ಕೋವಾ, ಪನ್ನೀರ್, ವಾಟರ್ ಬಾಟಲ್ ನೀರು ಅಸುರಕ್ಷಿತ- ಪರೀಕ್ಷಾ ವರದಿಯಲ್ಲಿ ಭಯಾನಕ ಸತ್ಯ ಬಯಲು

ಕೋವಾ, ಪನ್ನೀರ್, ವಾಟರ್ ಬಾಟಲ್ ನೀರು ಅಸುರಕ್ಷಿತ- ಪರೀಕ್ಷಾ ವರದಿಯಲ್ಲಿ ಭಯಾನಕ ಸತ್ಯ ಬಯಲು

ಬೆಂಗಳೂರು: ಇತ್ತೀಚೆಗೆ ನಾವು ಸೇವಿಸುವ ಆಹಾರ ಅಸುರಕ್ಷಿತ ಅನ್ನೋ ವರದಿಗಳು ಆತಂಕವನ್ನು ಹೆಚ್ಚಿಸಿದೆ. ಇದರ ವಿರುದ್ಧ ಸಮರ ಸಾರಿರುವ ಆಹಾರ ಇಲಾಖೆ ದಿನಕ್ಕೊಂದು ಆಹಾರ ಮಳಿಗೆಗಳ ಮೇಲೆ ದಾಳಿ ಮಾಡಿ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ ವರದಿಯನ್ನು ಸಂಗ್ರಹಿಸುತ್ತಿದೆ. ಇದೀಗ ಐಸ್ಕ್ರೀಂ, ಪನ್ನೀರ್ ಬಳಿಕ ಕೋವಾದಲ್ಲೂ ಕಲಬೆರಕೆ ಪತ್ತೆಯಾಗಿದೆ. ಅಲ್ಲದೆ ಇದರಲ್ಲಿ ಯೂರಿಯಾ ಬಳಕೆ ಮಾಡಿರುವುದು ತಿಳಿದು ಬಂದಿದೆ.

ಹೌದು ಸಿಹಿತಿಂಡಿಗಳಲ್ಲಿ ಸ್ವಾದವನ್ನು ಹೆಚ್ಚಿಸಲು ಕೋವಾವನ್ನು ಬಳಕೆ ಮಾಡಲಾಗುತ್ತದೆ. ಆದರೆ ಈ ಕೋವಾ ಆರೋಗ್ಯಕ್ಕೆ ಹಾನಿಕಾರಕ ಎಂದು ಆಹಾರ ಇಲಾಖೆ ಪರೀಕ್ಷೆಯಿಂದ ತಿಳಿದು ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಆಹಾರ ಇಲಾಖೆ ಐಸ್ಕ್ರೀಂ, ಪನ್ನೀರ್ ಸ್ಯಾಂಪಲ್ ಜೊತೆಗೆ ಕೋವಾ ಸ್ಯಾಂಪಲ್ ಕೂಡ ಪರೀಕ್ಷೆಗೆ ಕಳುಹಿಸಿಕೊಟ್ಟಿತ್ತು. ಈ ವರದಿ ಇದೀಗ ಆಹಾರ ಇಲಾಖೆ ಕೈ ಸೇರಿದೆ. ಈ ವರದಿಯನ್ನು ಇಂದು ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಲಿದ್ದಾರೆ.

ಆಹಾರ ಇಲಾಖೆ ಐಸ್ಕ್ರೀಂ, ಪನ್ನೀರ್ ಹಾಗೂ ಕೋವಾ ಸ್ಯಾಂಪಲ್ ಪಡೆದು ಲ್ಯಾಬ್ಗೆ ಕಳುಹಿಸಿತ್ತು. ಪರೀಕ್ಷೆಯಲ್ಲಿ ಐಸ್ಕ್ರೀಂ, ಪನ್ನೀರ್ ಹಾಗೂ ಕೋವಾದಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಬಳಕೆ ಮಾಡಿರುವುದು ಗೊತ್ತಾಗಿದೆ. ಅಲ್ಲದೆ ಇದರ ಬಣ್ಣ ಕಾಪಾಡಲು ಯೂರಿಯಾ ಬಳಕೆ ಮಾಡಿರುವುದು ಕಂಡುಬಂದಿದೆ. ಇದರ ಬಳಕೆ ಹಾಗೂ ಸೇವನೆ ಕ್ಯಾನ್ಸರ್ಗೆ ಕಾರಣವಾಗಲಿದೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಮತ್ತೊಂದು ಶಾಂಕಿಂಗ್ ಸುದ್ದಿ ಏನೆಂದರೆ ಕೋವಾ ಮಾತ್ರವಲ್ಲದೆ ಪನ್ನೀರ್ನಲ್ಲೂ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ. ಪನ್ನೀರ್ನಲ್ಲಿ ಡಿಟರ್ಜೆಂಟ್ ಹಾಗೂ ಕೆಲವು ಕೆಮಿಕಲ್ ಬಳಕೆ ಮಾಡಿರುವುದು ಆಹಾರ ಇಲಾಖೆ ಪರೀಕ್ಷೆಯ ವರದಿಯಿಂದ ಗೊತ್ತಾಗಿದೆ. ಇಂತಹ ಆಹಾರ ಸೇವನೆಯಿಂದಾಗಿ ಕಿದ್ವಾಯಿಯಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಹೇಳಲಾಗುತ್ತಿದೆ.

