ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಕರ್ನಾಟಕದ ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣ ಸಂಬಂಧ ಪೊಲೀಸರ ವಿಚಾರಣೆ ವೇಳೆ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರೇ ಕೊಲೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಲ್ಲವಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಅಲ್ಲದೇ ಓಂ ಪ್ರಕಾಶ್ ಅವರ ಪುತ್ರಿಯನ್ನು ಪರೀಕ್ಷೆಗಾಗಿ ನಿಮ್ಹಾನ್ಸ್ಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪತಿಯನ್ನೇ ಕೊಲ್ಲುವಂತಹ ಸಿಟ್ಟು ಪಲ್ಲವಿ ಅವರಿಗೆ ಏನಿತ್ತು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದ್ದು, ಪಲ್ಲವಿ ಹಾಗೂ ಓಂ ಪ್ರಕಾಶ್ ಅವರ ಸಂಬಂಧ ಹೇಗಿತ್ತು ಎನ್ನುವುದರ ಬಗ್ಗೆ ಓಂ ಪ್ರಕಾಶ್ ಅವರ ಆಪ್ತ ಹಿರಿಯ ಪೊಲೀಸ್ ಅಧಿಕಾರಿ ಬಸವರಾಜ್ ಮಾಲಗತ್ತಿ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಾವು ಓಂ ಪ್ರಕಾಶ್ ಅವರ ಜೊತೆ ಕೆಲಸ ಮಾಡಿದ್ದೇವೆ. ಹೀಗಾಗಿ ಅವರ ಈ ರೀತಿಯ ಸಾವು ಬಹಳ ನೋವು ಕೊಡುತ್ತದೆ. ಬಹಳ ಒಳ್ಳೆಯ ವ್ಯಕ್ತಿತ್ವ ಇರುವ ವ್ಯಕ್ತಿ. ಓಂ ಪ್ರಕಾಶ್ ಅವರ ವೈಯಕ್ತಿಕ ಜೀವನವನ್ನು ಇಪ್ಪತ್ತೈದು ವರ್ಷಗಳಿಂದ ನೋಡುತ್ತಿದ್ದೇನೆ ಅವರು ಖುಷಿಯಾಗಿಲ್ಲ. ಅವರ ವೈಯಕ್ತಿಕ ಜೀವನ ಅಷ್ಟೊಂದು ಛಿದ್ರವಾಗಿತ್ತು. ಇಬ್ಬರಲ್ಲಿಯೂ ಅಷ್ಟೊಂದು ಅನಾನುಕೂಲತೆ ಇತ್ತು. ಸ್ವಲ್ಪವೂ ಹೊಂದಾಣಿಕೆ ಇರಲಿಲ್ಲ’ ಎಂದರು. ‘ಅವರಿಗೆ ಮಾಸಿಕವಾಗಿ ಎಷ್ಟೇ ಒತ್ತಡ ಇದ್ದರೂ ಅದನ್ನು ಮನೆಯಲ್ಲೇ ಬಿಟ್ಟು ಬರುತ್ತಿದ್ದರು. ಯಾವುದನ್ನೂ ಆಫೀಸ್ವರೆಗೆ ತರುತ್ತಿರಲಿಲ್ಲ. ಕೆಲವರು ಮನೆಯಲ್ಲಿ ಹೆಂಡತಿ ಜೊತೆ ಮನಸ್ತಾಪ ಇದ್ದರೆ ಅದನ್ನು ಆಫೀಸ್ಗೂ ತಂದು ಕಿರಿಕಿರಿ ಮಾಡುತ್ತಾರೆ. ಆದರೆ ಇವರು ಎಂದಿಗೂ ಹಾಗೇ ಮಾಡಿದವರಲ್ಲ. ಮಾನಸಿಕ ಒತ್ತಡವನ್ನು ಮನೆಯಲ್ಲೇ ಬಿಟ್ಟು ಬರುತ್ತಿದ್ದರು’ ಎಂದು ಹೇಳಿದರು.
