ಬೆಂಗಳೂರು: ಡಾ. ಕೃತಿಕಾ ರೆಡ್ಡಿ ಅವರ ನಿಗೂಢ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಇದೀಗ ಪೊಲೀಸರು ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಕೃತಿಕಾ ರೆಡ್ಡಿ ಅವರ ಪತಿ ಡಾ. ಮಹೇಂದ್ರ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ 24 ರಂದು ಮರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಡಾ. ಕೃತಿಕಾ ರೆಡ್ಡಿ ಅವರ ಸಾವನ್ನು ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣವನ್ನು ದಾಖಲಿಸಲಾಗಿತ್ತು. ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಪೊಲೀಸರ ತನಿಖೆಯಲ್ಲಿ ಸತ್ಯ ಹೊರಬಿದ್ದಿದೆ. ಆರಂಭದಲ್ಲಿ, ಕುಟುಂಬ ಸದಸ್ಯರು ಸಾವಿಗೆ ಯಾವುದೇ ಅನುಮಾನ ವ್ಯಕ್ತಪಡಿಸದೆ, ಮರಣೋತ್ತರ ಪರೀಕ್ಷೆ ನಡೆಸಲು ಹಿಂದೇಟು ಹಾಕಿದ್ದರು. ಆದರೆ ಪೊಲೀಸರು ಮರಣೋತ್ತರ ಪರೀಕ್ಷೆಯನ್ನು ಮಾಡಲೇಬೇಕು ಎಂದು ಹೇಳಿದ್ದರು.
ತನಿಖೆಯ ಭಾಗವಾಗಿ, ಎಸ್ಒಸಿಒ ತಂಡವು ಮೃತದೇಹದ ಬಳಿ ಇದ್ದ ವೈದ್ಯಕೀಯ ಸಾಮಗ್ರಿಗಳು ಮತ್ತು ಚಿಕಿತ್ಸೆಗೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿತ್ತು. ಮರಣೋತ್ತರ ಪರೀಕ್ಷೆಯ ನಂತರ ಸಂಗ್ರಹಿಸಿದ ವಿಸೆರಾವನ್ನು ಸಹ ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಯಿತು.ಎಫ್ಎಸ್ಎಲ್ ವರದಿಯಲ್ಲಿ, ಡಾ. ಕೃತಿಕಾ ರೆಡ್ಡಿ ಅವರ ಸಾವು ಪ್ರೊಪೋಫಾಲ್ ಎಂಬ ಸೆಡೇಟಿವ್ನ ಓವರ್ಡೋಸ್ನಿಂದ ಸಂಭವಿಸಿದೆ ಎಂದು ಎಫ್ಎಸ್ಎಲ್ ವರದಿಯಿಂದ ತಿಳಿದು ಬಂದಿದೆ.
ವರದಿಯನ್ನು ವೈದ್ಯರು ಪರಿಶೀಲನೆ ಮಾಡಿದ ನಂತರ ಭಾರತೀಯ ದಂಡ ಸಂಹಿತೆಯ 302 ಮತ್ತು ಬಿಎನ್ಎಸ್ 103 ಅಡಿಯಲ್ಲಿ ಕೊಲೆ ಪ್ರಕರಣವೆಂದು ನಿರ್ಧಾರಿಸಲಾಗಿತ್ತು. ಮೃತರ ತಂದೆ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ ಆರೋಪಿ ಡಾ. ಮಹೇಂದ್ರ ರೆಡ್ಡಿ ಉಡುಪಿಯಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ತೆರಳಿ ಬಂಧಿಸಿದ್ದಾರೆ.
For More Updates Join our WhatsApp Group :



