ಹಾವೇರಿ || ಜಮ್ಮು ಕಾಶ್ಮೀರ ಪ್ರವಾಸ ತೆರಳಿರುವ ವಿಜಯನಗರ, ಹಾವೇರಿ, ಶಿಗ್ಗಾವಿ ಕುಟುಂಬಸ್ಥರು ಸುರಕ್ಷಿತ

ಹಾವೇರಿ || ಜಮ್ಮು ಕಾಶ್ಮೀರ ಪ್ರವಾಸ ತೆರಳಿರುವ ವಿಜಯನಗರ, ಹಾವೇರಿ, ಶಿಗ್ಗಾವಿ ಕುಟುಂಬಸ್ಥರು ಸುರಕ್ಷಿತ

ಹಾವೇರಿ: ಜಮ್ಮು ಕಾಶ್ಮೀರದಲ್ಲಿ ಪಹಲ್ಗಾಮ್ನಲ್ಲಿ ಮಂಗಳವಾರ ಉಗ್ರರ ಅಟ್ಟಹಾಸಕ್ಕೆ 26 ಮಂದಿ ಪ್ರಾಣ ಕಳೆದುಕೊಂಡಿದ್ಧಾರೆ. ಘಟನೆಯು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಇದೇ ವೇಳೆ ಜಮ್ಮು ಕಾಶ್ಮೀರದ ಪ್ರವಾಸದಲ್ಲಿರುವ ಹಾವೇರಿ ಜಿಲ್ಲೆಯ ಎರಡು ಕುಟುಂಬಸ್ಥರು ಸುರಕ್ಷಿತರಾಗಿದ್ದಾರೆ.

ಕಳೆದ ಮೂರು ದಿನಗಳಿಂದ ಜಮ್ಮು ಕಾಶ್ಮೀರದ ಪ್ರವಾಸದಲ್ಲಿರುವ ಹಾವೇರಿಯ ವಿರೇಶ್ ದಂಪತಿ ಹಾಗೂ ಶಿಗ್ಗಾವಿಯ ನಾಗರಾಜ್ ದಂಪತಿಯ ಕುಟುಂಬದವರು ಸೇಫ್ ಆಗಿದ್ದಾರೆ. ಸದ್ಯ ಜಮ್ಮುವಿನ ಕತ್ರಾದಲ್ಲಿರುವ ಇವರು ತಾವೆಲ್ಲಾ ಸುರಕ್ಷಿತವಾಗಿ ಇರುವುದಾಗಿ ತಮ್ಮ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಹಾವೇರಿಯ ಈ ಪ್ರವಾಸಿಗರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಸಂಬಂಧಿಕರು ಆತಂಕದಲ್ಲಿದ್ದರು. ಇದೀಗ ಕರೆ ಮಾಡಿರುವ ಈ ಕುಟುಂಬಗಳು ತಾವು ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದು, ಸಂಬಂಧಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯನಗರದ ನಾಲ್ವರು ಸೇಫ್: ಕಾಶ್ಮೀರಕ್ಕೆ ತೆರಳಿದ್ದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ನಾಲ್ವರು ಪ್ರವಾಸಿಗರು ಸೇಫ್ ಆಗಿದ್ದಾರೆ. ದಾಳಿ ನಡೆದ ಸಂದರ್ಭದಲ್ಲಿ ಈ ಕುಟುಂಬವು ಪಹಲ್ಗಾಮ್ನಿಂದ ದೂರವಿತ್ತು ಎಂದು ತಿಳಿದುಬಂದಿದೆ.

ಹರಪನಹಳ್ಳಿ ಪಟ್ಟಣದ ತೆಗ್ಗಿನಮಠ ಬಿ.ಇಡಿ ಕಾಲೇಜಿನ ಡೀನ್ ಟಿ.ಎಂ. ರಾಜಶೇಖರ್ ಕುಟುಂಬ ಸಮೇತವಾಗಿ ಕಾಶ್ಮೀರಕ್ಕೆ ಪ್ರವಾಸಕ್ಲೆ ತೆರಳಿದ್ದಾರೆ. ಬಿ.ಎಂ.ಉಮಾದೇವಿ, ಮಗಳು ಗೌರಿಕಾ ಅಳಿಯ ಕೊಟ್ರಬಸಯ್ಯ ಜೊತೆ ಕಾಶ್ಮೀರದ ಪಹಲ್ಗಾಮ್ಗೆ ರಾಜಶೇಖರ್ ತೆರಳಿದ್ದರು. ಘಟನೆಯಿಂದ ಭಯಭೀತರಾದ ರಾಜಶೇಖರ್ ಕುಟುಂಬಸ್ಥರು ಟಿಕೆಟ್ ಬುಕ್ ಮಾಡಿಕೊಂಡು ತಾಯ್ನಾಡಿಗೆ ವಾಪಸ್ ಬರುತ್ತಿದ್ದಾರೆ.

