ತುಮಕೂರು || ಅವೈಜ್ಞಾನಿಕ ಸೇತುವೆ ಕಾಮಗಾರಿ : 3 ಗಂಟೆಗಳ ಕಾಲ ಪರದಾಟ ಸರ್ಕಾರಿ ಬಸ್

ತುಮಕೂರು || ಅವೈಜ್ಞಾನಿಕ ಸೇತುವೆ ಕಾಮಗಾರಿ : 3 ಗಂಟೆಗಳ ಕಾಲ ಪರದಾಟ ಸರ್ಕಾರಿ ಬಸ್

ತುಮಕೂರು : ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಕೆಕೆ ಪಾಳ್ಯ ಮತ್ತು ಬಸವನಹಳ್ಳಿ ನಡುವಿನ ಸೇತುವೆ ಬಳಿ ಅವೈಜ್ಞಾನಿಕ ಕಾಮಗಾರಿಯ ಪರಿಣಾಮವಾಗಿ ಸುಮಾರು ಮೂರು ಗಂಟೆಗಳ ಕಾಲ ಒಂದು ಸರ್ಕಾರಿ ಬಸ್ ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡು ಪರದಾಡಿರುವ ಘಟನೆ ನಡೆದಿದೆ.

ಈ ಬಸ್ನಲ್ಲಿ ಸುಮಾರು 25 ಪ್ರಯಾಣಿಕರು ಇದ್ದರು. ಮಳೆಗಾಲದ ನಡುವೆಯೂ ಯಾವುದೇ ಮುಂಜಾಗ್ರತೆ ವಹಿಸದೇ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ರಸ್ತೆಯೇ ಈ ಅಡಚಣೆಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.

ಸ್ಥಳೀಯರ ಪ್ರಕಾರ, ಕೇವಲ ಮೂರು ದಿನಗಳ ಹಿಂದೆ ಇದ್ದ ಹಳೆಯ ಸೇತುವೆಯನ್ನು ಮರು ಕಾಮಗಾರಿ ಹೆಸರಿನಲ್ಲಿ ತಡೆದುಹಾಕಲಾಗಿತ್ತು. ಆದರೆ ಹೊಸ ಸೇತುವೆ ಮುಗಿಯದೇ ಇರುವಂತೆಯೇ, ಪಕ್ಕದಲ್ಲಿಯೇ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿದೆ. ಮಳೆಗಾಲದಲ್ಲಿ ಪೈಪ್ ಅಳವಡಿಸದೇ, ಕೇವಲ ಮಣ್ಣು ತುಂಬಿ ರಸ್ತೆ ನಿರ್ಮಿಸಿದ್ದೇ ಬಸ್ ಸಿಕ್ಕಿಹಾಕಿಕೊಳ್ಳಲು ಕಾರಣ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಮೂರು ಗಂಟೆಗಳ ಶ್ರಮದ ನಂತರ ಬಸ್ ಅನ್ನು ಹೊರತೆಗೆಯಲಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಈ ಪ್ರಕಾರದ ನಿರ್ಲಕ್ಷ್ಯದಿಂದ ಭವಿಷ್ಯದಲ್ಲಿ ಭಾರಿ ಅನಾಹುತ ಸಂಭವಿಸಬಹುದೆಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರು ಮತ್ತು ಪ್ರಯಾಣಿಕರು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಘಟನೆಗೆ ಗಮನಹರಿಸಿ ಸೇತುವೆ ಮತ್ತು ತಾತ್ಕಾಲಿಕ ರಸ್ತೆ ಕಾಮಗಾರಿ ಶಿಸ್ತಿನಿಂದ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *