ಕಾರ್ಮಿಕ ದಿನದಂದು ಜನವಿರೋಧಿ ನೀತಿ – ಸರ್ಕಾರಗಳಿಗೆ ಟೀಕೆ
ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ಬವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಏಕಾಏಕಿ 993 ರೂ. ಹಾಗೂ ಪ್ರತಿ ಲೀಟರ್ ಆಟೋ ಗ್ಯಾಸ್ ಬೆಲೆಯನ್ನು 45 ರೂ.ಗಳಷ್ಟು ಬೆಲೆ ಹೆಚ್ಚಳ ಮಾಡಿರುವ ಬಿಜೆಪಿ ಕೇಂದ್ರ ಸರ್ಕಾರದ ದುರುಳ ನೀತಿ ಒಂದು ಕಡೆ ಆದರೆ ಮತ್ತೊಂದು ಕಡೆ ಕಾಂಗ್ರೆಸ್ ರಾಜ್ಯ ಸರ್ಕಾರವು ಬೆಸ್ಕಾಂ ನ 2,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿರುವುದನ್ನು ಗ್ರಾಹಕರ ಬಳಿ ವಸೂಲಿ ಮಾಡಲು 56 ಪೈಸೆಗಳಷ್ಟು ಪ್ರತಿ ಯೂನಿಟ್ ಗೆ ಏರಿಕೆ ಮಾಡಿರುವುದು ಕಾರ್ಮಿಕ ದಿನಾಚರಣೆ ದಿನದಂದು ದೇಶದ ಜನಸಾಮಾನ್ಯನಿಗೆ ಸರ್ಕಾರಗಳು ನೀಡುತ್ತಿರುವ ಮಹಾನ್ ಕೊಡುಗೆ. ಈ ಜನ ವಿರೋಧಿ ನೀತಿಯನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಮಾತನಾಡಿದ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ” ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳೆರಡೂ ಜನವಿರೋಧಿಗಳಾಗಿದ್ದು ಪ್ರತಿ ದಿವಸ ಜನಸಾಮಾನ್ಯನ ಜೇಬಿಗೆ ಯಾವ ರೀತಿ ಕತ್ತರಿ ಹಾಕಬೇಕೆಂಬ ಕುಟಿಲ ತಂತ್ರಗಾರಿಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ದೇಶದ ವಿದೇಶಾಂಗ ನೀತಿ ಸಂಪೂರ್ಣ ವೈಫಲ್ಯ ಒಂದು ಕಡೆಯಾದರೆ ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ವ್ಯಾಪಕ ಭ್ರಷ್ಟಾಚಾರ ನೀತಿಯಿಂದಾಗಿ ಸಂಪೂರ್ಣ ಆರ್ಥಿಕ ದಿವಾಳಿಯಾಗಿದೆ. ಅತಿಯಾದ ಬೆಲೆ ಏರಿಕೆಯಿಂದಾಗಿ ದೇಶದ ಜನಸಾಮಾನ್ಯ ಪ್ರತಿ ದಿವಸದ ಜೀವನ ನಿರ್ವಹಣೆಯೇ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ “
ದೇಶದಲ್ಲಿನ ಮಹಿಳೆಯರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ವಿದ್ಯಾವಂತ ಯುವಕರುಗಳು, ಜನಸಾಮಾನ್ಯರು ಬೀದಿಗಿಳಿದು ಹೋರಾಟ ಮಾಡುವ ತನಕ ಈ ಭ್ರಷ್ಟ ಸರ್ಕಾರಗಳಿಗೆ ಬುದ್ಧಿ ಬರುವುದು ಸಾಧ್ಯವಿಲ್ಲ. ಆಮ್ ಆದ್ಮಿ ಪಕ್ಷವು ಸರ್ಕಾರಗಳು ಕೂಡಲೇ ಈ ಬೆಲೆ ಏರಿಕೆಯನ್ನು ವಾಪಸ್ ತೆಗೆದುಕೊಳ್ಳದಿದ್ದಲ್ಲಿ ಜನಸಾಮಾನ್ಯರ ಜೊತೆಗೂಡಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ” ಎಂದು ಜಗದೀಶ್ ವಿ. ಸದಂ ಎಚ್ಚರಿಸಿದರು.
For More Updates Join our WhatsApp Group :




