ಒಂದು ವರ್ಷ ಕಳೆದರೂ ಇಲ್ಲ ಜಾಮೀನು, Prajwal Revanna  ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಒಂದು ವರ್ಷ ಕಳೆದರೂ ಇಲ್ಲ ಜಾಮೀನು, Prajwal Revanna ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಪ್ರಜ್ವಲ್ ರೇವಣ್ಣ

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಇದೇ ಜೂನ್ 20ಕ್ಕೆ ಮುಂದೂಡಿದೆ.

ಜಾಮೀನು ಅರ್ಜಿ ಕುರಿತು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ”ಅರ್ಜಿದಾರರು ಜೈಲು ಸೇರಿ ಒಂದೂವರೆ ವರ್ಷ ಕಳೆದಿದೆ. ಆರೋಪಿತ ಅತ್ಯಾಚಾರ 2021ರಲ್ಲಿ ನಡೆದಿದೆ ಎನ್ನಲಾಗಿದ್ದು, ನಾಲ್ಕೂವರೆ ವರ್ಷಗಳ ಬಳಿಕ ದೂರು ದಾಖಲಿಸಲಾಗಿದೆ. ಮೊದಲು ಲೈಂಗಿಕ ದೌರ್ಜನ್ಯ ಎಂದು ಆರೋಪಿಸಿ, ಬಳಿಕ ಅತ್ಯಾಚಾರ ಎಸಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಈ ಗೊಂದಲಕ್ಕೆ ದೂರುದಾರರು ಯಾವುದೇ ವಿವರಣೆ ನೀಡಿಲ್ಲ” ಎಂದರು.

“ಅಲ್ಲದೆ, ಪ್ರಕರಣದಲ್ಲಿ ಬರೋಬ್ಬರಿ 157 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದ್ದು, ಪ್ರಕರಣವನ್ನು ವಿಭಜಿಸಲಾಗಿಲ್ಲ. ಇವತ್ತು ಪ್ರಜ್ವಲ್ ರೇವಣ್ಣ ಸಂಕಷ್ಟದಲ್ಲಿದ್ದು, ಸರಕಾರ ಸಂತೋಷವಾಗಿದೆ. ಇದೆಲ್ಲವನ್ನೂ ಪರಿಗಣಿಸಿ ಅವರಿಗೆ ಜಾಮೀನು ಮಂಜೂರು ಮಾಡಬೇಕು,” ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರಕಾರಿ ಅಭಿಯೋಜಕ ಬಿ.ಎನ್. ಜಗದೀಶ್, “ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ವರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಎರಡು ಪ್ರಕರಣಗಳಲ್ಲಿ ಈಗಾಗಲೇ ವಿಚಾರಣೆ ಆರಂಭವಾಗಿದೆ. ಅವು ಪ್ರಾಥಮಿಕ ಹಂತದಲ್ಲಿವೆ. ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲಾಗಿದೆ. ಹೀಗಾಗಿ, ವಾದ ಮಂಡಿಸಲು ಸಮಯಾವಕಾಶ ನೀಡಬೇಕು,” ಎಂದು ಮನವಿ ಮಾಡಿದರು.

ವಿಶೇಷ ಸರಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರ ವಾದದ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡಿದೆ.

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪಗಳಿಗೆ ಲಭ್ಯವಿರುವ ಪುರಾವೆಗಳು ಮೇಲ್ನೋಟಕ್ಕೆ ಸತ್ಯ ಎಂದು ಸಾಬೀತುಪಡಿಸುತ್ತದೆ. ಅವರಿಗೆ ಜಾಮೀನು ನೀಡಿದಲ್ಲಿ ನಾಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಿ ಈ ಹಿಂದೆ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

ಪ್ರಕರಣದಲ್ಲಿಅರ್ಜಿದಾರರ ತಂದೆ ಎಚ್ಡಿ ರೇವಣ್ಣ ಅವರನ್ನು ಆರೋಪಿ ನಂ. 1 ಎಂದು ಹೇಳಲಾಗಿದೆ. ಅವರ ವಿರುದ್ಧದ ಪ್ರಕರಣಕ್ಕೆ ಈಗಾಗಲೇ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಈ ಎರಡು ಅಂಶಗಳ ಆಧಾರದಲ್ಲಿ ಪ್ರಜ್ವಲ್ ರೇವಣ್ಣ ಅವರು ಉಚ್ಚ ನ್ಯಾಯಾಲಯದಿಂದ ಜಾಮೀನು ಕೋರಿದ್ದಾರೆ.

Leave a Reply

Your email address will not be published. Required fields are marked *