ರಾಜ್ಯ ಕಾರ್ಮಿಕ ಖಾತೆ ವಹಿಸಿಕೊಂಡಿರುವ ಸಚಿವ ಸಂತೋಷ್ ಲಾಡ್ ಚಿತ್ರದಲ್ಲಿ ನಟಿಸುತ್ತಿದಾರೆ. ಹೌದು ಎಂ.ಎಲ್. ಪ್ರಸನ್ನ ನಿರ್ದೇಶನದ, ರಾಘವೇಂದ್ರ ರೆಡ್ಡಿ ನಿರ್ಮಾಣದ ಕನ್ನಡ ಪ್ರೇಮ ಸಾರುವ ‘ಭಾರತಿ ಟೀಚರ್ ಏಳನೇ ತರಗತಿ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಸಂತೋಷ್ ಲಾಡ್ ಅವರು ಜಿಲ್ಲಾಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಎಂ.ಎಲ್. ಪ್ರಸನ್ನ ಅವರು ‘ಸಂತೋಷ್ ಸರ್ ನಮ್ಮ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿದ್ದು ಸಂತೋಷ ತಂದಿದೆ. ಇದಕ್ಕೆ ಅನುವು ಮಾಡಿಕೊಟ್ಟಿದ್ದು ಡಾ.ವಿ.ನಾಗೇಂದ್ರ ಪ್ರಸಾದ್. ಈ ತಲೆಮಾರಿನ ಮಕ್ಕಳಲ್ಲಿ ಕನ್ನಡ ಕಲಿಯುವ ಮತ್ತು ಕಲಿಸುವ ಕಿಚ್ಚನ್ನು ಹುಟ್ಟು ಹಾಕಬೇಕು ಎಂಬ ಉದ್ದೇಶದ ಸಿನಿಮಾ ಇದು’ ಎಂದರು.

ಸಂತೋಷ್ ಲಾಡ್ ಇದೇ ವೇಳೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ‘ಚಿತ್ರದ ಕತೆ ಇಷ್ಟವಾಯಿತು. ನನಗೆ ಡಿಸಿ ಪಾತ್ರ ಮಾಡಬೇಕೆಂದು ಕೇಳಿಕೊಂಡಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂಬ ನಂಬಿಕೆಯ ಜತೆ ಭಯ ಕೂಡ ಇದೆ. ಇದು ಒಂದು ಒಳ್ಳೆಯ ಸಂದೇಶ ಇರುವ ಚಿತ್ರ’ ಎಂದರು. ಇದು ಒಂದು ಉತ್ತಮ ಸಂದೇಶ ಇರುವ ಸಿನಿಮಾ ಆದ್ದರಿಂದ ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ. ಈಗಿನ ಕಾಲದಲ್ಲಿ ಸಿನಿಮಾಗಳು ಗೆಲ್ಲುವುದು ಬಹಳ ಕಷ್ಟಕರವಾಗಿದೆ. ಕನ್ನಡ ಸಿನಿಮಾಗಳು ಹೆಚ್ಚು ಬೆಳೆಯಲಿ ಎಂದು ಸಂತೋಷ್ ಲಾಡ್ ವಿಶ್ ಮಾಡಿದರು.