ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 48ರ ಬಳಿ ಪತ್ತೆಯಾದ ಅಪ್ರಾಪ್ತ ಯುವತಿ ಶವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕ್ಯಾನ್ಸರ್ ಥರ್ಡ್ ಸ್ಟೇಜ್ನಲ್ಲಿರುವ ಆರೋಪಿ ಚೇತನ್ ಎಂಬಾತನೇ ಕೊಲೆ ಮಾಡಿದ್ದು, ಸದ್ಯ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ಕೋವೇರಹಟ್ಟಿ ಮೂಲದ ವರ್ಷಿತಾ(19) ಬರ್ಬರವಾಗಿ ಹತ್ಯೆಗೊಳಗಾಗಿದ್ದ ಯುವತಿ,ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇರೊಬ್ಬನ ಜೊತೆ ಸಂಬಂಧ
ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕ ಚೇತನ್ ವರ್ಷಿತಾ ಜತೆ ಸಂಪರ್ಕದಲ್ಲಿದ್ದ. ಹೀಗಾಗಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ಮಾಡಿದ್ದು, ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಬೇರೊಬ್ಬನ ಜೊತೆ ವರ್ಷಿತಾ ಸಂಬಂಧ ಹಿನ್ನೆಲೆ ಕೊಲೆ ಮಾಡಿದ್ದೇನೆ ಎಂದಿರುವ ಚೇತನ್, ಗೋನೂರು ಬಳಿ ಕರೆದೊಯ್ದು ಹೊಡೆದಾಗ ನೆಲಕ್ಕೆ ಬಿದ್ದು ಸಾವನ್ನಪ್ಪಿದಳು. ಬಳಿಕ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ನಡೆದದ್ದೇನು?
ಸರ್ಕಾರಿ ಪದವಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಆಗಿದ್ದ ವರ್ಷಿತಾಳ ಶವ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರೆ 48ರ ಬಳಿ ಪತ್ತೆ ಆಗಿತ್ತು. ಅತ್ಯಾಚಾರ ಎಸಗಿ ಕೊಲೆಗೈದು ಬೆಂಕಿ ಹಚ್ಚಿರುವುದಾಗಿ ಶಂಕಿಸಲಾಗಿತ್ತು.
ಎಸ್ಸಿ, ಎಸ್ಟಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವರ್ಷಿತಾ ಇರುತ್ತಿದ್ದಳು. ಆಗಸ್ಟ್ 14ರಂದು ಊರಿಗೆ ಹೋಗಲು ರಜೆ ಕೋರಿ ಹಾಸ್ಟೆಲ್ ವಾರ್ಡನ್ಗೆ ಲಿವ್ ಲೆಟರ್ ನೀಡಿದ್ದಳು. ಅದೇ ದಿನ ಹಾಸ್ಟೆಲ್ನಿಂದ ವರ್ಷಿತಾ ತನ್ನ ಫೋನ್ನಲ್ಲಿ ಮಾತನಾಡುತ್ತಾ ಕಾಲೇಜು ಯೂನಿಫಾರ್ಮ್ನಲ್ಲಿ ಸಹಪಾಠಿ ಜತೆ ತೆರಳಿದ್ದಳು.
ಇನ್ನು ವಿದ್ಯಾರ್ಥಿನಿ ವರ್ಷಿತಾಳನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕಿದ್ದಾರೆ. ವರ್ಷಿತಾ ಸಾವಿಗೆ ನ್ಯಾಯ ಕೊಡಿಸುವಂತೆ ಜಿಲ್ಲಾಸ್ಪತ್ರೆಯ ಶವಾಗಾರ ಬಳಿ ಆಕ್ರಂದಿಸಿದರು. ಚಿತ್ರದುರ್ಗದ ಚೇತನ್ ನಮ್ಮ ಪುತ್ರಿಯನ್ನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದರು.
ಚೇತನ್ ನನ್ನ ಪುತ್ರಿಯ ಕೊಲೆ ಮಾಡಿದ್ದಾನೆ ಎಂದ ತಾಯಿ
ಮೃತ ವರ್ಷಿತಾ ತಾಯಿ ಜ್ಯೋತಿ ತಿಪ್ಪೇಸ್ವಾಮಿ ಹೇಳಿಕೆ ನೀಡಿದ್ದು, ಮೊನ್ನೆ ರಾತ್ರಿ ಕರೆ ಮಾಡಿದಾಗ ಮಗಳು ಅಮ್ಮ ಅಂದಳು ಅಷ್ಟೇ. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿ ಸಂಪರ್ಕಕ್ಕೆ ಸಿಕ್ಕಿಲ್ಲ. ನಿನ್ನೆ ಬೆಳಗ್ಗೆ ಹಾಸ್ಟೆಲ್ ಬಳಿಗೆ ಭೇಟಿ ಮಾಡಲು ನಾನು ಬಂದಿದ್ದೆ. ಆದರೂ ಸಿಗಲಿಲ್ಲ. ಬಳಿಕ ಐಮಂಗಲ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದೆವು. ನಿನ್ನೆ ಸಂಜೆ ವೇಳೆಗೆ ವರ್ಷಿತಾ ಕೊಲೆ ಆಗಿರುವ ವಿಚಾರ ತಿಳಿಸಿದರು. ಚಿತ್ರದುರ್ಗದ ಚೇತನ್ ಫೋನ್ ಮಾಡಿ ಕರೆದೊಯ್ದು ನನ್ನ ಪುತ್ರಿಯ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದರು.
