ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಸದ್ಯದಲ್ಲೇ ಕೃತಕ ಬುದ್ಧಿಮತ್ತೆ ಪ್ರಯೋಗಾಲಯ ಪ್ರಾರಂಭಿಸುವ ಇಂಗಿತ.!
ಬೆಂಗಳೂರು: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಸದ್ಯದಲ್ಲೇ ಕೃತಕ ಬುದ್ಧಿಮತ್ತೆ ಪ್ರಯೋಗಾಲಯ ಪ್ರಾರಂಭಿಸುವ ಇಂಗಿತವನ್ನು ಕುಲಪತಿಗಳಾದ ಪ್ರೊ. ರಮೇಶ್.ಬಿ. ವ್ಯಕ್ತಪಡಿಸಿದ್ದಾರೆ.
ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ “ಇನ್ನೋವೆಕ್ಸ್-2.0” ತಂತ್ರಜ್ಞಾನ ಕೌಶಲ್ಯ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸೈಬರ್ ಭದ್ರತೆ ಮತ್ತು ಬಯೋ ಇನ್ಫಾರ್ಮೆಟಿಕ್ಸ್ ವಿಷಯಗಳಲ್ಲಿ ಡಿಪ್ಲೊಮ ಕೋರ್ಸ್ ಆರಂಭಿಸಲಾಗುವುದೆಂದೂ ಪ್ರಕಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವರದರಾಜನ್ ಕೃಷ್ಣ, ಡಾ.ಜ್ಞಾನವೇಲ್ ಮುತ್ತರಸು, ಪವನ್ ಕುಮಾರ್ ಮತ್ತು ಡಾ.ಬಿ.ಆರ್.ಸುಪ್ರೀತ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಅನ್ವೇಷಣಾತ್ಮಕ ಮತ್ತು ಸೃಜನಶೀಲ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದರು.
ಶಿಕ್ಷಣವನ್ನು ಕೇವಲ ಪದವಿ ಗಳಿಕೆಗೆ ಸೀಮಿತಗೊಳಿಸದೆ ತರಗತಿ ಕೋಣೆಗಳನ್ನು ತಾಂತ್ರಿಕ ಕೌಶಲ್ಯ ತರಬೇತಿಯ ಪ್ರಯೋಗಾಲಯವಾಗಿ ಪರಿವರ್ತಿಸಿಕೊಳ್ಳುವಂತೆ ಅವರು ಸಲಹೆಯಿತ್ತರು. ಸ್ಟಾರ್ಟ್ಅಪ್ ಉದ್ಯಮಗಳ ಆರಂಭಕ್ಕೆ ಅಗತ್ಯವಾದ ಅನುಭವ ಪಡೆದುಕೊಳ್ಳುವಂತೆ ಅವರು ಇದೇ ವೇಳೆ ಉತ್ತೇಜಿಸಿದರು.
ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಮೇಧಾ ಇಟಗಿ ಹುಯಿಲಗೋಳ ಪ್ರಾಸ್ತಾವಿಕವಾಗಿ ಮಾತನಾಡಿ ಮೇಳದ ಉದ್ದೇಶವನ್ನು ವಿವರಿಸಿದರು. ಉಪನ್ಯಾಸಕರಾದ ನಿಖಿತಾ ಕಾರ್ಯಕ್ರಮ ನಿರೂಪಿಸಿದರು.
ಜ್ಞಾನಾಕ್ಷಿ ಕತ್ತಿ ಸ್ವಾಗತಿಸಿ ಸುಷ್ಮಾ ವಂದಿಸಿದರು.
ಎರಡು ದಿನಗಳ ‘ಇನ್ನೋವೆಕ್ಸ್ -2.0’ ಕೌಶಲ್ಯ ಮೇಳದ ಅಂಗವಾಗಿವಿದ್ಯಾರ್ಥಿಗಳಿಗಾಗಿ ವೆಬ್ ವಿನ್ಯಾಸ, ರಸಪ್ರಶ್ನೆ, ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆ, ಕಿರುಚಿತ್ರ ನಿರ್ಮಾಣ, ಸ್ಟಾರ್ಟ್ ಅಪ್ ಪಿಚ್, ಗೇಮಿಂಗ್, ಇತ್ಯಾದಿ ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
For More Updates Join our WhatsApp Group :




