ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಿದ ಆರೋಪದಡಿ ಜೈಲು ಜೀವನ ನಡೆಸುತ್ತಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯವು ಕೇವಲ ಎರಡು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ವಿನಯ್ ಕುಲಕರ್ಣಿಯ ಪುತ್ರ ಹೇಮಂತ್ ಅವರಿಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಕಾಲಿನ ಶಸ್ತ್ರಚಿಕಿತ್ಸೆ ಅಗತ್ಯವಿದೆ. ತಂದೆಯ ಹಾಜರಾತಿ ಮುಖ್ಯವಾಗಿರುವ ಕಾರಣ ಜಾಮೀನು ನೀಡುವಂತೆ ಅವರು ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯ ಅರ್ಜಿಯನ್ನು ಪರಿಗಣಿಸಿ ಸೆಪ್ಟೆಂಬರ್ 11ರ ಸಂಜೆ 5 ಗಂಟೆಯವರೆಗೆ ಮಾತ್ರ ಜಾಮೀನು ನೀಡಿದ್ದು, ನಂತರ ಅವರು ಮತ್ತೆ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಬೇಕಿದೆ.
ಹಿಂದೆಯೂ ವಿನಯ್ ಕುಲಕರ್ಣಿ ಜಾಮೀನು ಮೇಲೆ ಹೊರಬಂದಿದ್ದರೂ, ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂಬ ಆಪಾದನೆಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಅವರ ಜಾಮೀನು ರದ್ದು ಮಾಡಿತ್ತು. ಈ ಬಾರಿ ನೀಡಿರುವ ಜಾಮೀನಿನ ಅವಧಿಯಲ್ಲಿ ಯಾವುದೇ ಸಭೆ ನಡೆಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ. ಮಂಗಳವಾರ ಸಂಜೆಯೇ ಜೈಲಿನಿಂದ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಪುತ್ರನ ಶಸ್ತ್ರಚಿಕಿತ್ಸೆ ಬೆಂಗಳೂರಿನಲ್ಲೇ ನಡೆಯುತ್ತಿರುವುದರಿಂದ ಅವರು ಈ ಅವಧಿಯಲ್ಲಿ ನಗರದಲ್ಲೇ ಉಳಿಯಲಿದ್ದಾರೆ.
For More Updates Join our WhatsApp Group :