ಹಾಸ್ಟೆಲ್ ಬಳಿಗೆ ಬಂದಾಗ ನನಗೆ ಡೌಟ್ ಇತ್ತು. ಹಾಸ್ಟೆಲ್ನ ಕೆಲ ಹುಡುಗಿಯರು ಚೇತನ್ ಹೆಸರು ಹೇಳಿದರು. ಹಾಸ್ಟೆಲ್ ಬಳಿಗೆ ಬಾ ಎಂದು ಚೇತನ್ಗೆ ಕರೆ ಮಾಡಿದರೆ ಬರಲಿಲ್ಲ. ವರ್ಷಿತಾಳಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ. ಆರೋಪಿಗೆ ಗಲ್ಲಿಗೇರಿಸಬೇಕೆಂದು ತಾಯಿ ಜ್ಯೋತಿ ಆಗ್ರಹಿಸಿದರು.
ನ್ಯಾಯ ಸಿಗುವವರೆಗೆ ಮೃತದೇಹ ತೆಗೆದುಕೊಂಡು ಹೋಗಲ್ಲ ಎಂದ ತಂದೆ
ತಂದೆ ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿದ್ದು, ಮೊನ್ನೆ ಫೋನ್ ಸ್ವಿಚ್ ಆಫ್ ಆದಾಗ ನಾಪತ್ತೆ ದೂರು ನೀಡಿದ್ದೆವು. ಹಾಸ್ಟೆಲ್ ಸಿಬ್ಬಂದಿ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅವರು ಕಾಳಜಿ ವಹಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಏನಾಗಿದೆ ಎಂದು ನಮಗೆ ಗೊತ್ತಿಲ್ಲ. ಹಾಸ್ಟೆಲ್ಗೆ ಕಳಿಸಿದ್ದು ಮಾತ್ರ ಗೊತ್ತು ಎಂದಿದ್ದಾರೆ.
ಚೇತನ್ ವರ್ಷಿತಾಳೊಂದಿಗೆ ಫೋನಲ್ಲಿ ಮಾತಾಡುತ್ತಿದ್ದ. ಚುಡಾಯಿಸುತ್ತಿದ್ದ, ಆಕೆಯೊಂದಿಗೆ ಓಡಾಡುತ್ತಿದ್ದನಂತೆ. ನಮಗೆ ವರ್ಷಿತಾಳ ಸಾವಿಗೆ ನ್ಯಾಯ ಬೇಕು. ನ್ಯಾಯ ಸಿಗುವವರೆಗೆ ನಾವು ಮೃತದೇಹ ತೆಗೆದುಕೊಂಡು ಹೋಗಲ್ಲ. ಚೇತನ್ ನನ್ನು ಗಲ್ಲಿಗೇರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೊಂದು ಪೂರ್ವನಿಯೋಜಿತ ಕೃತ್ಯ ಎಂದ ವರ್ಷಿತಾ ಸಂಬಂಧಿ ಪ್ರವೀಣ್
ವರ್ಷಿತಾ ಸಂಬಂಧಿ ಪ್ರವೀಣ್ ಎಂಬುವವರು ಮಾತನಾಡಿದ್ದು, ನಾಲ್ಕು ದಿನಗಳಿಂದ ಚಿತ್ರದುರ್ಗದ ಹಾಸ್ಟೆಲ್ ನಲ್ಲಿ ಇರಲಿಲ್ಲ. ಕೋವೇರಹಟ್ಟಿಯ ಮನೆಗೂ ಬಂದಿರಲಿಲ್ಲ. ಪೊಲೀಸರು ಪ್ರಕರಣ ಬೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚಬೇಕು. ಈ ರೀತಿಯ ಪ್ರಕರಣ ನಾರ್ಥ್ ಇಂಡಿಯಾದಲ್ಲಿ ನೋಡುತ್ತಿದ್ದೆವು. ಇಂತಹ ಮಳೆಗಾಲದಲ್ಲೂ ವಿದ್ಯಾರ್ಥಿನಿಯ ದೇಹ ಸುಟ್ಟು ಹಾಕಿದ್ದಾರೆ. ಇದೊಂದು ಪೂರ್ವನಿಯೋಜಿತ ಕೃತ್ಯ ಎಂದೆನಿಸುತ್ತದೆ ಎಂದರು.
For More Updates Join our WhatsApp Group :
