ತುಮಕೂರು : ತುಮಕೂರು ತಾಲ್ಲೂಕು, ಕೋರ ಹೋಬಳಿ, ಕೆಸ್ತೂರು ಗ್ರಾಮದ ದಲಿತ ಕಾಲೋನಿಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ||ಬಿ.ಆರ್ ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟಿರುವ ಸ್ವತ್ತಿನಲ್ಲಿ ಅನಧಿಕೃತವಾಗಿ ದೇವಸ್ಥಾನ ಕಟ್ಟಡ ನಿರ್ಮಾಣ ಮಾಡಲು ಹೊರಟಿರುವವರ ವಿರುದ್ಧ ಕ್ರಮಕ್ಕೆ ದಲಿತಾ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಮನವಿ ಸಲ್ಲಿಸಿ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡಿ, ಕೆಸ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪರವಾನಗಿ ನೀಡುವುದಾಗಿ ಉಡಾಫೆ ಮಾತುಗಳನ್ನಾಡುತ್ತಾ ದಲಿತ ಕಾಲೋನಿಯಲ್ಲಿ ದೇವಸ್ಥಾನ ಕಟ್ಟಿ ಇನ್ನೂ ಮೂಡನಂಬಿಕೆಗೆ ಜನಾಂಗ ಬಲಿಯಾಗುವಂತೆ ಪ್ರೇರೇಪಿಸುತ್ತಿದ್ದು, ಸದರಿ ಸ್ಥಳದಲ್ಲಿ ದೇವಸ್ಥಾನ ಕಟ್ಟದಂತೆ ತಡೆಹಿಡಿದು ಸದರಿ ಸ್ಥಳದಲ್ಲಿಯೇ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅವಕಾಶ ಕೊಡುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಜಿಲ್ಲಾಡಳಿತಕ್ಕೆ ಇಂದು ನಾವು ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರಲ್ಲದೇ, ಈ ಹಿಂದೆ ಮಂಡಲ್ ಪಂಚಾಯಿತಿ ಚಾಲ್ತಿಯಲ್ಲಿದ್ದಾಗಲೇ ಸದರಿ ದಲಿತ ಕಾಲೋನಿಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಎಂದು ಜಾಗ ಕಾಯ್ದಿರಿಸಿರುವುದರಿಂದ ಪಂಚಾಯಿತಿಯಲ್ಲಿಯೂ ಸಹ ಈಗಾಗಲೇ ದಾಖಲಾತಿಯಾಗಿರುವುದರಿಂದ ಸದರಿ ಸ್ಥಳದಲ್ಲಿಯೇ ಉದ್ದೇಶಿಸಿದ ಅಂಬೇಡ್ಕರ್ ಭವನ ನಿರ್ಮಾಣ ಮಾಡಿದಲ್ಲಿ ದಲಿತರ ಕುಟುಂಬದ ಹಲವಾರು ಉಪಯೋಗಗಳಿಗೆ ರಾಷ್ಟ್ರೀಯ ಹಬ್ಬಗಳಾದ ಅಂಬೇಡ್ಕರ್ ಜಯಂತಿ, ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವ ಮದುವೆ, ನಾಮಕರಣ ಇತ್ಯಾದಿ ಕಾರ್ಯಕ್ರಮಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಡಳಿತವು ತುರ್ತಾಗಿ ಸ್ಥಳ ಪರಿಶೀಲಿಸಿ ದಲಿತ ಕಾಲೋನಿಯಲ್ಲಿ ನಿರ್ಮಿಸಲು ಹೊರಟಿರುವ ದೇವಾಲಯವನ್ನು ತಡೆ ಹಿಡಿದು, ಉದ್ದೇಶಿತ ಸ್ವತ್ತಿನಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅವಶ್ಯಕವಾದ ಸೌಲಭ್ಯಗಳನ್ನು ತುರ್ತಾಗಿ ಮಂಜೂರು ಮಾಡಿಕೊಟ್ಟು ದಲಿತರುಗಳಿಗೆ ನೆಮ್ಮದಿಯಿಂದ ಜೀವನ ಮಾಡಲು ಅವಕಾಶ ಮಾಡಿಕೊಡುವುದಲ್ಲದೇ ದಲಿತ ವಿರೋಧಿ ಚಟುವಟಿಕೆ ನಡೆಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತು ಮಾಡಬೇಕೆಂದು ನಮ್ಮ ಸಂಘಟನೆಯ ವತಿಯಿಂದ ಮನವಿಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಮ್ಮ ಮನವಿಯನ್ನು ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದರೇ ಜಿಲ್ಲಾಡಳಿತದ ವಿರುದ್ಧ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಸಾವಿರಾರು ಜನರಿಂದ ಉಗ್ರ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ. ಇದಕ್ಕೆ ಆಸ್ಪದ ನೀಡದೇ ನಮ್ಮ ಮನವಿಯನ್ನು ಪುರಸ್ಕರಿಸಿ, ಅತೀ ತುರ್ತಾಗಿ ಸ್ಥಳ ಪರಿಶೀಲನೆ ಮಾಡಿ ದಲಿತರಿಗೆ ಸೂಕ್ತ ನ್ಯಾಯ ಒದಗಿಸುವುದಲ್ಲದೇ ಅಂಬೇಡ್ಕರ್ ಭವನಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ಉಳಿಸಿಕೊಡಬೇಕೆಂದು ಮಾಧ್ಯಮಗಳ ಮೂಲಕ ಮನವಿಯನ್ನು ಮಾಡಿದರು.
ಈ ಸಂದರ್ಭದಲ್ಲಿ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಿನಾರಾಯಣ ಎಸ್, ಜಿಲ್ಲಾ ಕಾರ್ಯಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿ, ಅಲ್ಪ ಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷರಾದ ಇಲಾಸ್ ಅಹಮ್ಮದ್, ಯುವ ಘಟಕದ ಜಿಲ್ಲಾಧ್ಯಕ್ಷರಾದ ಮೋಯಿನ್, ಗಿರೀಶ್ ಜಿ.ಆರ್, ಹನುಮನರಸಯ್ಯ, ಕಿರಣ್ ವೈ.ಎಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.