ಬೆಂಗಳೂರು || ಸಿಎಂ ದಲಿತಪರ ಕಾಳಜಿ ಎಲ್ಲಿ ಹೋಗಿದೆ? ಅಧಿಕಾರಕ್ಕೆ ಬಂದ ಬಳಿಕ ಮರೆತುಹೋಯಿತೇ?- ವಿಜಯೇಂದ್ರ

ಬೆಂಗಳೂರು || ಸಿಎಂ ದಲಿತಪರ ಕಾಳಜಿ ಎಲ್ಲಿ ಹೋಗಿದೆ? ಅಧಿಕಾರಕ್ಕೆ ಬಂದ ಬಳಿಕ ಮರೆತುಹೋಯಿತೇ?- ವಿಜಯೇಂದ್ರ

ಬೆಂಗಳೂರು: ಸಿದ್ದರಾಮಯ್ಯನವರ ದಲಿತಪರ ಕಾಳಜಿ ಎಲ್ಲಿ ಹೋಗಿದೆ? ವಿಪಕ್ಷದಲ್ಲಿದ್ದಾಗ ಇದ್ದ ದಲಿತಪರ ಕಾಳಜಿ ಅಧಿಕಾರಕ್ಕೆ ಬಂದ ಬಳಿಕ ಮರೆತುಹೋಯಿತೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.

ಪರಿಶಿಷ್ಟರ ಹಣ ದುರ್ಬಳಕೆ ವಿರೋಧಿ ಹೋರಾಟ ಸಮಿತಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಿತು. ಹೋರಾಟ ಸಮಿತಿ ಆಹ್ವಾನದ ಮೇರೆಗೆ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿಜಯೇಂದ್ರ ಅವರು, ಅಹಿಂದ ಹೆಸರಿನೊಂದಿಗೆ ರಾಜ್ಯದಲ್ಲಿ ಪರಿóಶಿಷ್ಟ ಜಾತಿ, ಪಂಗಡಗಳ ಕಣ್ಣೀರು ಒರೆಸುವುದಾಗಿ ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದವರು; ಅವರು ಈ ಕರಾಳದಿನಕ್ಕೆ ಕಾರಣರು ಎಂದು ಟೀಕಿಸಿದರು.

ಮುಖ್ಯಮಂತ್ರಿಗಳು ಅಸಹಾಯಕರಾಗಿದ್ದಾರಾ? ಅಥವಾ…

ಸಿದ್ದರಾಮಯ್ಯನವರು ಅನುಭವಿ ಮುಖ್ಯಮಂತ್ರಿ; ಅವರು ಅಸಮರ್ಥ ಎನ್ನುವುದಿಲ್ಲ. ಮುಖ್ಯಮಂತ್ರಿಗಳು ಅಸಹಾಯಕರಾಗಿದ್ದಾರಾ? ಅಥವಾ ದಲಿತರ ಮೇಲಿನ ಕಾಳಜಿ ಮರೆತುಹೋಗಿದೆಯೇ ಎಂದು ಬಿ.ವೈ. ವಿಜಯೇಂದ್ರ ಅವರು ಕೇಳಿದರು.

ದಲಿತ ಸಮುದಾಯಕ್ಕೆ ಶಕ್ತಿ ಕೊಡಬೇಕಾದ ಹಣದ ದುರ್ಬಳಕೆ ಮಾಡಿದ್ದೀರಲ್ಲ? ಇದು ನ್ಯಾಯವೇ ಸಿದ್ದರಾಮಯ್ಯನವರೇ? ಎಂದು ಪ್ರಶ್ನೆಯನ್ನು ಮುಂದಿಟ್ಟರು.

 ಸಿದ್ದರಾಮಯ್ಯನವರೇ, ಹಿಂದೆ ಬಿಜೆಪಿ ಸರಕಾರ ಇದ್ದಾಗ, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನಿಮ್ಮಂತೆ ಪೊಳ್ಳು ಭರವಸೆ ಕೊಡಲಿಲ್ಲ; ನಮ್ಮ ಸರಕಾರಗಳು ದಲಿತರ ಕಾಲೊನಿಗಳಿಗೆ ಮೂಲಸೌಕರ್ಯಗಳನ್ನು ಕೊಟ್ಟು ಕಾಂಕ್ರೀಟ್ ರಸ್ತೆಗಳನ್ನು ಮಾಡಿದ್ದವು. ಸಿದ್ದರಾಮಯ್ಯನವರೇ ನಿಮ್ಮ ದಲಿತ ಕಾಳಜಿ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರೇ, ಯಾವುದೇ ಕಾರಣಕ್ಕೂ ಎಸ್ಇಪಿ, ಟಿಎಸ್ಪಿ ಹಣವನ್ನು ದುರ್ಬಳಕೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕದಿರಿ ಎಂದು ಮನವಿ ಮಾಡಿದರು. ದಲಿತರ ಕಣ್ಣಲ್ಲಿ ನೀರು ಬಂದರೆ ಆ ಶಾಪ ನಿಮ್ಮ ಸರಕಾರಕ್ಕೆ ತಟ್ಟದೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ದಲಿತರ ಹಣ ಬಳಕೆಯಲ್ಲಿ ಕರ್ನಾಟಕವು 10ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಇಡೀ ದೇಶದಲ್ಲಿ ದಲಿತರಿಗೆ ಹಣ ಖರ್ಚು ಮಾಡುವ ನಿಟ್ಟಿನಲ್ಲಿ ನಮ್ಮ ಬಿಜೆಪಿ ಸರಕಾರವು ಮೊದಲ ಸ್ಥಾನದಲ್ಲಿ ಇರಲಿದೆ ಎಂದು ವಿಶ್ವಾಸದಿಂದ ನುಡಿದರು.