26 ಮಂದಿಯಲ್ಲಿ ಕರ್ನಾಟಕದ ಮೂವರು: ಉಗ್ರರ ದಾಳಿಯಲ್ಲಿ ಮೃತಪಟ್ಟ ಒಟ್ಟೂ 26 ಜನರಲ್ಲಿ ಕರ್ನಾಟಕದ ಮೂವರು ಸೇರಿದ್ಧಾರೆ. ಶಿವಮೊಗ್ಗದ ಮಂಜುನಾಥ್ ರಾವ್ ಅವರಲ್ಲದೆ, ಬೆಂಗಳೂರಿನ ಮತ್ತಿಕೆರೆಯಲ್ಲಿ ವಾಸವಾಗಿದ್ದ ಭರತ್ ಭೂಷಣ್ (41) ಹಾಗೂ ಬೆಂಗಳೂರಿನ ಮಧುಸೂದನ್ ಸೋಮಿಶೆಟ್ಟಿ ಎಂಬವರು ಉಗ್ರರ ಗುಂಡೇಟಿಗೆ ಬಲಿಯಾದವರು. ಇವರೆಲ್ಲರ ಮೃತದೇಹಗಳನ್ನು ರಾಜ್ಯಕ್ಕೆ ಕರೆತರಲಾಗುತ್ತಿದೆ. ಈ ಸಂಬಂಧ ಕ್ರಮ ವಹಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ಅವರು ಕಾಶ್ಮೀರಕ್ಕೆ ತೆರಳಿದ್ಧಾರೆ.

ದಾಳಿಯಲ್ಲಿ ಸಾವನ್ನಪ್ಪಿದ್ದ ಉದ್ಯಮಿ ಮಂಜುನಾಥ್ ರಾವ್ ಅವರು ಶಿವಮೊಗ್ಗದ ವಿಜಯನಗರದಿಂದ ಕಾಶ್ಮೀರಕ್ಕೆ ಕುಟುಂಬ ಸಮೇತ ತೆರಳಿದ್ದರು. ಏಪ್ರಿಲ್ 19ರಂದು ಪತ್ನಿ ಪಲ್ಲವಿ ಮತ್ತು ಪುತ್ರ ಅಭಿಜಯ ಜೊತೆಗೆ ಪ್ರವಾಸ ಕೈಗೊಂಡಿದ್ದರು. ಇವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಪತ್ನಿ ಪಲ್ಲವಿ ಚಿಕ್ಕಮಗಳೂರು ಜಿಲ್ಲೆಯ ಬಿರೂರಿನ ಮ್ಯಾಮ್ಕೋಸ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪುತ್ರ ಅಭಿಜಯ ಅವರು ಇತ್ತೀಚೆಗೆ ಪ್ರಕಟವಾದ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಶೇಕಡಾ 97ರಷ್ಟು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದರು. ಪುತ್ರನ ಸಾಧನೆಯನ್ನು ಸಂಭ್ರಮಿಸಲು ಅವರು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು.

ಅಲ್ಲದೆ, ದಾಳಿಯಲ್ಲಿ ಮೃತಪಟ್ಟ ಮತ್ತೋರ್ವರಾದ ಭರತ್ ಭೂಷಣ್ ಅವರು ಕಳೆದ ಒಂದು ವಾರದ ಹಿಂದಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಮೂರು ವರ್ಷದ ಮಗು ಹಾಗೂ ಪತ್ನಿ ಸುಜಾತ ಜೊತೆ ಕಾಶ್ಮೀರಕ್ಕೆ ತೆರಳಿದ್ದರು. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಭರತ್, ಪ್ರಸ್ತುತ ಭದ್ರಪ್ಪ ಲೇಔಟ್ನಲ್ಲಿ ಡಯಾಗ್ನೊಸ್ಟಿಕ್ ಸೆಂಟರ್ ಮಾಲೀಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *