ತುಮಕೂರು: ಲೋಕಾಯುಕ್ತ ಬಲೆಗೆ ಬಿದ್ದಿದ್ದ ಗ್ರಾಮ ಲೆಕ್ಕಾಧಿಕಾರಿಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಇಪ್ಪತ್ತು ಸಾವಿರ ದಂಡವನ್ನು ಇಲ್ಲಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದೆ.
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಇಪ್ಪಾದಿ ಕಂದಾಯ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಕೆ.ಬಿ. ಲೋಕೇಶ್ ಶಿಕ್ಷೆಗೆ ಒಳಗಾದ ಅಧಿಕಾರಿ.
ಏನಿದು ಪ್ರಕರಣ: ಇಪ್ಪಾಡಿ ಗ್ರಾಮದ ವಾಸಿ ಸತೀಶ್ ಐ.ಜಿ ಅವರ ತಾಯಿ ಮತ್ತು ದೊಡ್ಡಪ್ಪನ ಹೆಸರಿಗೆ ಇಪ್ಪಾಡಿ ಗ್ರಾಮದ ಸರ್ವೆ ನಂಬರ್:69/5 ರ ಜಮೀನನ್ನು ಪೌತಿ ಜಂಟಿ ಖಾತೆ ಮಾಡಿಕೊಡಲು ಇಪ್ಪಾಡಿ ಕಂದಾಯ ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಆರೋಪಿ ಕೆ.ಬಿ.ಲೋಕೇಶ್ ಅವರು 20 ಸಾವಿರ ರೂ. ಲಂಚಕ್ಕೆ ಒತ್ತಾಯಿಸಿ, ಮುಂಗಡವಾಗಿ 10 ಸಾವಿರ ರೂ. ಪಡೆದು, ಉಳಿಕೆ 10 ಸಾವಿರ ರೂ. ಹಣಕ್ಕಾಗಿ ಒತ್ತಾಯಿಸಿದ್ದರು.
ಈ ಬಗ್ಗೆ ಸತೀಶ್ ಐ.ಜಿ. ಅವರು 2021 ಜ.7ರಂದು ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಗೆ ದೂರು ನೀಡಿದರು. ದೂರಿನ ಅನ್ವಯ ಲೋಕಾಯುಕ್ತಾಧಿಕಾರಿಗಳು ಲಂಚದ ಹಣ ಸ್ವೀಕರಿಸುತ್ತಿದ್ದ ಆರೋಪಿ ಕೆ.ಬಿ. ಲೋಕೇಶ್ ಅವರನ್ನು ಟ್ರಾ÷್ಯಪ್ ಮಾಡಿ ರೆಡ್ಹ್ಯಾಂಡ್ ಆಗಿ ಹಿಡಿದಿದ್ದರು.
ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ನಿರೀಕ್ಷಕರಾದ ಎಸ್. ವಿಜಯಲಕ್ಷಿ÷್ಮÃ, ವೈ. ಸತ್ಯನಾರಾಯಣ, ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಾಸ್ಮಿನ ಪರವೀನ ಲಾಡಖಾನ ಅವರು ಆರೋಪಿಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಇಪ್ಪತ್ತು ಸಾವಿರ ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಕಟ್ಟಲು ವಿಫಲವಾದಲ್ಲಿ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಆರ್.ಪಿ. ಪ್ರಕಾಶ್ ವಾದ ಮಂಡಿಸಿದ್ದರು.