ಇದು ಮೋಸ ಅಲ್ಲವೇ?- ಛಲವಾದಿ ನಾರಾಯಣಸ್ವಾಮಿ

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ತುಳಿತಕ್ಕೆ ಒಳಗಾದ ಪರಿಶಿಷ್ಟ ಸಮುದಾಯದವರಿಗಾಗಿ ಇರುವ ಎಸ್ಇಪಿ- ಟಿಎಸ್ಪಿ ವಿಶೇಷ ಯೋಜನೆ. ವಿದ್ಯಾವಂತರನ್ನಾಗಿ ಮಾಡುವುದು, ಜಮೀನು ಖರೀದಿಸಿ ಕೊಡುವುದು, ಭೂಮಿಗೆ ಕೊಳವೆಬಾವಿ ಹಾಕಿಸಿ ನೀರು ಕೊಡುವುದು, ಕೈಗಾರಿಕೆ ಸ್ಥಾಪನೆಗೆ ನೆರವಿನಂಥ ಆಸ್ತಿ ನಿರ್ಮಾಣಕ್ಕೆ ಹಣ ಕೊಡುವ ಯೋಜನೆ ಇದು. ಅದರ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿ ಮೋಸ ಮಾಡಿದ್ದಾರೆ ಎಂದು ಟೀಕಿಸಿದರು.

ಪರಿಶಿಷ್ಟ ಸಮುದಾಯದವರು ಫ್ರೀ ಬಸ್ಸಿನಲ್ಲಿ ಓಡಾಡುವುದಿಲ್ಲ; ಮೋಜು ಮಸ್ತಿ ಮಾಡುವುದಿಲ್ಲ. ಆದರೆ, ನೀವು ನಮ್ಮವರ ವಿಶೇóಷ ಯೋಜನೆಯ ಹಣವನ್ನು ತೆಗೆದು ನಿಮ್ಮ ಖಾತೆಗೆ ಹಾಕಿದ್ದೀರಿ ಎಂದು ಆಕ್ಷೇಪಿಸಿದರು. ಇದು ನಮ್ಮ ಜನಾಂಗಕ್ಕೆ ಮಾಡಿದ ಮೋಸ ಅಲ್ಲವೇ? ಎಂದು ಪ್ರಶ್ನಿಸಿದರು.

ನಮ್ಮಲ್ಲಿ ವಿದ್ಯಾವಂತರು ಹೆಚ್ಚಾಗಿದ್ದಾರೆ. ಆದರೆ, ನಿರುದ್ಯೋಗವೂ ಅಷ್ಟೇ ಬೆಳೆಯುತ್ತಿದೆ. ಯುವನಿಧಿ ಪೇಪರಲ್ಲಿ ಇದೆಯೇ ಹೊರತು ನಮ್ಮ ಜನರಿಗೆ ಇದು ದಕ್ಕಿಲ್ಲ ಎಂದು ವಿವರಿಸಿದರು.

ರಿಪಬ್ಲಿಕ್ ಪಾರ್ಟಿಯ ರಾಜ್ಯದ ಹಿರಿಯ ಮುಖಂಡ ಡಾ.ಎಂ.ವೆಂಕಟಸ್ವಾಮಿ, ಮಾಜಿ ಸಚಿವ ಮತ್ತು ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಮಾಜಿ ಶಾಸಕ ಸಂಪಂಗಿ, ಸಮಾಜದ ಮುಖಂಡ ಹರಿರಾಮ್, ದಲಿತ ಮುಖಂಡ ಜಗನ್ನಾಥ್, ಮುಖಂಡರಾದ ಚಿ.ನಾ.ರಾಮು, ಮುನಿಕೃಷ್ಣ, ಸತೀಶ್, ಪಿ.ಮೂರ್ತಿ, ಡಾ.ಮುನಿರಾಜು, ರಮೇಶ್, ಮಹೇಶ್ ಮತ್ತು ವಿವಿಧ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *