ಋಣ ತೀರಿಸಲಿರುವ ರಾಜಮೌಳಿ, ‘ವಾರಣಾಸಿ’ಯಲ್ಲಿ ಸರ್ಪ್ರೈಸ್
ರಾಜಮೌಳಿ ಇಂದು ವಿಶ್ವದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಅವರ ನಿರ್ದೇಶನದ ಸಿನಿಮಾಗಳಿಗಾಗಿ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಅವರಿಗೆ ಮೊದಲ ಸಿನಿಮಾ ನಿರ್ದೇಶನಕ್ಕೆ ಸಾಕಷ್ಟು ಅಡೆ-ತಡೆ ಎದುರಾಗಿತ್ತು. ಅದಾಗಲೇ ಸ್ಟಾರ್ ಎನಿಸಿಕೊಂಡಿದ್ದ ಜೂ ಎನ್ಟಿಆರ್ ಅವರು ರಾಜಮೌಳಿ ಅವರ ಭಿನ್ನತೆ, ಸಿನಿಮಾ ಬಗ್ಗೆ ಬದ್ಧತೆ ಗುರುತಿಸಿ ಅವರೊಟ್ಟಿಗೆ ನಟಿಸಲು ಒಪ್ಪಿಕೊಂಡರು. ಆಗ ನಿರ್ಮಾಣವಾಗಿದ್ದೇ ರಾಜಮೌಳಿಯವರ ಮೊದಲ ಸಿನಿಮಾ ‘ಸ್ಟೂಡೆಂಟ್ ನಂಬರ್ 1’. ಆ ಬಳಿಕ ಜೂ ಎನ್ಟಿಆರ್ ಅವರಿಗಾಗಿ ಇನ್ನೂ ಮೂರು ಸಿನಿಮಾಗಳನ್ನು ರಾಜಮೌಳಿ ನಿರ್ದೇಶಿಸಿದರು. ಎಲ್ಲವೂ ಬ್ಲಾಕ್ ಬಸ್ಟರ್, ಆದರೆ ಈಗ ಎಲ್ಲದಕ್ಕಿಂತಲೂ ದೊಡ್ಡ ಸಹಾಯವನ್ನು ಜೂ ಎನ್ಟಿಆರ್ ಅವರಿಗೆ ರಾಜಮೌಳಿ ಮಾಡುತ್ತಿದ್ದಾರೆ.
ಎಸ್ಎಸ್ ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ ‘ವಾರಣಾಸಿ’ ಚಿತ್ರವು ಸದ್ಯ ವಿಶ್ವ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರಬರುತ್ತಲೇ ಇವೆ. ಈ ಸಿನಿಮಾನಲ್ಲಿ ನಟಿಸಲು ಭಾರತದ ದೊಡ್ಡ-ದೊಡ್ಡ ನಟರೇ ತುದಿ ಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಸಂಭಾವನೆ ಕೊಡದಿದ್ದರೂ ಸರಿ ‘ವಾರಣಾಸಿ’ಯಲ್ಲಿ ನಟಿಸಬೇಕು ಎಂದು ಹಲವರು ಆಸೆ ವ್ಯಕ್ತಪಡಿಸಿದ್ದಾರೆ. ಇದೀಗ ಈ ಸಿನಿಮಾ ಮೂಲಕ ಜೂ ಎನ್ಟಿಆರ್ ಅವರ ಪುತ್ರ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಜೂ ಎನ್ಟಿಆರ್ ಅಭಿಮಾನಿಗಳಿಗೆ ಈ ಸುದ್ದಿ ಬಲು ಸಂತಸ ತಂದಿದೆ. ಅಸಲಿಗೆ ಜೂ ಎನ್ಟಿಆರ್ ಸಹ ಬಾಲನಟನಾಗಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ‘ರಾಮಾಯಣಂ’ ಚಿತ್ರದಲ್ಲಿ ನಟಿಸಿದ್ದ ಜೂ ಎನ್ಟಿಆರ್ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದರು. ಈಗ ಅವರ ಮಗ ಕೂಡ ಅದೇ ಹಾದಿಯಲ್ಲಿ ಸಾಗುತ್ತಿರುವುದು ವಿಶೇಷ. ಜೂ ಎನ್ಟಿಆರ್ ಅವರ ಇಬ್ಬರು ಗಂಡು ಮಕ್ಕಳಲ್ಲಿ ಭಾರ್ಗವ್ ರಾಮ್ ಎರಡನೇ ಪುತ್ರ. ಮೊದಲ ಮಗ ಅಭಯ್ ರಾಮ್. ಭಾರ್ಗವ್ ರಾಮ್ ಅವರಿಗೆ ಎಂಟು ವರ್ಷ ವಯಸ್ಸಾಗಿದ್ದು, ಸಣ್ಣ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
For More Updates Join our WhatsApp Group :




