ಬೆಂಗಳೂರು: ರಾಜಧಾನಿ ಬೆಂಗಳೂರು ಮಂಗಳವಾರ ಸುರಿದ ಮಳೆ ಜೋರು ಮಳೆಗೆ ಅಕ್ಷರಶಃ ನಲುಗಿದೆ. ಮಧ್ಯಾಹ್ನವರೆಗೆ ಇದ್ದ ಬಿಸಿಲು ಸಂಜೆಗೆ ಮರೆಯಾಗಿ ಜೋರು ಮಳೆ ಸುರಿಯಲಾರಂಭಿಸಿತು. ಕೆಲವೆಡೆ ಅಲಿಕಲ್ಲು ಸಹಿತ ಮಳೆ ಆಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಪ್ರಮುಖ ರಸ್ತೆಗಳ ಮೇಲೆ ನೀರು ನಿಂತ ಸಂಚಾರ ಅಸ್ತವ್ಯಸ್ತವಾಯಿತು. ಕೆಲವೆಡೆ ಪ್ರವಾಹ ಸ್ಥಿತಿ ಉಂಟಾಗಿದ್ದು, ನಗರದಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುಡುಗು ಸಹಿತ ವ್ಯಾಪಕ ಮಳೆ ಸುರಿದಿದ್ದು, ಇದಕ್ಕೆ ಅಂಡಮಾನ್ ಮತ್ತು ಬಂಗಾಳಕೊಲ್ಲಿ ಭಾಗದಲ್ಲಿ ಸೃಷ್ಟಿಯಾಗಿರುವ ‘ಶಕ್ತಿ’ ಚಂಡಮಾರುತ ಕಾರಣ ಎನ್ನಲಾಗಿದೆ. ಈವರೆಗೆ ಸಹಜ ಸ್ಥಿತಿಯಲ್ಲಿದ್ದ ವಾತಾವರಣದಲ್ಲಿ ದಿಢೀರ್ ಬದಲಾವಣೆ ಆಗಿದೆ. ವೈಪರೀತ್ಯ ಸಂಭವಿಸಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಮಳೆ ಆಗುತ್ತಿದೆ. ಸದ್ಯ ಬೆಂಗಳೂರಿನ ಮಳೆಗೆ ಜನರು ತತ್ತರಿಸಿದ್ದಾರೆ.
ಸಂಜೆ ಮಾತ್ರವಲ್ಲದೇ ರಾತ್ರಿಯು ಸಹ ಧಾರಾಕಾರ ಮಳೆ ಆಗಿದೆ. ಕಲ್ಯಾಣ ನಗರದಲ್ಲಿ ಆಲಿಕಲ್ಲು ಮಳೆ ಆಗಿದೆ. ಬನಶಂಕರಿ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಾಳ, ಯಲಹಂಕ, ಲಾಲ್ ಬಾಗ್, ಮೆಜೆಸ್ಟಿಕ್, ಚಾಮರಾಜಪೇಟೆ, ಶೇಷಾದ್ರಿಪುರಂ ಹೊರಮಾವು, ಹಂಪಿನಗರ, ವಿಜಯನಗರ, ಕೆಂಗೇರಿ, ರಾಜರಾಜೇಶ್ವರಿ ನಗರ, ವಿಶ್ವೇಶ್ವರ ನಗರ, ನಂದಿನಿ ಬಡಾವಣೆ, ರಾಜಾಜಿನಗರ ಸೇರಿದಂತೆ ಮೊದಲಾದ ಸ್ಥಳಗಳಲ್ಲಿ ಧಾರಾಕಾರ ಮಳೆ ಆಗಿದೆ.
ನಗರದಲ್ಲಿ ಬಿರುಗಾಳಿ ಸಹಿತ ಬಂದ ಮಳೆಗೆ 100ಕ್ಕೂ ಹೆಚ್ಚು ಕಡೆ ಮರದ ಕೊಂಬೆಗಳು ಧರೆಗುರುಳಿವೆ. ಇಂದಿರಾನಗರ, ಹೆಬ್ಬಾಳ, ಲಾಲ್ಬಾಗ್, ವಿಜಯನಗರ ಸೇರಿದಂತೆ ವಿವಿಧೆಡೆ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ಕಲ್ಯಾಣ ನಗರ, ಸಾಯಿ ನಗರ, ರಾಜಾಜಿನಗರ, ಮೆಜೆಸ್ಟಿಕ್ ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿದೆ. ರಸ್ತೆಗಳು, ತಗ್ಗು ಪ್ರದೇಶಗಳ ಮನೆಗಳಲ್ಲಿ ಮಳೆ ನೀರು ನಿಂತುಕೊಂಡಿತ್ತು.
ರಸ್ತೆಗುಂಡಿಗಳು, ವಾಟರ್ಲಾಗಿಂಗ್ ಸಮಸ್ಯೆಯಿಂದಾಗಿ ವಾಹನ ಸವಾರರು ಸಾಕಷ್ಟು ಸಮಸ್ಯೆ ಎದುರಿಸಿದರು. ಕೆಲವು ಜಂಕ್ಷನ್ಗಳಲ್ಲಿ ಹಾಗೂ ಕೆ.ಆರ್ ಮಾರುಕಟ್ಟೆ, ಟೌನ್ಹಾಲ್, ರಾಜ್ಕುಮಾರ್ ರಸ್ತೆಯಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿತ್ತು. ಇಂದಿನ ಹವಾಮಾನ ವರದಿ ಬೆಂಗಳೂರಲ್ಲಿ ಇಂದು ಸಹ ವ್ಯಾಪಕ ಮಳೆ ಆಗಲಿದೆ. ಬೆಳಗ್ಗೆಯಿಂದ ಹೆಚ್ಚು ಬಿಸಿಲು ಮತ್ತು ಸೆಕೆಯ ವಾತಾವರಣ ಕಂಡು ಬಂದಿದೆ. ಸಂಜೆ ಹೊತ್ತಿಗೆ ಮತ್ತೆ ವಾತಾವರಣದಲ್ಲಿ ಮಬ್ಬು ಕವಿಯಲಿದೆ. ತಂಪು ವಾತಾವರಣ ಮುಂದುವರಿಯಲಿದ್ದು, ಕರ್ನಾಟಕ ಹವಾಮಾನ ಇಲಾಖೆ ಪ್ರಕಾರ, ಇಂದು ಸಹ ಬೆಂಗಳೂರಿನಲ್ಲಿ ಜೋರು ಗಾಳಿ ಸಮೇತ ಮಳೆ ಆಗಲಿದೆ. ಕೆಲವೆಡೆ ಆಲಿಕಲ್ಲು ಮಳೆ ಸಂಭವವು ಇದೆ ಎಂದು ಮುನ್ಸೂಚನೆ ನೀಡಲಾಗಿದೆ.