ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಜನರ ಜೀವನಾಡಿ ನಮ್ಮ ಮೆಟ್ರೋ. ಆದರೆ 2025ರ ಫೆಬ್ರವರಿ 9ರಿಂದ ನಮ್ಮ ಮೆಟ್ರೋ ದರ ಏರಿಕೆಯಾಗಿತ್ತು. ಪರಿಷ್ಕೃತ ದರ ಜಾರಿಗೆ ಬಂದ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಕುಸಿತವಾಗಿತ್ತು. ಆದರೆ ಏಪ್ರಿಲ್ 17ರಂದು 9,08,153 ಜನರು ಮೆಟ್ರೋದಲ್ಲಿ ಸಂಚಾರ ನಡೆಸಿದ್ದಾರೆ. ಇದು ಪ್ರಯಾಣಿಕರ ಸಂಖ್ಯೆಯಲ್ಲಿ ಹೊಸ ಮೈಲಿಗಲ್ಲು ಎಂದು ಬಿಎಂಆರ್ಸಿಎಲ್ ಹೇಳಿದೆ.

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ ಜನರು ಬಿಎಂಆರ್ಸಿಎಲ್ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. 2017ರ ಬಳಿಕ ಮೊದಲ ಬಾರಿಗೆ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ಹೇಳಿತ್ತು. ಆದರೆ ಜನರು ಮೆಟ್ರೋ ಬಿಟ್ಟು ಬಿಎಂಟಿಸಿ ಬಸ್, ಖಾಸಗಿ ವಾಹನ ಬಳಕೆ ಪ್ರಾರಂಭಿಸಿದ್ದರು.
ಏಪ್ರಿಲ್ 14 ರಿಂದ 20ರ ತನಕ ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸಿದ ಜನರ ಸಂಖ್ಯೆಯನ್ನು ಗಮನಿಸಿದರೆ ಜನರ ಆಕ್ರೋಶ ಕಡಿಮೆ ಆಯಿತಾ?, ಜನರು ದರ ಏರಿಕೆಗೆ ಒಗ್ಗಿಕೊಂಡರಾ? ಎಂಬ ಅನುಮಾನ ಮೂಡಿದೆ. ಆದರೆ ವಿವಿಧ ಕಾರಣಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ ಎಂದು ಸಹ ವಿಶ್ಲೇಷಿಸಲಾಗುತ್ತಿದೆ. ಏಪ್ರಿಲ್ 12 ಶನಿವಾರ, ಏಪ್ರಿಲ್ 13 ಭಾನಿವಾರ, ಏಪ್ರಿಲ್ 14 ಸೋಮವಾರ ಸರಣಿ ರಜೆ ಇತ್ತು. ಏಪ್ರಿಲ್ 16, 17ರಂದು ಸಿಇಟಿ ಪರೀಕ್ಷೆಗಳು ಇತ್ತು. ಬೆಂಗಳೂರು ನಗರದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿವೆ. ಹೀಗೆ ವಿವಿಧ ಕಾರಣಕ್ಕೆ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಗೊಂಡಿತೆ? ಎಂಬ ಪ್ರಶ್ನೆ ಕಾಡುತ್ತಿದೆ. ಅಂಕಿ ಸಂಖ್ಯೆಗಳ ವಿವರ: ಏಪ್ರಿಲ್ 14 ರಿಂದ 20ರ ತನಕ ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸಿದ ಪ್ರಯಾಣಿಕರ ಸಂಖ್ಯೆಯ ಅಂಕಿ ಸಂಖ್ಯೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ. ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಮತ್ತು ಏಪ್ರಿಲ್ 18ರಂದು ಗುಡ್ ಫ್ರೈಡೆ ಪ್ರಯುಕ್ತ ಸರ್ಕಾರಿ ರಜೆ ಇತ್ತು. ಬಿಎಂಆರ್ಸಿಎಲ್ ಪ್ರಕಾರ ಮಾರ್ಚ್ ತಿಂಗಳಿನಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನಕ್ಕೆ 7,24,633 ಆಗಿದೆ.
