ಬೆಳಗಾವಿ || ಭಾರತದ ಮೇಲೆ Terrorist attacks : BJP ಅಧಿಕಾರದಲ್ಲಿ ಮಾತ್ರ ಹೆಚ್ಚಳ – Surjewala

ಬೆಳಗಾವಿ || ಭಾರತದ ಮೇಲೆ Terrorist attacks : BJP ಅಧಿಕಾರದಲ್ಲಿ ಮಾತ್ರ ಹೆಚ್ಚಳ - Surjewala

ಬೆಳಗಾವಿ: “ಭಾರತ ದೇಶದ ಮೇಲೆ ಉಗ್ರರ ದಾಳಿ ಆದಾಗ ಬಿಜೆಪಿ ಸರ್ಕಾರವೇ ಏಕೆ ಇರುತ್ತದೆ ಅಂತಾ ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಪಾಕ್ ಉಗ್ರರಿಂದ ಐಸಿ 814 ವಿಮಾನ ಹೈಜಾಕ್ ಮಾಡಿ ಕಂದಹಾರ್‌ಗೆ ಒಯ್ದಾಗ ಮೌಲಾನಾ ಮಸೂದ್ ಅಝರ್ ಸೇರಿದಂತೆ ಎಲ್ಲ ಉಗ್ರರನ್ನು ಅತಿಥಿಗಳಂತೆ ಬೀಳ್ಕೊಡುಗೆ ಮಾಡಲಾಯಿತು. ಈ ಬಗ್ಗೆ ರಾಜ್ಯ ಹಾಗೂ ದೇಶದ ಬಿಜೆಪಿ ನಾಯಕರು ಉತ್ತರಿಸುತ್ತಾರಾ” ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಪ್ರಶ್ನಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಬಿಜೆಪಿ ಸರ್ಕಾರ ಇದ್ದಾಗ ಇಷ್ಟು ದುರ್ಬಲ ಸರ್ಕಾರ ಇರುತ್ತದೆ ಎಂದರೆ, ದೇಶದ ಸಂಸತ್ ಮೇಲೂ ದಾಳಿ ಆಯಿತು. ಇದೇ ಬಿಜೆಪಿ ಸರ್ಕಾರದಲ್ಲಿ ಪಠಾಣ್‌ಕೋಟ್ ಏರ್‌ಬೇಸ್ ಮೇಲೆ ಉಗ್ರರ ದಾಳಿ ನಡೆಯಿತು. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದರು. ಉರಿ ಆರ್ಮಿ ಬೇಸ್ ಮೇಲೆಯೂ ಉಗ್ರರ ದಾಳಿ ನಡೆದಿದೆ. ಪುಲ್ವಾಮಾದಲ್ಲಿ ನಮ್ಮ ಸೇನಾ ವಾಹನದ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸಿನಿಮಾ ಚಿತ್ರೀಕರಣ ಮಾಡ್ತಿದ್ದರು” ಎಂದು ಕಿಡಿಕಾರಿದರು.

“ನಗೋಟಾ ಆರ್ಮಿ ಬೇಸ್ ಮೇಲೆ ದಾಳಿ ಆಯಿತು. ಬಿಜೆಪಿ ಸರ್ಕಾರ ಇದ್ದಾಗ ಅಮರನಾಥ ಯಾತ್ರಾರ್ಥಿಗಳ ಮೇಲೆ ಉಗ್ರರು ದಾಳಿ ಮಾಡಿ ಹತ್ಯೆ ಮಾಡಿದರು. ಈಗ ಪಹಲ್ಗಾಮ್‌ನಲ್ಲಿ ಕರ್ನಾಟಕದವರು ಸೇರಿ 26 ಜನ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಇದಕ್ಕೆ ಕಾರಣ ಏನು ಮೋದಿಜಿ ಎಂದು ಪ್ರಶ್ನಿಸಿದ ಸುರ್ಜೇವಾಲಾ, “ಯಾವಾಗ ಯಾವಾಗ ಬಿಜೆಪಿ ಸರ್ಕಾರ ಇರುತ್ತದೆ. ಆಗ ಉಗ್ರರ ದಾಳಿ ಆಗುತ್ತದೆ. ಮತ್ತು ಸರ್ಕಾರ ಮಲಗಿರುತ್ತದೆ” ಎಂದು ಸುರ್ಜೇವಾಲಾ ಆರೋಪಿಸಿದರು.

