ಇದೀಗ ರೈತರು ಸಾಂಪ್ರದಾಯಿಕ ಕೃಷಿಯಿಂದ ಹೊರಬಂದು ಅದರಲ್ಲೂ ಏಕ ಕೃಷಿಪದ್ಧತಿಗೆ ಜೋತು ಬೀಳದೆ ಹೊಸ ಪ್ರಯೋಗಗಳನ್ನು ಮಾಡುತ್ತಾ ರಾಸಾಯನಿಕ ಮುಕ್ತ ಕೃಷಿಗೆ ಒತ್ತು ನೀಡುತ್ತಾ ನೈಸರ್ಗಿಕ ಕೃಷಿ ಕಡೆಗೆ ರೈತರು ಒತ್ತು ನೀಡುತ್ತಿರುವುದು ಇತ್ತೀಚೆಗಿನ ಬೆಳವಣಿಗೆಯಾಗಿದೆ. ಬಹುಬೆಳೆ, ಕೃಷಿ ಜೊತೆಗೆ ಸಾವಯವ ಕೃಷಿಯೂ ಗಮನಾರ್ಹವಾಗಿದ್ದು, ಆರೋಗ್ಯದ ದೃಷ್ಟಿಯಿಂದ ಜನರು ಕೂಡ ಸಾವಯವ ಬೆಳೆಯನ್ನು ಬಯಸುತ್ತಿರುವುದರಿಂದ ಬೇಡಿಕೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ರೈತರು ಕೃಷಿಯನ್ನು ಅಳವಡಿಸಿಕೊಂಡರೆ ಲಾಭ ಪಡೆಯಲು ಸಾಧ್ಯವಾಗಲಿದೆ.

ಇವತ್ತು ರೈತರು ಸಮಸ್ಯೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಕಾರಣ ಏಕ ಬೆಳೆಯತ್ತ ಮುಖ ಮಾಡಿರುವುದಾಗಿದೆ. ಸಾಕಷ್ಟು ಬಂಡವಾಳ ಸುರಿದು ಬೆಳೆ ಬೆಳೆದರೂ ಕಾಲಕ್ಕೆ ತಕ್ಕಂತೆ ಬೇಡಿಕೆ ಇರದೆ ಹೋದರೆ ಮತ್ತು ಸೂಕ್ತ ದರ ಸಿಗದೆ ಹೋದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದುದರಿಂದ ಮಿಶ್ರ ಬೇಸಾಯದ ಮೂಲಕ ಕೃಷಿಯಲ್ಲಿಯೂ ಲಾಭದಾಯಕ ಬದುಕನ್ನು ಕಂಡುಕೊಳ್ಳುವತ್ತ ರೈತರು ಮುಂದಾಗುವುದು ಇಂದಿನ ಅನಿವಾರ್ಯವಾಗಿದೆ. ರೈತ ನೇತಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿರವರ ಅನುಯಾಯಿಗಳು. ಬಹಳಷ್ಟು ಪ್ರಯೋಗಗಳನ್ನು ಮಾಡಿರುವುದನ್ನು ನಾವು ಕಾಣಬಹುದಾಗಿದೆ.
ತಮಗಿರುವ ಜಮೀನಿನಲ್ಲಿ ಒಂದೇ ಒಂದು ಬೆಳೆ ಬೆಳೆದರೆ ಅದರಿಂದ ನಷ್ಟವೇ ಜಾಸ್ತಿ ಎಂಬುದನ್ನರಿತು ನೈಸರ್ಗಿಕ ಕೃಷಿಯ ಮೂಲಕ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ಭೂಮಿಗೆ ಯಾವುದೇ ರಾಸಾಯನಿಕ ಗೊಬ್ಬರವಾಗಲೀ, ಕ್ರಿಮಿನಾಶಕ ಔಷಧಿಯನ್ನಾಗಲೀ ಸಿಂಪಡಿಸದೇ ತಾವು ಸಾಕಿದ ಹಸುಗಳಿಂದ ತಯಾರಾದ ಗೊಬ್ಬರ ಹಾಗೂ ಗಂಜಲದಿಂದ ಬೆಳೆಗಳಿಗೆ ಸಿಂಪಡಣೆ ಮಾಡಿ, ಆಧುನಿಕ ಉಪಕರಣಗಳ ಗೋಜಿಗೆ ಸಿಲುಕದೇ ಸಾಂಪ್ರದಾಯಿಕ ಶೈಲಿಯಲ್ಲಿ ಕೃಷಿಯನ್ನು ಸುಭಾಷ್ ಪಾಳೇಕಾರ್ರವರನ್ನು ಅನುಸರಣೆಯಲ್ಲಿ ಮಾಡುತ್ತಾ ನಷ್ಟದಿಂದ ಮುಕ್ತರಾಗಿರುವ ರೈತರು ಇವತ್ತು ಬಹಳಷ್ಟು ಕಡೆಗಳಲ್ಲಿ ಕಾಣಸಿಗುತ್ತಾರೆ.
