆ ತೆರಳಿ ಬೆಣ್ಣೆದೋಸೆ ಸವಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಸುತ್ತ ಮುಡಾ ಕೇಸ್ ಸುತ್ತಿಕೊಂಡಿದೆ. ಈ ರಾಜಕೀಯ ಒತ್ತಡದ ನಡುವೆಯೂ ಅವರು ತಮ್ಮ ನೆಚ್ಚಿನ ಹೋಟೆಲ್ಗೆ ತೆರಳಿ ತಮಗೆ ಇಷ್ಟವಾದ ಖಾದ್ಯದ ರುಚಿ ಸವಿದಿದ್ದಾರೆ. ಮೈಸೂರಿನಲ್ಲಿ ಪ್ರಸಿದ್ಧಿ ಪಡೆದಿರುವ ಅಗ್ರಹಾರದ ಮೈಲಾರಿ ಹೋಟೆಲ್ಗೆ ತೆರಳಿ ಅವರು ಬೆಣ್ಣೆ ಮಸಾಲೆ ದೋಸೆ ತಿಂದಿದ್ದಾರೆ. ಇಂದು ಮೈಸೂರಿನ ವಿವಿಧೆಡೆ ಸಂಚರಿಸುವ ಸಿಎಂ ಸಿದ್ದರಾಮಯ್ಯ ಅವರು ಬಿಡುವು ಮಾಡಿಕೊಂಡು ಮೈಲಾರಿ ಹೋಟೆಲ್ಗೆ ಭೇಟಿ ನೀಡಿದ್ದಾರೆ.

ಈ ಹಿಂದೆಯೂ ಅವರು ಸಾಕಷ್ಟು ಬಾರಿ ಮೈಲಾರಿ ಹೋಟೆಲ್ನಲ್ಲಿ ಸಿಗುವ ಬೆಣ್ಣೆ ಮಸಾಲೆ ದೋಸೆ ಬಗ್ಗೆ ಮಾತನಾಡಿದ್ದರು. ತಮಗೆ ಇಷ್ಟವಾದ ಖಾದ್ಯಗಳಲ್ಲಿ ಈ ಬೆಣ್ಣೆ ದೋಸೆ ಕೂಡ ಒಂದು ಎಂದು ಹೇಳಿದ್ದರು. ಹಾಗಾಗಿ ಅವರು ಮೈಸೂರಿಗೆ ಹೋದಾಗಲೆಲ್ಲ ಬಿಡುವಾದಾಗ ಮೈಲಾರಿ ಹೋಟೆಲ್ಗೆ ಹೋಗಿ ದೋಸೆ ಸವಿದು ಬರುತ್ತಿದ್ದರು.

ಇಂದು ಬೆಳಿಗ್ಗೆ ಮೈಸೂರಿನಲ್ಲಿ ಅವರು ತಮ್ಮ ಬೆಂಗಾವಲು ವಾಹನಗಳಿಲ್ಲದೆ ಖಾಸಗಿ ವಾಹನದಲ್ಲಿ ತೆರಳಿದ್ದರು. ಬಳಿಕ ಸಾಕಷ್ಟು ಸಮಯದ ನಂತರ ಅವರು ವಾಪಸ್ ಆಗಿದ್ದರು. ನಂತರ ಅವರ ನಿವಾಸದ ಬಳಿ ಸಿಎಂ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಅಲ್ಲಿಂದ ಹೊರಟು ನಂತರ ಸೀದಾ ಮೈಸೂರಿನ ಅಗ್ರಹಾರದಲ್ಲಿರುವ ಮೈಲಾರಿ ದೋಸೆ ಹೋಟೆಲ್ಗೆ ತೆರಳಿ ದೋಸೆ ಸವಿದರು. ಸಿದ್ದರಾಮಯ್ಯ ಅವರೊಂದಿಗೆ ಪುತ್ರ ಯತೀಂದ್ರ ಕೂಡ ಇದ್ದರು. ಸಿದ್ದರಾಮಯ್ಯ ಅವರು ಬಂದ ವಿಚಾರ ತಿಳಿದು ಮೈಲಾರಿ ಹೋಟೆಲ್ ಬಳಿ ಜನ ಜಮಾಯಿಸಿದ್ದರು. ರಾಜಕೀಯ ಒತ್ತಡ, ಮುಡಾ ಕೇಸ್ ಜಂಜಾಟದ ನಡುವೆಯೂ ಸಿದ್ದರಾಮಯ್ಯ ಅವರು ಕೂಲ್ ಆಗಿ ದೋಸೆ ಸವಿದಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ಪುತ್ರ ವಿಧಾನ ಪರಿಷತ್ ಸದಸ್ಯ ಯತೀಂದ್ರ, ಶಾಸಕ ಎ.