ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಈ ಕ್ರಮಕ್ಕಾಗಿ ಸರ್ಕಾರಗಳ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಮತ್ತೊಂದು ಬೆಲೆ ಏರಿಕೆ ಶಾಕ್ ಕೊಡಲು ಸಜ್ಜಾಗಿದೆ. ಜನರಿಗೆ ದಿನನಿತ್ಯ ಬಳಕೆಗೆ ಬೇಕಾಗುವ ಮತ್ತೊಂದು ಅಗತ್ಯತೆಯ ಬೆಲೆ ಏರಿಸಲು ಸರ್ಕಾರ ಹೊರಟಿದ್ದು, ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಅಂದಹಾಗೆ ರಾಜ್ಯ ಸರ್ಕಾರವು ಇತ್ತೀಚೆಗೆ ಸರ್ಕಾರಿ ಬಸ್ ಟಿಕೆಟ್ ದರ ಏರಿಸಿ ಪ್ರಯಾಣಿಕರಿಗೆ ಶಾಕ್ ಕೊಟ್ಟಿತ್ತು. ಇದರ ಬಿಸಿ ತಗ್ಗುವ ಮುನ್ನವೇ ನಮ್ಮ ಮೆಟ್ರೋ ಪ್ರಯಾಣ ದರ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದೀಗ ಮತ್ತೊಂದು ಬೆಲೆ ಏರಿಕೆ ಶಾಕ್ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ಮೆಟ್ರೋ ಬೆಲೆ ಏರಿಕೆ ಬಳಿಕ ಇದೀಗ ನೀರಿನ ಬೆಲೆ ಏರಿಕೆ ಬಗ್ಗೆ ಸರ್ಕಾರ ಸುಳಿವು ನೀಡಿದೆ.
ಕಳೆದ 11 ವರ್ಷಗಳಿಂದ ರಾಜ್ಯದಲ್ಲಿ ನೀರಿನ ಬೆಲೆ ಒಂದು ರೂಪಾಯಿ ಕೂಡ ಹೆಚ್ಚಾಗಿಲ್ಲ. ಹಾಗಾಗಿ ಈಗ ನೀರಿನ ಬೆಲೆ ಹೆಚ್ಚಿಸಬೇಕು ಎಂದು ನನ್ನ ಕಚೇರಿಗೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಜಲಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ನೀರಿನ ದರ ಏರಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಹಿಂದೆಯೂ ನೀರಿನ ದರ ಏರಿಕೆ ಬಗ್ಗೆ ಸುಳಿವು ಕೊಟ್ಟಿದ್ದರು. ಹೀಗಾಗಿ ಜಲಮಂಡಳಿಯು ದರ ಏರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಸರ್ಕಾರದ ಮುಂದೆ ನಾಲ್ಕು ಆಯ್ಕೆಗಳನ್ನು ಇಟ್ಟಿದ್ದು, ನಾಲ್ಕು ಬಗೆಯ ದರಗಳನ್ನು ನಿಗದಿ ಮಾಡುವಂತೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ. ಈ ಬಗ್ಗೆ ಸರ್ಕಾರ ಕೂಡ ಅಂತಿಮವಾಗಿ ದರ ಏರಿಸಲು ಫಿಕ್ಸ್ ಆಗಿದ್ದು, ದರ ಎಷ್ಟು ಏರಿಕೆಯಾಗಲಿದೆ ಎಂಬುದು ಸದ್ಯದಲ್ಲೇ ಬಹಿರಂಗವಾಗಲಿದೆ.
ದರ ಏರಿಕೆ ಬಗ್ಗೆ ಮಾತನಾಡಿದ್ದ ಡಿಕೆ ಶಿವಕುಮಾರ್ ಅವರು ಎಲ್ಲವೂ ಉಚಿತವಾಗಿ ಕೊಟ್ಟರೆ ಸರ್ಕಾರ ಹೇಗೆ ನಡೆಯಬೇಕು? ಎನ್ನುವ ಮೂಲಕ ದರ ಏರಿಕೆ ಬಗ್ಗೆ ಸೂಚನೆ ನೀಡಿದ್ದರು. ಇನ್ನು ಮುಂದೆ ಕಾವೇರಿ ನೀರನ್ನು ಉಚಿತವಾಗಿ ಕೊಡಲು ಆಗಲ್ಲ. ಒಂದು ಪೈಸೆಯಾದರೂ ಜನರು ಶುಲ್ಕ ಕಟ್ಟಬೇಕು. ಸರ್ಕಾರಿ ನೌಕರರು ಕೂಡ ವೇತನ ಹೆಚ್ಚು ಮಾಡುವಂತೆ ಕೇಳುತ್ತಿದ್ದಾರೆ. ಹೀಗಾಗಿ ಎಲ್ಲವನ್ನೂ ಸರಿದೂಗಿಸಬೇಕಾಗಿದೆ ಎಂದು ದರ ಏರಿಕೆಯನ್ನು ಖಚಿತಪಡಿಸಿದ್ದರು. ಜಲಮಂಡಳಿ ಉಳಿಯಬೇಕಾದರೆ ನೀರಿನ ದರ ಏರಿಕೆ ಮಾಡುವುದು ಅನಿವಾರ್ಯ. ಕಳೆದ 11 ವರ್ಷಗಳಿಂದ ಕುಡಿಯುವ ನೀರಿನ ದರ ಏರಿಕೆ ಮಾಡಿಲ್ಲ. ಈಗಾಗಲೇ ಜಲಮಂಡಳಿಗೆ ವಾರ್ಷಿಕವಾಗಿ ಸುಮಾರು ಒಂದು ಸಾವಿರ ಕೋಟಿಗೂ ಹೆಚ್ಚು ನಷ್ಟ ಉಂಟಾಗುತ್ತಿದೆ. ಇದರೊಂದಿಗೆ ನೀರಿನ ಸಂಪರ್ಕ ಜಾಲವನ್ನು ಹೆಚ್ಚಿಸಬೇಕಾಗಿದೆ. ಇದಕ್ಕಾಗಿ ಸದ್ಯ ಸುಮಾರು 6 ಸಾವಿರ ಕೋಟಿ ರೂಪಾಯಿಯ ಅಗತ್ಯವಿದೆ. ಈ ಎಲ್ಲ ಕಾರಣಗಳಿಂದ ನೀರಿನ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು.