ಬೆಂಗಳೂರು: ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ; ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರ ಇಲ್ಲ. ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದು ನಾಣ್ಯದ ಎರಡು ಮುಖಗಳು ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲವೋ ಹಾಗೆ ಕಾಂಗ್ರೆಸ್ ಭ್ರಷ್ಟಾಚಾರ ನೋಡುವುದಕ್ಕೆ ನಾವು ಸ್ಕ್ಯಾನ್ ಮಾಡುವ ಅವಶ್ಯಕತೆ ಇಲ್ಲ; ಕಣ್ಣಿಗೆ ಕಾಣುತ್ತದೆ ಎಂದು ನುಡಿದರು.
ಕಾಂಗ್ರೆಸ್ ಶಾಸಕರಾದ ಬಿ.ಆರ್ ಪಾಟೀಲ್ ಅವರ ಹೇಳಿಕೆಯಲ್ಲದೆ ಎಲ್ಲ ವಿಷಯವು ಕಣ್ಣಿಗೆ ಕಾಣುತ್ತದೆ. ಮೋಹನ್ ದಾಸ್ ಪೈ ರವರು ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಬಿಲ್ಡರ್ಸ್ಗಳ ಕಷ್ಟ ಏನು ಎನ್ನುವುದನ್ನು ಅವರಿಗೆ ಆದ ಅನುಭವದ ಆಧಾರದಲ್ಲಿ ವ್ಯಕ್ತಪಡಿಸಿದರು. ಇವತ್ತು ಪ್ಲಾನ್ ಮಂಜೂರು ಮಾಡಬೇಕಾದರೆ ಒಂದು ಅಡಿಗೆ 100 ರೂ ಕೊಡಬೇಕು, ಭೂ ಬದಲಾವಣೆ ಮಾಡಬೇಕಾದರೆ 25 ಲಕ್ಷ ರೂ ಅನ್ನು ಒಂದು ಎಕರೆ ಜಮೀನಿಗೆ ಕೊಡಬೇಕು. ಕಾಂಗ್ರೆಸ್ ಸರ್ಕಾರ ಎಲ್ಲದರಲ್ಲೂ ಲಂಚ ಪಡೆಯುತ್ತಿದೆ ಎಂದು ಆರೋಪಿಸಿದರು.