ಬೆಳಗಾವಿ || CM ಭಾಷಣಕ್ಕೆ ಅಡ್ಡಿ, ಕಪ್ಪುಬಟ್ಟೆ ಪ್ರದರ್ಶನ: 6 BJP ಕಾರ್ಯಕರ್ತೆಯರಿಗೆ ಷರತ್ತುಬದ್ಧ ಜಾಮೀನು

ಬೆಳಗಾವಿ || CM ಭಾಷಣಕ್ಕೆ ಅಡ್ಡಿ, ಕಪ್ಪುಬಟ್ಟೆ ಪ್ರದರ್ಶನ: 6 BJP ಕಾರ್ಯಕರ್ತೆಯರಿಗೆ ಷರತ್ತುಬದ್ಧ ಜಾಮೀನು

 ಬೆಳಗಾವಿ: ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿ ಕಪ್ಪುಬಟ್ಟೆ ಪ್ರದರ್ಶನ  ಮಾಡಿದ ಬಿಜೆಪಿಯ ಆರು ಮಹಿಳಾ ಕಾರ್ಯಕರ್ತೆಯರ ವಿರುದ್ಧ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಪ್ಪು ಬಟ್ಟೆ ಪ್ರದರ್ಶಿಸಿದ್ದು ಅಲ್ಲದೇ ಸಮಾವೇಶದ ವೇದಿಕೆಯತ್ತ ನುಗ್ಗಲು ಯತ್ನಿಸಿದ ಬಿಜೆಪಿಯ ಶಿಲ್ಪಾ ಕೇಕರೆ, ಪವಿತ್ರಾ ಹಿರೇಮಠ, ರೇಷ್ಮಾ ಬರಮೂಚೆ, ಮಂಜುಳಾ ಹಣ್ಣೀಕೇರಿ, ಅನ್ನಪೂರ್ಣಾ ಹವಳ ಮತ್ತು ಸುಮಿತ್ರಾ ಜಾಲಗಾರ ವಿರುದ್ಧ ಬಿಎನ್ಎಸ್ 189(1)(C), ಬಿಎನ್ಎಸ್ 352 ಅಡಿ ಪ್ರಕರಣ ದಾಖಲಾಗಿತ್ತು.

ಸಮಾವೇಶದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದ್ದರಿಂದ ತಕ್ಷಣವೇ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ನಡೆಸಲು ಅವರನ್ನು ಕರೆ ತಂದಿದ್ದರು. ಇಲ್ಲಿಯ ವೈದ್ಯರು ತಪಾಸಣೆ ನಡೆಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಯಿತು.

ಪ್ರಕರಣ ದಾಖಲಾಗುತ್ತಿದ್ದಂತೆ ಬಿಜೆಪಿ ನಾಯಕರು ಜಾಮೀನಿಗೆ ಅರ್ಜಿ ಸಲ್ಲಿಸಿದರು. ಬೆಳಗಾವಿಯ ಐದನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಸ್ಪರ್ಷಾ ಡಿಸೋಜಾ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತೆಯರ ಪರ ವಿನೋದ್ ಕುಮಾರ್ ಪಾಟೀಲ್, ಧನ್ಯಕುಮಾರ್ ಪಾಟೀಲ್ ವಕಾಲತ್ತು ವಹಿಸಿದ್ದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪ: ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂದು ಹೇಳಿಕೆ ನೀಡಿ, ನೀವು ವೈರಿ ರಾಷ್ಟ್ರಕ್ಕೆ ಬೆಂಬಲಿಸುತ್ತಿದ್ದೀರಿ. ನಿಮಗೆ ಏನು ನೈತಿಕತೆಯಿದೆ ಎಂದು ಪ್ರಶ್ನಿಸಿ, ಪ್ರತಿಭಟಿಸಲು ಹೋದಾಗ ನಮ್ಮ ಬಿಜೆಪಿ ಕಾರ್ಯಕರ್ತೆಯರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದೌರ್ಜನ್ಯ ಎಸಗಿದ್ದಾರೆ. ಪೊಲೀಸ್ ಬಲಪ್ರಯೋಗದ ಮೇಲೆ ನಮ್ಮ ಮಹಿಳಾ ಕಾರ್ಯಕರ್ತೆಯರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುದ್ಧದ ಅವಶ್ಯಕತೆ ಇಲ್ಲ. ನಾವು ಬುದ್ಧನ ನಾಡಿನವರು. ಪಾಕಿಸ್ತಾನ ಜೊತೆಗೆ ಯುದ್ಧ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇಡೀ ದೇಶದ ಜನರು ಭಯೋತ್ಪಾದಕ ಕೃತ್ಯವನ್ನು ಖಂಡಿಸಿದ್ದಾರೆ. ಅಲ್ಲದೇ ಅದರ ಹಿಂದಿರುವ ಪಾಕಿಸ್ತಾನದ ಕೃತ್ಯವನ್ನು ಖಂಡಿಸಿ ಅನೇಕ ರಾಷ್ಟ್ರಗಳು ಭಾರತದ ಜೊತೆಗೆ ನಿಂತಿವೆ. ಇಂಥ ಸಂದರ್ಭದಲ್ಲಿ ಜನರ ಮನಸ್ಸಿಗೆ ವಿರುದ್ಧವಾದ ಹೇಳಿಕೆ ನೀಡಿದ್ದರಿಂದ ಸಿದ್ದರಾಮಯ್ಯ ಅವರ ವಿರುದ್ಧ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಹಾಗಾಗಿ, ನಮ್ಮವರು ಅದನ್ನು ಪ್ರಶ್ನಿಸಲು ಹೊರಟಿದ್ದರು” ಎಂದು ಸಮರ್ಥಿಸಿಕೊಂಡರು.

“ನಮ್ಮ ಮಹಿಳಾ ಕಾರ್ಯಕರ್ತೆಯರನ್ನು ಪೊಲೀಸರು ಠಾಣೆಯಿಂದ ಠಾಣೆಗೆ ಅಲೆದಾಡಿಸುತ್ತಿದ್ದಾರೆ. ಇದು ಸಿ.ಟಿ.ರವಿ ಪ್ರಕರಣವನ್ನು ಮರುಕಳಿಸುವಂತಾಗಿದೆ” ಎಂದು ಆರೋಪಿಸಿದ ಈರಣ್ಣ ಕಡಾಡಿ, “ಇಷ್ಟು ದಿನ ಕಾಂಗ್ರೆಸ್ ಪಕ್ಷ ದುರಾಡಳಿತಕ್ಕೆ ಹೆಸರಾಗಿತ್ತು. ಇಂದು ಓರ್ವ ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡುವ ಮೂಲಕ ಅವರ ದುರಹಂಕಾರವನ್ನು ಎತ್ತಿ ತೋರಿಸಿದ್ದಾರೆ. ಮುಖ್ಯಮಂತ್ರಿ ಸಂಯಮ ಕಳೆದುಕೊಂಡಿದ್ದಾರೆ. ಹಾಗಾಗಿ, ಈ ರೀತಿ ನಮ್ಮ ಕಾರ್ಯಕರ್ತೆಯರ ಮೇಲೆ ಕೇಸ್ ಹಾಕುವ ಕ್ರಮ ಖಂಡನೀಯ ಎಂದರು.

Leave a Reply

Your email address will not be published. Required fields are marked *