ಇನ್ನೂ ಮತ್ತೊಂದು ಅಘಾತಕಾರಿ ವಿಚಾರ ಅಂದರೆ ಕುಡಿಯುವ ಮಿನರಲ್ ಬಾಟಲಿಯ ನೀರೂ ಕೂಡ ಅಸುರಕ್ಷಿತ ಎನ್ನುವುದು ಬಯಲಾಗಿದೆ. ದಾಹ ಅಂತ ಅಂಗಡಿಯಲ್ಲಿ ಮಿನರಲ್ ಬಾಟಲಿ ಕುಡಿಯುವ ಪ್ರತಿಯೋಬ್ಬರಿಗೂ ಆಹಾರ ಇಲಾಖೆ ಶಾಕಿಂಗ್ ಸುದ್ದಿ ಕೊಟ್ಟಿದೆ. ಮಿನರಲ್ ವಾಟರ್ ಬಾಟಲಿಯಲ್ಲಿನ ನೀರಿನಲ್ಲಿ ಶೇಕಡ 50ರಷ್ಟು ಕಲಬೆರೆಕೆ ಇದೆ ಎಂದು ಹೇಳಿದೆ.

ಹೌದು ಮಿನರಲ್ ವಾಟರ್ ಬಾಟಲ್ ಎಂದು ಮಾರಾಟವಾಗುವ ನೀರಿನ ಬಾಟಲಿಗಳಲ್ಲಿ ಇರುವ ನೀರು ಅಸುರಕ್ಷಿತ ಎಂದು ಹೇಳಲಾಗುತ್ತಿದೆ. ದೊಡ್ಡ ದೊಡ್ಡ ಬ್ರ್ಯಾಂಡ್ಗಳ ಹೆಸರಿನಲ್ಲಿ ನೀರಿನ ಬಾಟಲಿಗಳು ತಯಾರಾಗುತ್ತಿವೆ. ನಕಲಿ ಬ್ರ್ಯಾಂಡ್ಗಳಲ್ಲಿ ವಾಟರ್ ಬಾಟಲಿಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ದೊಡ್ಡ ದೊಡ್ಡ ಕಂಪನಿಗಳನ್ನು ಸರಿಯಾಗಿ ಪ್ಯಾಕ್ ಮಾಡುತ್ತಾರೆ. ಆದರೆ ನಕಲಿ ಕಂಪನಿಗಳು ಅತಿಯಾದ ಹೀಟ್ ಕೊಟ್ಟು ನೀರಿನ ಬಾಟಲಿ ಪ್ಯಾಕ್ ಮಾಡುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೀಗಾಗಿ ಈ ಎಲ್ಲಾ ಮಾದರಿಯಿಂದ ಬಂದ ವರದಿಯೊಂದಿಗೆ ಇಂದು 12 ಗಂಟೆ ನಂತರ ವಿಕಾಸಸೌಧದಲ್ಲಿ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.

296 ನೀರು ಪರೀಕ್ಷೆ ಇದರಲ್ಲಿ 95 ಅಸುರಕ್ಷಿತ 88 ಕಳಪೆಯಾಗಿದೆ. 95 ವಾಟರ್ ಬಾಟಲಿ ತಯಾರಿಕಾ ಘಟಕಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದ 251 ಸಂಸ್ಥೆಗಳ ಪರವಾನಿಗೆ ರದ್ದು ಮಾಡಲಾಗಿದೆ. 92 ಐಸ್ಕ್ರೀಮ್ ಘಟಕಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಆರು ಐಸ್ಕ್ರೀಂ ಘಟಕಗಳಿಗೆ 68000 ದಂಡವಿಧಿಸಲಾಗಿದೆ. 231 ಪನ್ನೀರ್ ಅಸುರಕ್ಷಿತವಾಗಿದೆ.

Leave a Reply

Your email address will not be published. Required fields are marked *