ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವತಿಯಿಂದ ಕಟ್ಟಡಗಳ ಭಗ್ನಾವಶೇಷಗಳ ಎಲ್ಲೆಂದರಲ್ಲಿ ಹಾಕುವವರಿಗೆ ಖಡಕ್ ಎಚ್ಚರಿಕೆ ನೀಡಿದೆ. ಈ ಸಂಬಂಧ ಪಾಲಿಕೆಎ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದೆ. ಕೇವಲ ಎರಡು ದಿನಗಳಲ್ಲಿ 458 ಸ್ಥಳಗಳಲ್ಲಿ ಅಂದಾಜು 3,570 ಟನ್ ತ್ಯಾಜ್ಯ/ಕಟ್ಟಡ ಭಗ್ನಾವಶೇಷಗಳನ್ನು ತೆರವುಗೊಳಿಸಲಾಗಿದೆ.

ಬೆಂಗಳೂರಿನಾದ್ಯಂತ 10 ದಿನಗಳ ಕಾಲ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನವು ಎಲ್ಲಾ ವಲಯಗಳಲ್ಲಿ ಸಕ್ರಿಯವಾಗಿ ನಡೆಯುತ್ತಿದೆ. ವಲಯ ಆಯುಕ್ತರುಗಳು ಕೂಡಾ ಸ್ವಚ್ಛತಾ ಕಾರ್ಯ ನಡೆಯುತ್ತಿರುವ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಸ್ವಚ್ಚತಾ ಕಾರ್ಯ ನಡೆಯುತ್ತಿರುವ ಸ್ಥಳಗಳಲ್ಲಿ ಖುದ್ದಾಗಿದ್ದು, ತೆರವು ಕಾರ್ಯಾಚರಣೆ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಸಲುವಾಗಿ ಕಾರ್ಯ ಪ್ರವೃತ್ತರಾಗಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಬದಿ, ಖಾಲಿ ಜಾಗದಲ್ಲಿ ಬಿದ್ದಿರುವ ತ್ಯಾಜ್ಯ, ಕಟ್ಟಡ ಭಗ್ನಾವಶೇಷಗಳು, ಮರದ ದಿಮ್ಮಿ/ಕೊಂಬೆಗಳನ್ನು ತೆವುಗೊಳಿಸಲಾಗುತ್ತಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಬರೋಬ್ಬರಿ 1,533 ಸ್ಥಳಗಳ ಗುರುತು ಮಾಡಿದ್ದಾರೆ. ಬೆಂಗಳೂರು ನಗರದ 8 ವಲಯಗಳಲ್ಲಿ 1,533 ಸ್ಥಳಗಳಲ್ಲಿ ತ್ಯಾಜ್ಯ/ಕಟ್ಟಡ ಭಗ್ನಾವಶೇಷಗಳಿರುವ ಸ್ಥಳಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ ಈಗಾಗಲೇ 458 ಸ್ಥಳಗಳಲ್ಲಿ ಶೇಕಡಾ 30 ರಷ್ಟು ಅಂದಾಜು 3,570 ಟನ್ ತ್ಯಾಜ್ಯವನ್ನು ತೆರವುಗೊಳಿದಲಾಗಿದೆ. ಬಾಕಿ 1075 ಸ್ಥಳಗಳಲ್ಲಿ ಶೀಘ್ರಗತಿಯಲ್ಲಿ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಜೆಸಿಬಿ, ಟಿಪ್ಪರ್ ಗಳ ಬಳಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಎಂಟೂ ವಲಯಗಳಲ್ಲಿ 13 ಕ್ಕೂ ಹೆಚ್ಚು ಜೆಸಿಬಿ, 10 ಕ್ಕೂ ಹೆಚ್ಚು ಟಿಪ್ಪರ್ಸ್, 60ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಹಾಗೂ 170 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಬಳಸಿಕೊಂಡು ಸ್ವಚ್ಛತಾ ಕಾರ್ಯವನ್ನು ನಡೆಸಲಾಗುತ್ತಿದೆ.
ತ್ಯಾಜ್ಯ ಬಿಸಾಡದಂತೆ ನಾಗರಿಕರಲ್ಲಿ ಮನವಿ ನಗರದಲ್ಲಿ ರಸ್ತೆ ಬದಿ, ಖಾಲಿ ಜಾಗಗಳಲ್ಲಿ ತ್ಯಾಜ್ಯವನ್ನು ಬಿಸಾಡದೆ, ಪ್ರತಿನಿತ್ಯ ಮನೆ-ಮನೆ ಭೇಟಿ ನೀಡಿ ತ್ಯಾಜ್ಯ ಸಂಗ್ರಹಿಸುವ ಆಟೋ ಟಿಪ್ಪರ್ ಗಳಿಗೆ ತ್ಯಾಜ್ಯವನ್ನು ನೀಡಲು ಎಲ್ಲಾ ನಾಗರಿಕರಲ್ಲಿ ಮನವಿ ಬಿಬಿಎಂಪಿ ಮನವಿ ಮಾಡಿದೆ.
ಕಸ ಬಿಸಾಡುವ ಸ್ಥಳಗಳು ಕಂಡರೆ 1533 ಸಹಾಯವಾಣಿಗೆ ಕರೆ ಮಾಡಿ ನಗರದಲ್ಲಿ ಕಸ ಬಿಸಾಡುವ ಸ್ಥಳಗಳು ಕಂಡಲ್ಲಿ ಪಾಲಿಕೆಯ ಸಹಾಯವಾಣಿ ಸಂಖ್ಯೆಯಾದ 1533 ಗೆ ಕರೆ ಮಾಡಿ ದೂರು ನೀಡಬಹುದು. ಇಲ್ಲವೇ ಸಹಾಯ 2.0 ತಂತ್ರಾಂಶದ (https://play.google.com/store/apps/details?id=com.nammabengaluruNew.org) ಮೂಲಕವೂ ಕಸದ ವಿಚಾರವಾಗಿ ದೂರುಗಳನ್ನು ನೀಡಲು ಕೋರಿದೆ.