“ಬಿಜೆಪಿಯ ಪಾಕಿಸ್ತಾನ ಪ್ರೇಮವನ್ನು ರಾಜ್ಯ ಬಿಜೆಪಿ ನಾಯಕರಿಗೆ ನೆನಪಿಸಬೇಕಿದೆ. ದೇಶದ ಇತಿಹಾಸದಲ್ಲೇ ಆಹ್ವಾನ ಇಲ್ಲದೇ ಪಾಕಿಸ್ತಾನಕ್ಕೆ ಹೋಗಿದ್ದು ಪ್ರಧಾನಿ ಮೋದಿ ಮಾತ್ರ. ಪಾಕ್‌ಗೆ ಹೋಗಿ ಮೋದಿ ಕೇಕ್ ಕತ್ತರಿಸಿ ಬಂದಾಗ ಪಠಾಣ್‌ಕೋಟ್ ದಾಳಿ ರಿಟರ್ನ್ ಗಿಫ್ಟ್ ಆಗಿ ಪಾಕಿಸ್ತಾನ ಕೊಟ್ಟಿತ್ತು. ಮೋದಿ ಪ್ರಧಾನಿ, ಅಮಿತ್ ಶಾ ಗೃಹಮಂತ್ರಿ ಇದ್ದಾಗ ಬಿಜೆಪಿ ಸರ್ಕಾರ ಪಠಾಣ್‌ಕೋಟ್ ದಾಳಿ ತನಿಖೆಗೆ ಐಎಸ್‌ಐಯನ್ನು ಭಾರತಕ್ಕೆ ಆಹ್ವಾನಿಸಿತ್ತು” ಎಂದು ದೂರಿದರು.

“ಹಲವು ಬಾರಿ ಬಿಜೆಪಿ ನಾಯಕರು ಹಾಗೂ ಐಎಸ್‌ಐಗೆ ಲಿಂಕ್ ಇದೆ. ಬಜರಂಗದಳದ ಬಲರಾಮ್ ಸಿಂಗ್ ಐಎಸ್ಐ ಪರ ಕೆಲಸ ಮಾಡುತ್ತಿದ್ದಾಗ ಸಿಕ್ಕಿಕೊಂಡಿದ್ದರು. ಡಿಆರ್‌ಡಿಒದಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್ ಐಎಸ್ಐ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಆರ್‌ಎಸ್‌ಎಸ್ ಜೊತೆ ಸಂಬAಧ ಇತ್ತು ಇಲ್ವಾ..? ಜಮ್ಮು ಕಾಶ್ಮೀರದಲ್ಲಿ ಆಸೀಫಾರನ್ನು ಬೇಟಿ ಬಚಾವೋ ಬೇಟಿ ಪಡಾವೋ ಮುಖವಾಡ ಹಾಕಿದ್ದ ಬಿಜೆಪಿ, ಅದೇ ಆಸೀಫಾ ಪಾಕ್‌ನಲ್ಲಿ ಉಗ್ರನ ಜೊತೆ ಸೇರಿ ಭಾರತದ ವಿರುದ್ಧ ವಿಷಕಾರಿದ್ದಳು ಅಲ್ಲವೇ?” ಎಂದು ಸುರ್ಜೇವಾಲಾ ಪ್ರಶ್ನಿಸಿದರು.

“ಉಗ್ರರ ಮಟ್ಟ ಹಾಕಲು ಸರ್ಕಾರದ ಪ್ರತಿಯೊಂದು ಕಾರ್ಯಕ್ಕೆ ಬೆಂಬಲ ನೀಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ಪಹಲ್ಗಾಮ್ ಉಗ್ರರ ದಾಳಿ ಇಂಟಲಿಜೆನ್ಸ್ ಹಾಗೂ ಭದ್ರತಾ ವೈಫಲ್ಯ ಅಲ್ಲವೇ? ಅಲ್ಲಿ ಪೊಲೀಸ್ ಸುರಕ್ಷತೆ ಏಕೆ ಇರಲಿಲ್ಲ? ಪಹಲ್ಗಾಮ್‌ನಲ್ಲಿ ಮೂರು ಹಂತದ ಭದ್ರತೆ ಇದ್ದರೂ ದಾಳಿ ಆದ ಜಾಗದಲ್ಲಿ ಭದ್ರತೆ ಏಕೆ ಇರಲಿಲ್ಲ? ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದ ಮೇಲೆ ಇಷ್ಟೊಂದು ದೊಡ್ಡ ಉಗ್ರರ ದಾಳಿ ಹೇಗೆ ಆಯಿತು? ಎಲ್ಲಾ ಉಗ್ರರ ದಾಳಿ ಬಿಜೆಪಿಯವರ ಮೂಗಿನ ಕೆಳಗೆ ಆಗಿದೆ. ಭದ್ರತಾ ವೈಫಲ್ಯಕ್ಕೆ ಬಿಜೆಪಿ ಸರ್ಕಾರವೇ ಜವಾಬ್ದಾರಿ” ಎಂದ ರಣದೀಪ್ ಸಿಂಗ್ ಸುರ್ಜೇವಾಲಾ ಗಂಭೀರ ಆರೋಪ ಮಾಡಿದರು.

ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಕಾಂಗ್ರೆಸ್ ಬೆಂಬಲಿಸುತ್ತದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸುರ್ಜೇವಾಲಾ, “ನಾನು ಈಗಾಗಲೇ ಮೂರು ಬಾರಿ ಹೇಳಿದ್ದೇನೆ. ನಮ್ಮ ಪಕ್ಷ ಕೇಂದ್ರದ ಜೊತೆಗೆ ಬೆಂಬಲವಾಗಿ ಇರುತ್ತದೆ” ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *