ಜವಾಹರ್ಲಾಲ್ ನೆಹರು ತಾರಾಲಯದಲ್ಲಿ “ವಾಯೇಜರ್ – ದ ನೆವರ್ ಎಂಡಿಂಗ್ ಜರ್ನಿ”
ಬೆಂಗಳೂರು : ಬೆಂಗಳೂರಿನ ಜವಾಹರ್ಲಾಲ್ ನೆಹರು ತಾರಾಲಯದಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಬಹುನಿರೀಕ್ಷಿತ ನೂತನ ಆಕಾಶಮಂಡಲ ಪ್ರದರ್ಶನವಾದ “ವಾಯೇಜರ್ – ದ ನೆವರ್ ಎಂಡಿಂಗ್ ಜರ್ನಿ” ಷೋ ಅನ್ನು ಇಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್. ಎಸ್. ಬೋಸರಾಜು ಅವರು ಚಾಲನೆ ನೀಡಿದರು.
ತಾರಾಲಯದ ಆವರಣದಲ್ಲಿ ನಡೆದ ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ತಾರಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಇಸ್ರೋದ (ISRO) ಮಾಜಿ ಅಧ್ಯಕ್ಷರಾದ ಶ್ರೀ ಎ. ಎಸ್. ಕಿರಣ್ ಕುಮಾರ್ ಅವರು ವಹಿಸಿದ್ದರು.
ಉದ್ಘಾಟನೆಯ ನಂತರ ಮಾತನಾಡಿದ ಸಚಿವ ಶ್ರೀ ಎನ್. ಎಸ್. ಬೋಸರಾಜು ಅವರು, “ವಾಯೇಜರ್ ಅಭಿಯಾನವು ನಮ್ಮ ಜಗತ್ತನ್ನು ಮೀರಿ ಜ್ಞಾನವನ್ನು ಅನ್ವೇಷಿಸುವ ಮಾನವಕುಲದ ಅಂತಿಮ ಹುಡುಕಾಟವನ್ನು ಪ್ರತಿನಿಧಿಸುತ್ತದೆ. ಈ ಬಾಹ್ಯಾಕಾಶ ನೌಕೆಗಳು ಬ್ರಹ್ಮಾಂಡದ ಬಹುದೂರದವರೆಗೆ ಕನ್ನಡದ ಶುಭಾಶಯಗಳ ಮೂಲಕ ಕರ್ನಾಟಕದ ಸಾಂಸ್ಕೃತಿಕ ಸಾರವನ್ನು ಹೊತ್ತೊಯ್ಯುತ್ತಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಜವಾಹರ್ಲಾಲ್ ನೆಹರು ತಾರಾಲಯದಲ್ಲಿ ಇಂತಹ ವಿಶ್ವದರ್ಜೆಯ ಶೈಕ್ಷಣಿಕ ಪ್ರದರ್ಶನಗಳ ಮೂಲಕ, ಯುವಜನತೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಮತ್ತು ಮುಂದಿನ ಪೀಳಿಗೆಯ ಬಾಹ್ಯಾಕಾಶ ಪರಿಶೋಧಕರು ಹಾಗೂ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ನಮ್ಮ ಸರ್ಕಾರವು ಬದ್ಧವಾಗಿದೆ,” ಎಂದು ಹೇಳಿದರು.
ತಾರಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಇಸ್ರೋದ (ISRO) ಮಾಜಿ ಅಧ್ಯಕ್ಷರಾದ ಶ್ರೀ ಎ. ಎಸ್. ಕಿರಣ್ ಕುಮಾರ್ ಮಾತನಾಡಿ, “ವಾಯೇಜರ್ ಅಭಿಯಾನಗಳು ಮಾನವನ ಎಂಜಿನಿಯರಿಂಗ್ ಸಾಮರ್ಥ್ಯ ಮತ್ತು ಬ್ರಹ್ಮಾಂಡದ ಬಗೆಗಿನ ಕುತೂಹಲದ ಪರಾಕಾಷ್ಠೆಯಾಗಿವೆ. ಈ ವಿಸ್ಮಯಕಾರಿ ಪಯಣವನ್ನು ಇಲ್ಲಿ ಪ್ರದರ್ಶಿಸುವ ಮೂಲಕ, ಯುವ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಹುಟ್ಟುಹಾಕಲು ಮತ್ತು ಖಗೋಳಶಾಸ್ತ್ರದಲ್ಲಿ ಮುಂದಿನ ಪೀಳಿಗೆಯ ಸಾಧಕರಾಗಲು ಅವರನ್ನು ಪ್ರೋತ್ಸಾಹಿಸುವ ಆಶಯವನ್ನು ನಾವು ಹೊಂದಿದ್ದೇವೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜವಾಹರ್ಲಾಲ್ ನೆಹರು ತಾರಾಲಯದ ನಿರ್ದೇಶಕರಾದ ಡಾ. ಬಿ. ಆರ್. ಗುರುಪ್ರಸಾದ್, ಗಣ್ಯರು ಹಾಗೂ ವಿಜ್ಞಾನಾಸಕ್ತರು ಉಪಸ್ಥಿತರಿದ್ದರು.
For More Updates Join our WhatsApp Group :



