ರಾಯಚೂರು: ಲೋಡೆಡ್ ಪಿಸ್ತೂಲ್ನಿಂದ ಗುಂಡು ಹಾರಿ ಬಾಲಕ ಗಾಯಗೊಂಡ ಘಟನೆ ರಾಯಚೂರು ನಗರದ ಹೆಚ್ಆರ್ಬಿ ಬಡಾವಣೆಯಲ್ಲಿ ಮೇ 3ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೊಹ್ಮದ್ ಸೋಹೆಲ್(16) ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ವಿವರ: ನಗರದ ಜಾಕೀರ್ ಹುಸೇನ್ ಸರ್ಕಲ್ನಲ್ಲಿ ಮೊಹ್ಮದ್ ಸೋಹೆಲ್ ಉಪಹಾರ ಸೇವಿಸುತ್ತಿದ್ದ. ಈ ಸಂದರ್ಭದಲ್ಲಿ ಸ್ಥಳಕ್ಕೆ ಜಿಯಾ ಸೌದಾಗರ ಎಂಬಾತ ತನ್ನ ವಾಹನದಲ್ಲಿ ಬಂದಿದ್ದಾನೆ. ಇಬ್ಬರೂ ಕೆಲಕಾಲ ವಾಹನದಲ್ಲಿ ಸುತ್ತಾಡಿದ್ದಾರೆ. ನಂತರ ಮತ್ತದೇ ಸ್ಥಳಕ್ಕೆ ಬಂದು ಸೋಹೆಲ್ನನ್ನು ಬಿಟ್ಟು ಹೋಗಿದ್ದಾನೆ. ಇದಾದ ಬಳಿಕ ಮರಳಿ ಬಂದ ಜಿಯಾ ಸೌದಾಗರ ನನ್ನ ಮನೆ ಬೀಗ ತೆಗೆಯಲಾಗುತ್ತಿಲ್ಲ, ಸಹಾಯ ಮಾಡುವಂತೆ ಸೋಹೆಲ್ನನ್ನು ಕರೆದುಕೊಂಡು ಹೋಗಿ, ಆತನ ಕೈಯಲ್ಲೇ ಬಾಗಿಲು ತೆಗೆಸಿದ್ದಾನೆ. ಮನೆಯ ಬೆಡ್ ರೂಂಗೆ ತೆರಳಿ ಇಬ್ಬರೂ ಕುಳಿತುಕೊಂಡಿದ್ದಾರೆ. ಜಿಯಾ ಸೌದಾಗರ ಬೆಡ್ ಡೆಸ್ಕ್ನಿಂದ ಪಿಸ್ತೂಲ್ ತೆಗೆದು ಸೋಹೆಲ್ಗೆ ತೋರಿಸಿ, ಅದರಲ್ಲಿ ನಾಲ್ಕು ಬುಲೆಟ್ ತುಂಬಿ ಬೆಡ್ ಮೇಲಿಟ್ಟಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ್ದು, ಮೊಹ್ಮದ್ ಸೋಹೆಲ್ನ ಬಲ ತೊಡೆಯಿಂದ ಹೊರಬಂದಿದೆ. ಆತನ ಎಡ ತೊಡೆಗೂ ಗಾಯವಾಗಿದೆ. ಚಿಕಿತ್ಸೆಗಾಗಿ ಜಿಯಾ ಸೌದಾಗರ 3 ಸಾವಿರ ರೂ. ಹಣವನ್ನು ಆನ್ಲೈನ್ ಮೂಲಕ ಕಳುಹಿಸಿದ್ದಾನೆ ಎಂದು ಸೋಹೆಲ್ ಪೊಲೀಸರಿಗೆ ತಿಳಿಸಿದ್ದಾನೆ.
ಈ ಕುರಿತು ಮೇ 11ರಂದು ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಗಾಯಾಳು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.