ಆರ್.ಕೃಷ್ಣಮೂರ್ತಿ, ಡಿ.ತಿಮ್ಮಯ್ಯ, ಸಂದೇಶ್ ನಾಗರಾಜು ಸೇರಿ ಹಲವರು ಸಾಥ್ ನೀಡಿದರು. ಬಳಿಕ ತಮ್ಮ ಸ್ನೇಹಿತ ಶ್ರೀನಿವಾಸನ್ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಇತ್ತೀಚಿಗೆ ಹೃದಯಘಾತದಿಂದ ನಿಧನರಾದ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ನಗರಾಧ್ಯಕ್ಷ ಟಿ.ಎಸ್.ರವಿಶಂಕರ್ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮುಡಾ ಕೇಸ್ ಬಗ್ಗೆ ಸಿಎಂ ಏನಂದ್ರು?: ಮೈಸೂರಿನಲ್ಲಿ ಮುಡಾ ಕೇಸ್ ಬಗ್ಗೆ ಮಾತನಾಡಿರುವ ಅವರು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವರದಿ ರಾಜಕೀಯ ಪ್ರೇರಿತ ಎಂದಿದ್ದಾರೆ. ಹಣದ ಅಕ್ರಮ ವರ್ಗಾವಣೆ ಆಗಿರುವ ಬಗ್ಗೆ ಯಾವುದೇ ಸಾಕ್ಷಿಯಿಲ್ಲ. ಮುಡಾದ ಮಾಜಿ ಆಯುಕ್ತ ನಟೇಶ್ ಅವರ ಮೇಲೆ ಇಡಿಯವರ ಕ್ರಮ ಕಾನೂನುಬಾಹಿರ ಮತ್ತು ಮನಿಲ್ಯಾಂಡ್ರಿಂಗ್ ಅಗಿಲ್ಲ ಎಂದು ಹೈಕೋರ್ಟ್ ಹೇಳಿದೆ ಎಂದಿದ್ದಾರೆ. ಇ.ಡಿಯ ಸಂಪೂರ್ಣ ವರದಿಯನ್ನು ಮಾಧ್ಯಮದಲ್ಲಿ ಬಿಡುಗಡೆ ಮಾಡುವ ಮೂಲಕ ಸಂಪೂರ್ಣ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ರಾಜಕೀಯಗೊಳಿಸಿದ್ದಾರೆ. ಸರ್ಕಾರ ಹಾಗೂ ಮುಖ್ಯಮಂತ್ರಿ ಹುದ್ದೆಯ ವರ್ಚಸ್ಸಿಗೆ ಕುಂದು ತರುವಂತಹ ಪ್ರಯತ್ನ ನಡೆಯುತ್ತಿದೆ. ನಾನು ಕರ್ನಾಟಕದ ಸಿಎಂ ಆಗಿರುವ ಕಾರಣದಿಂದ ನನ್ನ ತೇಜೋವಧೆ ಮಾಡಲಾಗುತ್ತಿದೆ. ನನ್ನ ಶ್ರೀಮತಿಯವರಿಗೆ ಇಡಿ ನೋಟಿಸ್ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ. ನನ್ನ ವರ್ಚಸ್ಸಿಗೆ ಭಂಗ ತರಬೇಕೆಂಬ ದುರುದ್ದೇಶದಿಂದ, ಇಂತಹ ಕುಕೃತ್ಯಗಳನ್ನು ಮಾಡಲಾಗುತ್ತಿದೆ. ಆದರೆ, ಅವರ ಪ್ರಯತ್ನಗಳು ಸಫಲವಾಗಲು ಸಾಧ್ಯವಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *