ಚಿಕ್ಕಮಗಳೂರು || ಯೂತ್ ಕಾಂಗ್ರೆಸ್ ಅಧ್ಯಕ್ಷನ ಗೂಂಡಾಗಿರಿ – ಮಧ್ಯರಾತ್ರಿ ಎಣ್ಣೆ ಕೊಡ್ಲಿಲ್ಲ ಎಂದು ಬೆಳಗ್ಗೆ ಬಾರ್‌ಗೆ ನುಗ್ಗಿ ಹಲ್ಲೆ

ಚಿಕ್ಕಮಗಳೂರು || ಯೂತ್ ಕಾಂಗ್ರೆಸ್ ಅಧ್ಯಕ್ಷನ ಗೂಂಡಾಗಿರಿ – ಮಧ್ಯರಾತ್ರಿ ಎಣ್ಣೆ ಕೊಡ್ಲಿಲ್ಲ ಎಂದು ಬೆಳಗ್ಗೆ ಬಾರ್‌ಗೆ ನುಗ್ಗಿ ಹಲ್ಲೆ

ಚಿಕ್ಕಮಗಳೂರು: ಮಧ್ಯರಾತ್ರಿ 1 ಗಂಟೆಗೆ ಎಣ್ಣೆ ಕೊಡ್ಲಿಲ್ಲ ಎಂದು ಯೂತ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ತನ್ನ ಗುಂಪಿನ ಜೊತೆ ಬೆಳಗ್ಗೆ ಬಾರ್‌ಗೆ ನುಗ್ಗಿ ಕ್ಯಾಶಿಯರ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ.

ಕೊಪ್ಪ ತಾಲೂಕಿನ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಶ್ವಿಕ್ ಹಾಗೂ ಸಹಚರರು ಹಲ್ಲೆ ನಡೆಸಿದ್ದರು. ತಡರಾತ್ರಿ ಬಾರ್ ಕ್ಯಾಶಿಯರ್ ಎಣ್ಣೆ ನೀಡಲು ನಿರಾಕರಿಸಿದ್ದಾನೆಂದು ವಿಜಯಾನಂದ ಮತ್ತು ಸಹಚರರು ಕ್ಯಾಶಿಯರ್‌ಗೆ ಹಿಗ್ಗಾಮುಗ್ಗ ಥಳಿಸಿದ್ದರು.

ಘಟನೆಯ ಬಳಿಕ ಹಲ್ಲೆಗೊಳಗಾದ ಕ್ಯಾಶಿಯರ್ ಯಾವುದೇ ದೂರು ನೀಡಿಲ್ಲ. ಪ್ರಕರಣವನ್ನು ಮುಚ್ಚಿಹಾಕಲು ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಬಾರ್ ಕ್ಯಾಶಿಯರ್ ಸಹನ್‌ಗೆ ದೂರು ನೀಡದಂತೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಜೊತೆಗೆ ಸರ್ಕಾರ ಇರುವುದರಿಂದ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ, ಹಲ್ಲೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನಸ್ಸೋ ಇಚ್ಛೆ ಹಲ್ಲೆ ಮಾಡಿರುವ ದೃಶ್ಯದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರು ಕೊಪ್ಪ ಠಾಣೆಗೆ ಹೋಗಿ, ಪೊಲೀಸರು ದೂರು ನೀಡಿದರೆ ಮಾತ್ರ ಕ್ರಮಕೈಗೊಳ್ಳುವುದಾ ಎಂದು ಪ್ರಶ್ನಿಸಿದ್ದರು.

ಯಾರೂ, ಯಾವುದೇ ದೂರು ನೀಡಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳುತ್ತವೆ ಎಂದು ಕೊಪ್ಪ ಪೊಲೀಸರು ಸಬೂಬು ನೀಡಿದ್ದರು. ಸರ್ಕಾರ ಇದೆ ಎಂದು ಪೊಲೀಸರು ತೆರೆಮರೆಯಲ್ಲಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರು ಎಂದು ಹೇಳಲಾಗಿದೆ.

ಕೊನೆಗೆ, ಸಾರ್ವಜನಿಕರ ತೀವ್ರ ಆಕ್ರೋಶದ ಬಳಿಕ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published. Required fields are marked *