ಬೆಂಗಳೂರು; ಪಹಲ್ಗಾಮ್ ನಲ್ಲಿ 26 ಜನ ಹಿಂದೂ ಧಾರ್ಮಿಕ ಪ್ರವಾಸಿಗರನ್ನು ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಕೊಂದು ನರಮೇಧ ನಡೆಸಿರುವುದನ್ನು ಆರ್.ಪಿ.ಐ. ತೀವ್ರವಾಗಿ ಖಂಡಿಸುತ್ತದೆ.

ಪುಲ್ವಾಮ ಧಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಲ್ಲಿ ಯಶಸ್ವಿ ಹೆಜ್ಜೆಗಳು ಹಾಕಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಸಂದರ್ಭದಲ್ಲಿ ಪೆಹಲಾಮ್ ನಲ್ಲಿ ನಡೆದಿರುವ ನರಮೇಧವನ್ನು ಇಡೀ ದೇಶವೇ ಒಕ್ಕೊರಲಿನಿಂದ ಖಂಡಿಸಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿರುವ ಇಂದಿನ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಪಾಕಿಸ್ತಾನದಲ್ಲಿ ಸಂಭ್ರಮಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು.
ಕೇಂದ್ರ ಸರ್ಕಾರದ ವೈಫಲ್ಯತೆಯಿಂದ ಈ ಧಾಳಿ ನಡೆದಿದೆ ಎಂದು ಮುಖ್ಯಮಂತ್ರಿಗಳು ಹೇಳಿರುವುದೂ ಸಹ ಖಂಡನಾರ್ಹ. ಇದು ಮುಖ್ಯಮಂತ್ರಿಗಳ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂದು ಕೇಂದ್ರ ಸರ್ಕಾರವು ಗಂಭೀರ ಪ್ರಯತ್ನಗಳನ್ನು ನಡೆಸಿರುವಾಗ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ತೀಟೆಯ ಹೇಳಿಕೆ ನೀಡಿರುವುದನ್ನು ಅಕ್ಷಮ್ಯ ಎಂದು ಹೇಳಲಿಚ್ಚಿಸುತ್ತೇವೆ. ಭಾರತೀಯ ಪ್ರವಾಸಿಗರ ಮೇಲೆ ಪಾಕಿಸ್ತಾನದ ಭಯೋತ್ಪಾದಕರು ನಡೆಸಿರುವ ನರಮೇಧಕ್ಕೆ ಕೇಂದ್ರ ಸರ್ಕಾರವು ತಕ್ಕ ಉತ್ತರ ನೀಡಲು ಹಿಂಜರಿಯಬಾರದೆಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ (ಅಠವಳೆ) ಪಕ್ಷವು ಆಗ್ರಹಿಸುತ್ತದೆ.
ಈ ಧಾಳಿಯಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿಯ ಮೌನಾಚರಣೆಯನ್ನು ಆರ್.ಪಿ.ಐ. ದೇಶದೆಲ್ಲಡೆ ಆಚರಿಸುತ್ತಿದೆ. ಭಯೋತ್ಪಾದನೆ ನಿಗ್ರಹಕ್ಕೆ ಕೇಂದ್ರ ಸರ್ಕಾರದ ಜೊತೆ ಆರ್ಪಿ.ಐ. ಸದಾ ನಿಲ್ಲುತ್ತದೆ. ಧಾಳಿಯಲ್ಲಿ ಮೃತಪಟ್ಟ ನಮ್ಮ ರಾಜ್ಯದ ಭರತ್ ಭೂಷಣ್ ಮತ್ತು ಮಂಜುನಾಥ್ ಅವರ ಕುಟುಂಬಗಳಿಗೆ ರಾಜ್ಯ ಸರ್ಕಾರವು ತಲಾ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ರಾಷ್ಟ್ರೀಯ ರಾಜ್ಯಾಧ್ಯಕ್ಷ ಡಾ. ಎಂ ವೆಂಕಟಸ್ವಾಮಿ ತಿಳಿಸಿದರು