‘ಓಂ ಪ್ರಕಾಶ್ ಅವರು ಕಾರಾವಾರದಲ್ಲಿ ಎಸ್ಪಿ ಆಗಿ ಕೆಲಸ ಮಾಡುವಾಗಿನಿಂದಲೂ ಅವರ ಕುಟುಂಬದಲ್ಲಿ ಸಮಸ್ಯೆ ಇದೆ. ಅವರ ತಂಗಿಯ ಹೆಸರಿನಲ್ಲಿ ಜಾಗ ಮಾಡಿರುವುದಕ್ಕೆ ಶುರುವಾದ ಗಲಾಟೆ ಇದು. ಇಲಾಖೆ ಸಂಬಂಧ ಕಾರ್ಯಕ್ರಮಗಳಿಗೆ ಅವರ ಹೆಂಡತಿ ಮಕ್ಕಳು ಯಾವುದಕ್ಕೂ ಬರುತ್ತಿರಲಿಲ್ಲ. ನಮ್ಮ ಸಾಹೇಬರು ಒಬ್ಬರೇ ಬರುತ್ತಿದ್ದರು. ಮನೆಯಲ್ಲಿ ಎಂತಹ ಒತ್ತಡ ಇದ್ದರೂ ಕೂಡ ಅವರು ಎಂದೂ ಆಫೀಸ್ನಲ್ಲಿ ಸಿಬ್ಬಂದಿ ಮೇಲೆ ರೇಗಾಡುತ್ತಿರಲಿಲ್ಲ. ಸಮಾಧಾನದಿಂದ, ಸಮಯ ಚಿತ್ತದಿಂದ ಇರುತ್ತಿದ್ದರು’.
‘ನಾವೆಲ್ಲಾ ತುಂಬಾ ಆತ್ಮೀಯವಾಗಿ ಇರುತ್ತಿದ್ದೇವು. ಹೊರಗಡೆ ಹೋಗಿ ಊಟ ಮಾಡುತ್ತಿದ್ದೇವು. ಮನೆಗೆ ಹೋದರೆ ಅವರ ಪತ್ನಿ ನಮಗೆ ಒತ್ತಡವಾಗಬೇಕು ಆ ರೀತಿ ನಡೆದುಕೊಳ್ಳುತ್ತಿದ್ದರು. ಇವರು ಯಾಕಪ್ಪ ನಮ್ಮ ಮನೆಗೆ ಬಂದರು ಎನ್ನುವ ರೀತಿ ವರ್ತಿಸುತ್ತಿದ್ದರು. ಮನೆಗೆ ಗಂಡನ ಸ್ನೇಹಿತರು ಬರಲಿ, ಸಂಬಂಧಿಕರು ಬರಲಿ, ಎಲ್ಲರೊಂದಿಗೂ ಹಾಗೇ ನಡೆದುಕೊಳ್ಳುತ್ತಿದ್ದರು’ ಎಂದರು.
‘ಅವರು ತಮ್ಮ ತಂಗಿಗೆ ಒಂದಿಷ್ಟು ಆಸ್ತಿ ಮಾಡಿಕೊಟ್ಟಿದ್ದರು. ಅವರ ತಂಗಿ ಟೀಚರ್ ಆಗಿದ್ದರು ಹೀಗಾಗಿ ಅವರಿಗೂ ಏನಾದರೂ ಆಗಲಿ ಅಂತಾ ಮಾಡಿಕೊಟ್ಟರು. ಏನೋ ಅಣ್ಣ-ತಂಗಿಯ ಮಧ್ಯೆ ವಿಶೇಷವಾದ ಬಾಂಧವ್ಯ ಇರುತ್ತದೆ. ಹೀಗಾಗಿ ಮಾಡಿಕೊಟ್ಟಿದ್ದರು. ಏನೋ ತಂಗಿಗೆ ಅಂತಾ ಸಹಾಯ ಮಾಡಿದ್ದಾರೆ. ಅದನ್ನೇ ದೊಡ್ಡದು ಮಾಡಿಕೊಂಡರು. ಸಾಹೇಬರು ವೃತ್ತಿ ಜೀವನದಲ್ಲಿ ತುಂಬಾ ಖುಷಿಯಾಗಿದ್ದರು. ಆದರೆ ವೈಯಕ್ತಿಕ ಜೀವನದಲ್ಲಿ ತುಂಬಾ ಒತ್ತಡ ಹಾಗೂ ನೋವಿನಲ್ಲಿದ್ದರು’ ಎಂದರು.