ರೈತರೇ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು ತಮಗಿರುವ ಜಮೀನಿನಲ್ಲಿ ಏಕ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳದೆ, ಹತ್ತಾರು ಬಗೆಯ ತರಕಾರಿಗಳು, ಸೊಪ್ಪುಗಳು ಹಾಗೂ ಹಣ್ಣು-ಹಂಪಲುಗಳನ್ನು ನೈಸರ್ಗಿಕವಾಗಿ ಬೆಳೆದು, ತಾವು ಬೆಳೆದಂತಹ ಬೆಳೆಗೆ ಯಾವುದೇ ದಲ್ಲಾಳಿಯ ಮೊರೆ ಹೋಗದೇ ತಮ್ಮ ಜಮೀನಿನ ರಸ್ತೆ ಬದಿಯಲ್ಲಿ ಅಂಗಡಿ ನಿರ್ಮಿಸಿ ಮಾರಾಟ ಮಾಡುವ ಮೂಲಕ ತಾವೇ ಸ್ವತಃ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡ ರೈತರು ಕೂಡ ನಮ್ಮ ನಡುವೆ ಇದ್ದಾರೆ. ನೈಸರ್ಗಿಕವಾಗಿ ಸೊಪ್ಪು, ತರಕಾರಿ ಹಾಗೂ ಹಣ್ಣು ಹಂಪಲುಗಳನ್ನು ಬೆಳೆಯುವುದರಿಂದ ನಷ್ಟವನ್ನು ತಪ್ಪಿಸಲು ಸಾಧ್ಯವಿದೆ.
ಇನ್ನು ಜೀವಾಮೃತದಿಂದ ಬೆಳೆದ ಬೆಳೆಗೆ ನಿರೀಕ್ಷಿಸಿದಷ್ಟು ಬೆಲೆ ಸಿಗುವುದರಿಂದ ನಷ್ಟವಾಗುವುದಿಲ್ಲ. ಅದರಲ್ಲೂ ಸಾವಯವ ಬೆಳೆಗೆ ಬೇಡಿಕೆ ಇದ್ದೇ ಇರುತ್ತದೆ ಇದರ ಜೊತೆಗೆ ಹೈನುಗಾರಿಕೆ ನಡೆಸಿದರೆ, ಹಸುಗಳಿಂದ ಹಾಲಿನ ಮಾರಾಟ ಮಾಡಿ ಅದರಿಂದಲೂ ಆದಾಯ ಗಳಿಸಬಹುದು. ಜತೆಗೆ ತಮ್ಮ ಹಸುಗಳಿಂದ ಉತ್ಪತ್ತಿಯಾಗುವ ಗೊಬ್ಬರ ಹಾಗೂ ಗಂಜಲದಿಂದ ಜೀವಾಮೃತ ತಯಾರಿಸಿ, ಬೆಳೆಗಳಿಗೆ ಕೀಟ ಹಾಗೂ ರೋಗಬಾಧೆ ತಗುಲಿದಾಗ ಜೀವಾಮೃತವನ್ನೇ ಸಿಂಪಡಿಸಿ, ಪರಿಹಾರ ಕಂಡುಕೊಳ್ಳಬಹುದಲ್ಲದೆ, ಗೊಬ್ಬರದಿಂದ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಮಿಶ್ರಬೆಳೆ ಬೆಳೆದರೆ ಲಾಭ ಸಾಧ್ಯ ರೈತರು ಮಳೆಗಾಲದಲ್ಲಿ ಜಮೀನಿನ ನೀರು ಬೇರೆಡೆಗೆ ಹರಿದು ಹೋಗದಂತೆ ಎಚ್ಚರಿಕೆ ವಹಿಸಿ ಜಮೀನಿನ ಸುತ್ತಲೂ ಕಾಲುವೆ ತೋಡಿ ಭೂಮಿಯಲ್ಲಿ ಅಂತರ್ಜಲ ಇಂಗುವಂತೆ ಮಾರ್ಗೋಪಾಯ ಕಂಡುಕೊಳ್ಳಬಹುದಾಗಿದೆ. ಇನ್ನು ಜಮೀನಿನಲ್ಲಿ ತೆಂಗು, ಕಬ್ಬು, ಸೀಬೆ, ಉದ್ದು, ಹೆಸರುಕಾಳು, ಅಲಸಂದೆ, ಸೂರ್ಯಕಾಂತಿ, ಸಪೋಟ, ಪರಂಗಿ, ಮೂಲಂಗಿ, ಬೆಂಡೆಕಾಯಿ, ಇರಳೆಕಾಯಿ, ಮೆಣಸಿನಕಾಯಿ, ಕುಂಬಳಕಾಯಿ, ಹೂಕೋಸು, ಗೆಡ್ಡೆಕೋಸು, ಸಬಸಿಗೆಸೊಪ್ಪು, ದಂಟಿನ ಸೊಪ್ಪು, ಕೊತ್ತಂಬರಿಸೊಪ್ಪು, ಪಪ್ಪಾಯಿ, ಹುಣಸೆ ಸೇರಿದಂತೆ ಹತ್ತಾರು ಬಗೆಯ ಸೊಪ್ಪು, ತರಕಾರಿ ಹಾಗೂ ಹಣ್ಣುಗಳನ್ನು ಸಾವಯವ ಕೃಷಿಯಲ್ಲಿಯೇ ಬೆಳೆದು ಜಮೀನಿನಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ರೈತರಿದ್ದಾರೆ. ಒಟ್ಟಾರೆ ಕೃಷಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡರೆ ರೈತರು ಆದಾಯ ಪಡೆಯಲು ಸಾಧ್ಯವಾಗಲಿದೆ ಎನ್ನುವುದರಲ್ಲಿ ಎರಡು ಮಾತಿದೆ.