ತುಮಕೂರು: ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಕೊರಟಗೆರೆ (Koratgere) ಕ್ಷೇತ್ರಕ್ಕಿಂತ ತುಮಕೂರು ನಗರ ಕ್ಷೇತ್ರದ ಮೇಲೆ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ. ಬರಪೂರ ಅನುದಾನಗಳನ್ನು ತಂದು ಅಭಿವೃದ್ಧಿ ಮಾಡುವಲ್ಲಿ ಗಮನ ಕೇಂದ್ರೀಕೃತಗೊಳಿಸಿದ್ದಾರೆ. ಜಿ.ಪರಮೇಶ್ವರ್ ಅವರ ಈ ಅಭಿವೃದ್ಧಿ ಹಿಂದೆ ಹೊಸ ರಾಜಕೀಯ ಲೆಕ್ಕಾಚಾರ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ತುಮಕೂರು (Tumakuru) ನಗರ ಕ್ಷೇತ್ರದ ಶಾಸಕ ಜ್ಯೋತಿಗಣೇಶ್ ಗೈರಿನಲ್ಲಿ ಸಚಿವ ಜಿ.ಪರಮೇಶ್ವರ್ ಅಭಿವೃದ್ಧಿ ಕಾರ್ಯದ ಬಗ್ಗೆ ಹೇಳುತ್ತಿದ್ದಾರೆ. ತಮ್ಮ ಸ್ವಕ್ಷೇತ್ರ ಕೊರಟಗೆರೆಗಿಂತ ತುಮಕೂರು ನಗರ ಕ್ಷೇತ್ರದ ಬಗ್ಗೆ ಸಚಿವರು ಹೆಚ್ಚು ಮುತುವರ್ಜಿ ವಹಿಸುತಿದ್ದಂತೆ ಕಾಣುತ್ತಿದೆ. ಈ ಕಾಳಜಿ ಹಿಂದೆ ಹೊಸ ರಾಜಕೀಯ ಲೆಕ್ಕಾಚಾರ ಇದೆ ಎಂಬ ವಿಶ್ಲೇಷಣೆ ಶುರುವಾಗಿದೆ.
ಜಿ.ಪರಮೇಶ್ವರ್ರ ಹೊಸ ರಾಜಕೀಯ ಲೆಕ್ಕಾಚಾರ ಏನು ಅಂತ ನೋಡುವುದಾದರೆ, 2028ರ ವಿಧಾನಸಭಾ ಚುನಾವಣಾ ವೇಳೆಗೆ ಕ್ಷೇತ್ರಗಳ ಮೀಸಲು ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದೆ. ಕೊರಟಗೆರೆ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರ ಆಗುವ ಸಾಧ್ಯತೆ ಇದೆ. ತುಮಕೂರು ನಗರ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಉಳಿದರೂ ಇಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತಾವು ನಗರದಿಂದಲೇ ಸ್ಪರ್ಧಿಸಬೇಕು ಅನ್ನೋದು ರಾಜಕೀಯ ಲೆಕ್ಕಾಚಾರ ಇದೆ ಎನ್ನಲಾಗ್ತಿದೆ. ತುಮಕೂರು ನಗರ ಕ್ಷೇತ್ರದಲ್ಲಿ 50 ಸಾವಿರ ಮುಸ್ಲಿಂ ಮತ, 20 ಸಾವಿರ ಇತರ ಅಲ್ಪಸಂಖ್ಯಾತ ಮತ ಕಾಂಗ್ರೆಸ್ ಫಿಕ್ಸ್ ಆಗಿದೆ. ಜಿ.ಪರಮೇಶ್ವರ್ ಕಾಂಗ್ರೆಸ್ನಿಂದ ಸ್ಪರ್ಧಿಸಿದರೆ ದಲಿತ ಹಾಗೂ ಹಿಂದುಳಿದ ಮತಗಳು ಕ್ರೋಢೀಕರಣ ಆಗಲಿದೆ ಎಂಬ ಹೊಸ ಗಣಿತ ಗುರುವಾಗಿದೆ. ಇದೇ ದೂರದೃಷ್ಟಿಯಿಂದ ಜಿ.ಪರಮೇಶ್ವರ್ ತುಮಕೂರು ನಗರ ಕ್ಷೇತ್ರ ಅಭಿವೃದ್ಧಿಗೆ ಗಮನ ಕೊಟ್ಟಿದ್ದಾರೆ ಎನ್ನಲಾಗಿದೆ.
ಒಂದು ಕಡೆ ಇದೇ ಅವಧಿಯಲ್ಲಿ ಸಿಎಂ ಆಗಲೇಬೇಕು ಎಂದು ಪರಂ ಬಣ ಹೈಕಮಾಂಡ್ ಮಟ್ಟದಲ್ಲಿ ಎಡತಾಕುತ್ತಿದೆ. ಈ ಬಾರಿ ಚಾನ್ಸ್ ತಪ್ಪಿದ್ರೂ ಮುಂದಿನ ಬಾರಿ ಗೆದ್ದು ಸಿಎಂ ಕುರ್ಚಿ ಹಿಡಿಯೋಣ ಎಂಬ ಹಂಬಲದಿಂದ ತುಮಕೂರು ನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.