ಉಡುಪಿ : ಉಡುಪಿಯ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ‘ಜೀವಂತ ಶವ ಯಾತ್ರೆ’ ಎಂಬ ವಿಭಿನ್ನ ಪ್ರತಿಭಟನೆ ನಡೆಸಲಾಯಿತು.
ನಿತ್ಯಾನಂದ ಒಳಕಾಡು ತಾನೇ ಶವದಂತೆ ಚಟ್ಟದ ಮೇಲೆ ಮಲಗಿದರು. ನಂತರ ನಾಗರಿಕ ಸಮಿತಿಯವರು ಇಂಗ್ಲಿಷ್ ಮೀಡಿಯಂ ಶಾಲೆಯ ಮುಂಭಾಗದಿಂದ ಆರಂಭಿಸಿ ಇಂದ್ರಾಳಿ ಹಿಂದೂ ರುದ್ರ ಭೂಮಿಯವರೆಗೆ ಶವಯಾತ್ರೆಯನ್ನು ನಡೆಸಿದರು. ಈ ಮೂಲಕ ಕೇಂದ್ರ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿದಿನ ಸಾವಿರಾರು ಜನ ಈ ರಸ್ತೆಯಲ್ಲಿ ಓಡಾಡುತ್ತಾರೆ. ಪಕ್ಕದಲ್ಲಿ ಇಂದ್ರಾಳಿ ರೈಲ್ವೆ ಸ್ಟೇಷನ್ ಇದೆ. ಈ ದಾರಿಯಲ್ಲಿ ಬಹಳ ಆಂಬ್ಯುಲೆನ್ಸ್ಗಳು ಮಣಿಪಾಲ ಮತ್ತು ಉಡುಪಿಯ ಆಸ್ಪತ್ರೆಗಳಿಗೆ ಸಂಚಾರ ನಡೆಸುತ್ತವೆ. ಈ ಮಳೆಗಾಲದ ಒಳಗೆ ಬ್ರಿಡ್ಜ್ ಕಾಮಗಾರಿ ಸಂಪೂರ್ಣವಾಗಬೇಕು” ಎಂದು ಸಾಮಾಜಿಕ ಕಾರ್ಯಕರ್ತ ವಿನಯಚಂದ್ರ ಸಾಸ್ತಾನ ಒತ್ತಾಯಿಸಿದರು.
ಜನವರಿ 15ರಂದು ರೈಲ್ವೆ ಬ್ರಿಡ್ಜ್ ಪೂರ್ಣಗೊಳ್ಳುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿಗಳು ಭರವಸೆಯನ್ನು ನೀಡಿದ್ದರು. ಆದರೆ, ಎರಡು ಭಾಗದಲ್ಲಿ ರಸ್ತೆ ನಿರ್ಮಾಣವಾಗಿ ಏಳು ವರ್ಷ ಕಳೆದರೂ ಇನ್ನು ಕೂಡ ರೈಲ್ವೆ ಬ್ರಿಡ್ಜ್ ಸಂಪೂರ್ಣವಾಗಿಲ್ಲ ಎಂದರು.
ಈ ಬಗ್ಗೆ ಮಾತನಾಡಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು, ರೈಲ್ವೆ ಬ್ರಿಡ್ಜ್ನ ನಿಧಾನಗತಿಯ ಕಾಮಗಾರಿಯಿಂದ ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಆಸ್ಪತ್ರೆ ಓಡಾಟ ಮಾಡುವವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಈ ವಿಚಾರ ತಿಳಿಯಬೇಕು ಎಂದು ಪ್ರತಿಭಟನೆ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಈ ಸಮಸ್ಯೆಯ ಬಗ್ಗೆ ತಲುಪಬೇಕು ಎಂದು ಹೇಳಿದರು.
ಈ ಬಗ್ಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ”ಈ ರೀತಿಯ ಪ್ರತಿಭಟನೆಗೆ ನಮ್ಮ ಸಹಕಾರ ಇಲ್ಲ. ಸದ್ಯದಲ್ಲೇ ಕಾಮಗಾರಿ ಪೂರ್ಣವಾಗುತ್ತದೆ ಎಂದು ಹೇಳಿದ್ದೇವೆ. ಸ್ವಲ್ಪ ದಿನ ಹೆಚ್ಚು ಕಡಿಮೆ ಆಗುತ್ತದೆ. ಈಗ ಕಾಮಗಾರಿ ಸಂಪೂರ್ಣ ಆಗುವ ಹೊತ್ತಿನಲ್ಲಿ ಈ ರೀತಿಯ ಪ್ರತಿಭಟನೆ ಯಾಕೆ ಮಾಡಿದ್ದಾರೆ, ಇದರ ಉದ್ದೇಶ ಏನು ಅಂತ ಗೊತ್ತಾಗುತ್ತಿಲ್ಲ. ಏನೇ ಆಗಲಿ ಮುಂದಿನ ದಿನದಲ್ಲಿ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ” ಎಂದರು.
58 ಮೀಟರ್ ಉದ್ದದ ಈ ಕಾಮಗಾರಿಯನ್ನ ಒಟ್ಟು 13 ಕೋಟಿ ರೂಪಾಯಿ ವೆಚ್ಚದಲ್ಲಿ 2018ರಲ್ಲಿ ಆರಂಭ ಮಾಡಲಾಗಿತ್ತು. ಇದೀಗ ಗರ್ಡರ್ಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ. ಆದಷ್ಟು ಬೇಗ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಮೇಲ್ಸೆತುವೆ ಕಾಮಗಾರಿಯು ಸಂಪೂರ್ಣವಾಗಬೇಕೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.