ಹೊತ್ತಿ ಉರಿದ ಬಸ್… ಭಯಾನಕ ಕ್ಷಣಗಳನ್ನು ವಿವರಿಸಿದ ಕ್ಲೀನರ್.
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಭೀಕರ ಬಸ್ ಅಪಘಾತದ ಭಯಾನಕ ಕ್ಷಣಗಳ ಬಗ್ಗೆ ಬಸ್ ಕ್ಲೀನರ್ ಸಾಧಿಕ್ ಮಾಹಿತಿ ನೀಡಿದ್ದಾರೆ. ಈ ದುರ್ಘಟನೆ ತಡರಾತ್ರಿ ಸುಮಾರು 1.30 ರಿಂದ 2 ಗಂಟೆಯ ನಡುವೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ‘ರಾತ್ರಿ ನಾನು ಬಸ್ನಲ್ಲಿ ಮಲಗಿದ್ದೆ. ಅಷ್ಟರಲ್ಲಿ ಭಾರೀ ಡಿಕ್ಕಿ ಹೊಡೆದ ರಭಸಕ್ಕೆ ನಾನು ಬಸ್ನಿಂದ ಹೊರ ಬಿದ್ದೆ. ಏನಾಗಿದೆ ಎಂಬುದೇ ತಿಳಿಯದ ಸ್ಥಿತಿಯಲ್ಲಿ ಇದ್ದೆ. ನೋಡ ನೋಡುತ್ತಿದ್ದಂತೆ ಬಸ್ ಧಗಧಗನೆ ಹೊತ್ತಿ ಉರಿಯತೊಡಗಿತು’ ಎಂದು ಸಾಧಿಕ್ ಆತಂಕದಿಂದ ಹೇಳಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಧಾವಿಸಿ ಬಂದು ನಮ್ಮ ಸಹಾಯಕ್ಕೆ ನಿಂತರು. ಆದರೆ ಅಪಘಾತವಾದ ಕ್ಷಣದಲ್ಲೇ ಎಲ್ಲರೂ ಶಾಕ್ಗೆ ಒಳಗಾಗಿದ್ದೆವು. ಏನಾಗಿದೆ, ಏನು ಮಾಡಬೇಕು ಎಂಬುದೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಸಾಧಿಕ್ ವಿವರಿಸಿದ್ದಾರೆ. ಅಪಘಾತದ ವೇಳೆ ಬಸ್ ಚಾಲಕ ಕೂಡ ಹೊರ ಬಿದ್ದಿದ್ದು, ಆತನಿಗೆ ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಂಭವಿಸಿದ ಅಪಘಾತದಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH



