ಬೆಂಗಳೂರು || ಶಿಕ್ಷಕಿಯಿಂದ ಉದ್ಯಮಿ ಅಪಹರಣ : ಮೂವರು ಬಂಧನ

ಬೆಂಗಳೂರು || ಶಿಕ್ಷಕಿಯಿಂದ ಉದ್ಯಮಿ ಅಪಹರಣ : ಮೂವರು ಬಂಧನ

ಬೆಂಗಳೂರು: ಉದ್ಯಮಿಯನ್ನು ಸುಲಿಗೆಗೈದಿದ್ದ ಖಾಸಗಿ ಶಾಲೆಯ ಶಿಕ್ಷಕಿ, ರೌಡಿಶೀಟರ್ ಸಹಿತ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 34 ವರ್ಷದ ಉದ್ಯಮಿ ನೀಡಿದ್ದ ದೂರಿನನ್ವಯ ಖಾಸಗಿ ಶಾಲೆಯ ಶಿಕ್ಷಕಿ ಶ್ರೀದೇವಿ ರೂಡಗಿ (25), ಅವರ ಪ್ರಿಯಕರ ಸಾಗರ್ ಮೋರೆ (28) ಮತ್ತು ರೌಡಿ ಶೀಟರ್ ಗಣೇಶ್ ಕಾಳೆ (38) ಅವರನ್ನು ಬಂಧಿಸಲಾಗಿದೆ. ಗಣೇಶ್ ಕಾಳೆಯ ವಿರುದ್ಧ ವಿವಿಧ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶ್ರೀದೇವಿ, ಮಹಾಲಕ್ಷ್ಮಿ ಲೇಔಟ್‌ನ ಪ್ರಿ-ಸ್ಕೂಲ್‌ವೊಂದರಲ್ಲಿ ಶಿಕ್ಷಕಿಯಾಗಿದ್ದು, ದೂರುದಾರರ ಮೂವರು ಮಕ್ಕಳು ಸಹ ಅದೇ ಶಾಲೆಯಲ್ಲಿ ಡ್ಯಾನ್ಸ್ ಮತ್ತು ಟ್ಯೂಷನ್ ಪಡೆಯುತ್ತಿದ್ದರು. ಮಕ್ಕಳನ್ನು ಶಾಲೆಗೆ ಬಿಡಲು ಮತ್ತು ಕರೆದುಕೊಂಡು ಹೋಗಲು ಬರುತ್ತಿದ್ದ ದೂರುದಾರರೊಂದಿಗೆ ಶ್ರೀದೇವಿಗೆ ಸ್ನೇಹವಾಗಿತ್ತು. ಶಾಲೆಯ ನಿರ್ವಹಣೆಯ ಕಾರಣ ನೀಡಿ 2023ರಿಂದ ದೂರುದಾರರ ಬಳಿ ಆಗಾಗ್ಗೆ ಶ್ರೀದೇವಿ ಹಣ ಪಡೆದಿದ್ದರು. 2025ರ ಜನವರಿಯಲ್ಲಿ ಹಣ ವಾಪಸ್ ಕೇಳಿದಾಗ, ”ಹಣವಿಲ್ಲ, ಪ್ರಿ-ಸ್ಕೂಲ್‌ಗೆ ಪಾರ್ಟ್ನರ್ ಆಗಿ” ಎಂದು ಶ್ರೀದೇವಿ ಹೇಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಳಿಕ ಹಣ ವಾಪಸ್ ನೀಡಲ ಸಾಧ್ಯವಾಗುತ್ತಿಲ್ಲ, ಹಣದ ವ್ಯವಹಾರವನ್ನು ಒಂದೇ ಬಾರಿ ಮುಗಿಸೋಣ, ನೀವು ಹೇಳಿದಂತೆ ಮಾಡಲು ನಾನು ಸಿದ್ಧಳಿದ್ದು ಅದಕ್ಕೆ ಪ್ರತಿಯಾಗಿ 15 ಲಕ್ಷ ರೂಪಾಯಿ ಕೇಳಿದ್ದರು. ಆದರೆ ದೂರುದಾರ ಇದಕ್ಕೆ ಒಪ್ಪಿರಲಿಲ್ಲ. ಇದಾದ ಬಳಿಕ ದೂರುದಾರನ ಮನೆಗೆ ಶ್ರೀದೇವಿ ಆಗಮಿಸಿ 50 ಸಾವಿರ ರೂ. ಪಡೆದುಕೊಂಡು ಹೋಗಿದ್ದರು. ಇದಾದ ನಂತರ ಹೆಚ್ಚಿನ ಹಣ ಸುಲಿಗೆ ಮಾಡುವ ಉದ್ದೇಶದಿಂದ ಶ್ರೀದೇವಿ, ತನ್ನ ಪ್ರಿಯಕರ ಸಾಗರ್ ಮೋರೆ, ಗಣೇಶ್ ಕಾಳೆ ಜತೆ ಸೇರಿ ದೂರುದಾರನನ್ನು ಅಪಹರಿಸಿ ಒಂದು ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಶ್ರೀದೇವಿಯೊಂದಿಗಿನ ಖಾಸಗಿ ಕ್ಷಣದ ವಿಡಿಯೋವನ್ನು ನಿನ್ನ ಪತ್ನಿಗೆ ಕಳುಹಿಸುತ್ತೇವೆ ಎಂದು ಬೆದರಿಸಿದ್ದರು. ಮಾರ್ಚ್ 18 ರಂದು 1.90 ಲಕ್ಷ ಪಡೆದು, ಉಳಿದ ಹಣವನ್ನು ಆರು ದಿನದಲ್ಲಿ ನೀಡುವಂತೆ ಬೆದರಿಸಿ ದೂರುದಾರನನ್ನು ಬಿಟ್ಟು ಕಳುಹಿಸಿದ್ದರು ಎಂದು ಪೊಲೀಸರು ಹೇಳಿದರು.

ಬಳಿಕ ನೊಂದ ವ್ಯಕ್ತಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *