ಬೆಂಗಳೂರು: ಕೆಲಸದ ಅವಧಿ ವಿಸ್ತರಿಸುವ ಪ್ರಸ್ತಾಪ ಚರ್ಚಾ ಹಂತದಲ್ಲಿದ್ದು, ಸಮತೋಲಿತ ಹಾಗೂ ಎಲ್ಲರಿಗೂ ಅನುಕೂಲಕರ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಕೆಲಸದ ಅವಧಿಯನ್ನು 10 ತಾಸುಗಳಿಗೆ ವಿಸ್ತರಿಸುವ ಸಂಬಂಧ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಸ್ಪಷ್ಟೀಕರಣ ನೀಡಿರುವ ಲಾಡ್, ಈ ತಿದ್ದುಪಡಿ ಕಾನೂನು ಬಗ್ಗೆ ನೋಂದಾಯಿತ ಕಾರ್ಮಿಕ ಸಂಘಟನೆಗಳು ಮತ್ತು ಉದ್ದಿಮೆದಾರರ ಜೊತೆ ಬುಧವಾರ ಸಭೆ ನಡೆಸಲಾಗಿದೆ. ಈ ಪ್ರಸ್ತಾವನೆ ಸಾರ್ವಜನಿಕರು ಹಾಗೂ ಉದ್ಯೋಗಿಗಳಲ್ಲಿ ತಪ್ಪು ತಿಳುವಳಿಕೆ, ಭೀತಿಗೆ ಕಾರಣವಾಗಿದೆ. ಹೀಗಾಗಿ ಸ್ಪಷ್ಟೀಕರಣ ನೀಡಬೇಕಾಗಿದೆ ಎಂದರು.
ವಾರದ ಕೆಲಸದ ಅವಧಿಯಲ್ಲಿ ಬದಲಾವಣೆ ಇಲ್ಲ: ಪ್ರಸ್ತಾವಿತ ತಿದ್ದುಪಡಿಯಿಂದ ಗರಿಷ್ಠ ವಾರದ ಕೆಲಸದ ಅವಧಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಅದು 48 ತಾಸುಗಳೇ ಇರಲಿದೆ. ಇದು ದೇಶದ ಮೂಲ ಕಾನೂನು ಹಾಗೂ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಅನುಸಾರವಾಗಿಯೇ ಇದೆ. ಯಾವುದೇ ಅಂತಾರಾಷ್ಟ್ರೀಯ ನಿಯಮ ಹಾಗೂ ಮಾನದಂಡಗಳಿಗೆ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಒಂದು ತಾಸಿನ ಭೋಜನ ವಿರಾಮ: ಪ್ರಸಕ್ತ ಕಾನೂನಿನಡಿ ಕೆಲಸದ ಅವಧಿ 9 ತಾಸು ಇದೆ. ಹೊಸ ಪ್ರಸ್ತಾವನೆಯಂತೆ ದಿನದ ಕೆಲಸದ ಅವಧಿಯನ್ನು 10 ತಾಸಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಈ 10 ತಾಸುಗಳ ಕೆಲಸದ ಅವಧಿಯಲ್ಲಿ ಒಂದು ತಾಸಿನ ಭೋಜನ ವಿರಾಮವೂ ಸೇರಿದೆ. ಆ ಮೂಲಕ ಕೆಲಸ ಮಾಡುವ ಅವಧಿ 9 ತಾಸು ಮಾತ್ರ ಉಳಿಯಲಿದೆ ಎಂದು ಸಚಿವರು ಹೇಳಿದರು.