ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಅಸಮಧಾನಿತ ಶಾಸಕರ ವಿಷಯ ಮತ್ತೆ ಚರ್ಚೆಗೆ ಬಂದಿದ್ದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅಸಮಧಾನ ವ್ಯಕ್ತಪಡಿಸುತ್ತಿರುವ ಶಾಸಕರ ಬಗ್ಗೆ ಹೈಕಮಾಂಡ್ ಮುಖ್ಯಮಂತ್ರಿಗೆ ಮಾತುಕತೆ ನಡೆಸಲು ಸೂಚನೆ ನೀಡಿದ ಎಂಬ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು.

ಈ ಕುರಿತು ನನಗೆ ಸ್ಪಷ್ಟ ಮಾಹಿತಿಯಿಲ್ಲ. ಮುಖ್ಯಮಂತ್ರಿಗಳು ಈಗ ದೆಹಲಿಯಲ್ಲಿದ್ದಾರೆ. ಅವರು ವರಿಷ್ಠ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಹೈಕಮಾಂಡ್ ಸಭೆ ಕರೆಯಲು ಹೇಳಿದರೆ, ಶಾಸಕರನ್ನು ಕರೆದು ಮಾತನಾಡುತ್ತಾರೆ ಎಂದರು.
ಮಂತ್ರಿಗಳು ಶಾಸಕರನ್ನು ಭೇಟಿಯಾಗುತ್ತಿಲ್ಲ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಶಾಸಕರು ಇಂಥ ಆರೋಪ ಮಾಡಿರಬಹುದು. ಅವರಿಗೆ ವೈಯಕ್ತಿಕವಾಗಿ ತೊಂದರೆ ಆಗಿರಬಹುದು. ಶಾಸಕರೇ ಹೇಳಿದ ಮೇಲೆ ಅದನ್ನು ಒಪ್ಪಲೇಬೇಕು. ಆದರೆ, ಇದೊಂದು ಸಣ್ಣ ವಿಚಾರ. ಇದನ್ನು ಸಿಎಂ ಬಗೆಹರಿಸುತ್ತಾರೆ ಎಂದರು.
CLP ಸಭೆಯ ಸಂದರ್ಭದಲ್ಲಿ ಶಾಸಕರಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು ಎಂದೂ ನೆನಪಿಸಿದರು. ಸಭೆಯಲ್ಲಿ ಕೆಲವರು ಮಂತ್ರಿಗಳ ಭೇಟಿಯ ಕೊರತೆಯ ವಿಷಯ ಪ್ರಸ್ತಾಪಿಸಿದ್ದರು. ಆದರೆ ಇದು ಯಾವುದೇ ಗಂಭೀರ ಸಮಸ್ಯೆ ಅಲ್ಲ. ಎಲ್ಲ ಸರ್ಕಾರಗಳಲ್ಲಿಯೂ ಕೆಲ ಶಾಸಕರ ಅಸಮಧಾನ ಇದ್ದೇ ಇರುತ್ತದೆ ಎಂದು ಹೇಳಿದರು.
ಶಾಸಕರ ಎಲ್ಲ ಬೇಡಿಕೆಗಳನ್ನು ಶೇ.100 ಪೂರೈಸುವುದು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ. ಸರ್ಕಾರದ ಆಡಳಿತಾತ್ಮಕ, ಆರ್ಥಿಕ ಸ್ಥಿತಿ, ಶ್ರೇಣಿಬದ್ಧತೆ ಎಲ್ಲವನ್ನೂ ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸರ್ಕಾರವು ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ ಎಂದರು.
ಸರ್ಕಾರದ ಬಳಿ ಹಣ ಇಲ್ಲ ಎಂಬ ಹೇಳಿಕೆ ಬಗ್ಗೆ ಡಾ. ಜಿ ಪರಮೇಶ್ವರ್ ಸ್ಪಷ್ಟನೆ
ನಾನು ಸರ್ಕಾರದ ಬಳಿ ಹಣವೇ ಇಲ್ಲ ಎಂದು ಎಲ್ಲೂ ಹೇಳಿಲ್ಲ. ಬಿಜೆಪಿ ನನಗೆ ಎಡವಿದ ಮಾತು ಎಂದು ಬಣ್ಣಿಸಲು ಯತ್ನಿಸುತ್ತಿದೆ. ನಾನು ಬಾದಾಮಿ ಅಭಿವೃದ್ಧಿ ಮತ್ತು ಗುಹೆಗಳ ರಕ್ಷಣೆಗೆ ₹1000 ಕೋಟಿ ರೂಪಾಯಿಯ ಪ್ರಸ್ತಾವನೆ ರೆಡಿಯಾಗಿ ಕೇಂದ್ರಕ್ಕೆ ಕಳಿಸಲಾಗಿದೆ ಎಂದು ಹೇಳಿದ್ದೆ, ಅಷ್ಟೊಂದು ಹಣವನ್ನು ರಾಜ್ಯದಿಂದ ನೀಡಲು ಸಾಧ್ಯವಿಲ್ಲ. ಆದ್ದರಿಂದ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೆವು. ಅವರು ಹಣ ನೀಡಿದರೆ ಅನುಕೂಲವಾಗುತ್ತದೆ ಎಂದೆ ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.
ಬಜೆಟ್ ಗಾತ್ರ ಹೆಚ್ಚಾಗಿದೆ. ನೀರಾವರಿ, ಅಭಿವೃದ್ಧಿ ಕೆಲಸಗಳಿಗೆ ರಾಜ್ಯ ಸರ್ಕಾರ ಹಣ ನೀಡುತ್ತಿದೆ. ಕೇವಲ ಗ್ಯಾರಂಟಿ ಘೋಷಣೆಗೂ ಮಾತ್ರ ಹಣ ನೀಡಿಲ್ಲ. ಸರ್ಕಾರದ ಆರ್ಥಿಕ ಸ್ಥಿತಿ ಸದೃಢವಾಗಿದೆ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದು, ಆರ್ಥವಿಲ್ಲವೆಂದು ಹೇಗೆ ಹೇಳಬಹುದು? ನನಗಷ್ಟು ಜ್ಞಾನವಿಲ್ಲವೆಂದು ಯಾರಾದರೂ ಊಹಿಸುತ್ತಾರಾ? ಎಂದು ಪ್ರಶ್ನಿಸಿದರು.