ಬೆಂಗಳೂರು: ಬೆಂಗಳೂರಲ್ಲಿ ಯಶವಂತಪುರ ರೈಲು ನಿಲ್ದಾಣ ಪುನರ್ ಅಭಿವೃದ್ಧಿ ಹಿನ್ನೆಲೆ ಇತ್ತೀಚೆಗೆ ರೈಲು ನಿಲುಗಡೆಯಲ್ಲಿ ಬದಲಾವಣೆ ಆಗಿತ್ತು. ಇದೀಗ ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಪುನರಾಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇಲ್ಲಿ ಪಾದಚಾರಿ ಮೇಲೇತುವೆ (FOB) 03 ರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಕೆಳಗಿನ ಕೆಲವು ರೈಲು ಮಾರ್ಗಗಳನ್ನು ಬದಲಾಯಿಸಲಾಗಿದೆ. ಸಮಯ ಬದಲಾವಣೆ ಆಗಿದೆ.

ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉತ್ತಮ ಪಾದಚಾರಿ ವ್ಯವಸ್ಥೆ ಮಾಡಲು, ಓಡಾಟಕ್ಕೆ ಅನುಕೂಲವಾಗುವಂತೆ ಎಪ್ಓಬಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಕಾರಣದಿಂದ ತಾತ್ಕಲಿಕವಾಗಿ ರೈಲು ಮಾರ್ಗ ಬದಲಾಯಿಸಿದ್ದು, ಈ ನಿಲ್ದಾಣದಲ್ಲಿ ರೈಲುಗಳು ನಿಲುಗಡೆ ಇಲ್ಲ ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾರ್ಗ ಬದಲಾವಣೆ ಪಟ್ಟಿ 06269 ಸಂಖ್ಯೆಯ ಮೈಸೂರು -ಎಸ್.ಎಂ.ವಿ.ಟಿ ಬೆಂಗಳೂರು ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು ಜೂನ್ 23, 25 ಮತ್ತು 26 ಹೊರಡಲಿದೆ. ಈ ರೈಲು ಕೆ.ಎಸ್.ಆರ್ ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಮತ್ತು ಎಸ್.ಎಂ.ವಿ.ಟಿ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಇದು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆ ನೀಡುವುದಿಲ್ಲ.
* ಕೆಎಸ್ಆರ್ ಬೆಂಗಳೂರು – ನಾಂದೇಡ್ ದೈನಂದಿನ ಎಕ್ಸ್ಪ್ರೆಸ್ ರೈಲು (16593) ಇದೇ ಜೂನ್ 23, 25 ಮತ್ತು 26 ರಂದು ಸಂಚಾರ ಪ್ರಾರಂಭಿಸಲಿದೆ. ಇದು ಕೆ.ಎಸ್.ಆರ್ ಬೆಂಗಳೂರಿನಿಂದ 45 ನಿಮಿಷಗಳ ಕಾಲ ವಿಳಂಬವಾಗಿ ಹೊರಡಲಿದೆ. ಅಲ್ಲದೆ, ಇದು ಕೆ.ಎಸ್.ಆರ್ ಬೆಂಗಳೂರು, ಯಶವಂತಪುರ, ಯಲಹಂಕ, ಮತ್ತು ಧರ್ಮಾವರಂ ಮಾರ್ಗವಾಗಿ ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಈ ರೈಲಿಗೆ ನಿಲುಗಡೆ ಇರುವುದಿಲ್ಲ. ಪ್ರಯಾಣಿಕರು ಗಮನಿಸಬೇಕು ಮತ್ತು ಪರ್ಯಾಯ ನಿಲ್ದಾಣ ಅವಲಂಬಿಸಬೇಕಿದೆ.
* ರೈಲು (16022) ಮೈಸೂರು-ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್ಪ್ರೆಸ್ ಇದೇ ಜೂನ್ 23, 25 ಮತ್ತು 26 ರಂದು ಪ್ರಾರಂಭವಾಗಲಿದ್ದು, ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಬೈಯಪ್ಪನಹಳ್ಳಿ, ಮತ್ತು ಕೃಷ್ಣರಾಜಪುರಂ (ಕೆ.ಆರ್.ಪುರಂ) ಮಾರ್ಗವಾಗಿ ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಈ ರೈಲು ನಿಲುಗಡೆ ತಾತ್ಕಾಲಿಕವಾಗಿ ರದ್ದಾಗಿದೆ.
* ಎಸ್.ಎಂ.ವಿ.ಟಿ ಬೆಂಗಳೂರು-ಮೈಸೂರು ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು (06270) ಜೂನ್ 23, 25 ಮತ್ತು 26ರಂದು ಸಂಚರಿಸಲಿದೆ. ಈ ರೈಲು ಎಸ್.ಎಂ.ವಿ.ಟಿ ಬೆಂಗಳೂರು, ಬಾಣಸವಾಡಿ, ಯಶವಂತಪುರ, ಮತ್ತು ಕೆ.ಎಸ್.ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಸಹ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಆದ್ದರಿಂದ ಪ್ರಯಾಣಿಕರು ಸಹಕರಿಸಬೇಕು. ರೈಲು ಏರುವ ನಿಲ್ದಾಣವನ್ನು ಪ್ಲಾನ್ ಮಾಡಿಕೊಳ್ಳುವಂತೆ ನೈಋತ್ಯ ರೈಲ್ವೆ ವಲಯದ ಮುಖ್ಯ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.