ಏ.14 – 6,79,560 ಏ. 15 – 8,10,941 ಏ. 16 – 8,73,279 ಏ. 17 – 9,08,153 ಏ. 18 – 6,87,329 ಏ. 19 – 7,04,349 ಏ. 20 – 5,39,074 ಏಪ್ರಿಲ್ 14 ರಿಂದ 20ರ ತನಕದ ಪ್ರಯಾಣಿಕರ ಸಂಖ್ಯೆ ಗಮನಿಸಿದರೆ ಏಪ್ರಿಲ್ 17ರಂದು ಅತಿ ಹೆಚ್ಚು ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ದರ ಏರಿಕೆ ಬಳಿಕವೂ ನಮ್ಮ ಮೆಟ್ರೋ ಪ್ರಯಾಣಿಕರ ಸರಾಸರಿ ಸಂಖ್ಯೆ 6-7 ಲಕ್ಷ ಇದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಹೇಳಿದ್ದರು. ಐಪಿಎಲ್ ಪಂದ್ಯಾವಳಿ, ಬೇಸಿಗೆಯ ಬಿಸಿಲು, ಸಂಜೆಯ ಮಳೆ, ಟ್ರಾಫಿಕ್ ಸಮಸ್ಯೆ, ಸಿಇಟಿ ಪರೀಕ್ಷೆ ಮುಂತಾದ ಕಾರಣಕ್ಕೆ ಕಳೆದ ವಾರ ಒಂದು ದಿನ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ 9,08,153ಕ್ಕೆ ಏರಿಕೆಯಾಗಿದೆ.
ದರ ಏರಿಕೆಯ ಬಿಸಿಯನ್ನು ಜನರು ಮರೆತು ಹೋಗಿದ್ದಾರೆ, ಎಲ್ಲರೂ ವಾಪಸ್ ಮೆಟ್ರೋ ಪ್ರಯಾಣ ಮರು ಆರಂಭಿಸಿದ್ದಾರೆ ಎಂದು ಹೇಳುವುದು ಕಷ್ಟ ಎಂದು ಪ್ರತಿನಿತ್ಯ ನ್ಯಾಷನಲ್ ಕಾಲೇಜ್ನಿಂದ ವಿಧಾನಸೌಧ ತನಕ ಸಂಚಾರ ನಡೆಸುವ ಸೌಮ್ಯಾ ಹೇಳಿದ್ದಾರೆ. ಬಿಎಂಆರ್ಸಿಎಲ್ ನಮ್ಮ ಮೆಟ್ರೋ ದರ ಏರಿಕೆಯನ್ನು ಸಮರ್ಥಿಸಿಕೊಂಡಿತ್ತು. ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ ಅನ್ವಯ ದರ ನಿಗದಿ ಸಮಿತಿಯ ಶಿಫಾರಸಿಯ ಅನ್ವಯ ದರ ಏರಿಕೆ ಮಾಡಲಾಗಿದೆ. ಮೆಟ್ರೋ ಕಾರ್ಯಾಚರಣೆಯ ವೆಚ್ಚ ಅಧಿಕವಾಗುತ್ತಿದ್ದು, ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿತ್ತು ಎಂದು ಹೇಳಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ದರ ಇಳಿಕೆ ಮಾಡುವಂತೆ ಬಿಎಂಆರ್ಸಿಎಲ್ಗೆ ಸೂಚನೆ ನೀಡಿದ್ದರು. ಆದರೆ ದರವನ್ನು ಯಾವ ಮಾದರಿಯಲ್ಲಿ ಕಡಿಮೆ ಮಾಡಲಾಗಿದೆ? ಎಂಬ ಬಗ್ಗೆ ಇನ್ನೂ ಜನರಿಗೆ ಲೆಕ್ಕ ಸಿಗುತ್ತಿಲ್ಲ.