ಬೆಳ್ತಂಗಡಿ (ದಕ್ಷಿಣ ಕನ್ನಡ) : ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ನ 4ನೇ ತಿರುವಿನಲ್ಲಿ ಮೇ 22ರ ಬೆಳಗ್ಗೆ ರಸ್ತೆಗೆ ಬಂದಿದ್ದ ಕಾಡಾನೆ ಜೊತೆ ವಾಹನ ಸವಾರರು ಸೆಲ್ಫಿ, ಫೋಟೋ ತೆಗೆಯುತ್ತಿದ್ದ ವಿಡಿಯೋವೊಂದು ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ಧಾರೆ.

ವಾಹನ ಸವಾರರು ಸೆಲ್ಫಿ, ಫೋಟೋ ತೆಗೆದುಕೊಳ್ಳುತ್ತಿದ್ದ ವೇಳೆ ಕಾಡಾನೆಯು ರೋಷ ತೋರಿದೆ. ಇದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅದೃಷ್ಟವಶಾತ್ ಆನೆ ಯಾರಿಗೂ ತೊಂದರೆ ನೀಡಿಲ್ಲ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ರಸ್ತೆಗೆ ಬಂದ ಕಾಡಾನೆ ಜೊತೆ ಸೆಲ್ಫಿ ಫೋಟೋ ತೆಗೆಯುವ ಸಾಹಸಕ್ಕೆ ಮುಂದಾದ ವಾಹನ ಸವಾರರಿಗೆ ಅರಣ್ಯ ಸಚಿವರು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಕಾಡಾನೆಯೊಂದಿಗೆ ಸೆಲ್ಫಿ ತೆಗೆದುಕೊಂಡ ವಾಹನಗಳ ನಂಬರ್ಗಳನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಲು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಿಗೆ ಮೇ 22ರ ಸಂಜೆ ಸಚಿವರು ಸೂಚನಾ ಪತ್ರ ಹೊರಡಿಸಿದ್ದಾರೆ.
ಈ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಮತ್ತು ಅರಣ್ಯದ ಪ್ರವೇಶದ ಬಳಿ ಎಚ್ಚರಿಕೆ ಫಲಕ ಹಾಕಿ, ಅರಿವು ಮೂಡಿಸಲು ಸಂಬಂಧಪಟ್ಟವರಿಗೆ ಸ್ಪಷ್ಟ ಆದೇಶ ಹೊರಡಿಸುವಂತೆ ಸಚಿವರು ತಿಳಿಸಿದ್ದಾರೆ.