ರಾಜಕೀಯ ವಾಗ್ದಾಳಿ ‘ಸಿದ್ದರಾಮಯ್ಯ ಸರ್ಕಾರ ಕೇರಳದ್ದಾ
ಬೆಂಗಳೂರು: ಕೋಗಿಲು ಲೇಔಟ್ ನಿವಾಸಿಗಳಿಗೆ ಮನೆ ಹಂಚಿಕೆಗೆ ನಿರ್ಧಾರ ವಿಚಾರ ಸದ್ಯ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ವಿಪಕ್ಷಗಳು ತೀವ್ರ ಕಿಡಿಕಾರಿವೆ. ಯಾವ ಕಾನೂನಿನಡಿಯಲ್ಲೂ ಅವರಿಗೆ ಮನೆ ಕೊಡಲು ಸಾಧ್ಯವೇ ಇಲ್ಲ. ಕನ್ನಡಿಗರ ನೆಲ ಪರಭಾರೆ ಮಾಡುವ ಅಧಿಕಾರ ನಿಮಗೆ ಯಾರು ಕೊಟ್ಟರು? ರಾಜ್ಯದಲ್ಲಿರುವ ಸರ್ಕಾರ ಕೇರಳದ್ದಾ ಅಥವಾ ಕರ್ನಾಟಕದ್ದಾ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashoka) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಪಾಕಿಸ್ತಾನಕ್ಕೂ ನಮ್ಮನ್ನು ಕಾಂಗ್ರೆಸ್ನವರು ಅಡವಿಟ್ಟುಬಿಟ್ರಾ?: ಅಶೋಕ್ ಕಿಡಿ
ಕೋಗಿಲು ಅಕ್ರಮ ವಲಸಿಗರ ಮನೆ ತೆರವು ವಿಚಾರವಾಗಿ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಕೋಗಿಲು ಲೇಔಟ್ನಲ್ಲಿ ಅನಧಿಕೃತ ಮನೆಗಳ ತೆರವು ಸಂಬಂಧಿಸಿದ ದಾಖಲೆಗಳ ಬಿಡುಗಡೆ ಮಾಡಿದ್ದಾರೆ. ಮನೆ ಹಂಚಿಕೆ ವಿಚಾರ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿಬಿಟ್ಟಿದೆ. ಈಗ ಪಾಕಿಸ್ತಾನಕ್ಕೂ ನಮ್ಮನ್ನು ಕಾಂಗ್ರೆಸ್ನವರು ಅಡವಿಟ್ಟುಬಿಟ್ರಾ? ಪಾಕಿಸ್ತಾನದವರು ಕರ್ನಾಟಕದ ಬಗ್ಗೆಯೇ ಯಾಕೆ ಮಾತಾಡುತ್ತಾರೆ? ಪಾಕ್ನವರು ಮಹಾರಾಷ್ಟ್ರ, ತಮಿಳುನಾಡು ಬಗ್ಗೆ ಯಾಕೆ ಮಾತಾಡಲ್ಲ. ಸಿಎಂ, ಡಿಸಿಎಂ ಜಗಳದಲ್ಲಿ ನಾವು ದುರಂತದ ತುದಿಗೆ ಬಂದು ಬಿಟ್ಟಿದ್ದೇವೆ. ಬಾಂಗ್ಲಾದವರಿಗೆ ಜಮೀನು ಕೊಡುತ್ತೀರಿ ಅಂತಾದರೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.
ಕೋರ್ಟ್ ಮೊರೆ ಹೋಗುವ ಸಂಬಂಧ ಚರ್ಚೆ
ಕೋಗಿಲು ಲೇಔಟ್ ನಿವಾಸಿಗಳಿಗೆ ಮನೆ ಹಂಚಿಕೆ ವಿಚಾರವಾಗಿ ಕೋರ್ಟ್ ಮೊರೆ ಹೋಗುವ ಸಂಬಂಧ ಚರ್ಚೆ ನಡೆಸಿದ್ದೇವೆ. ಈಗಾಗಲೇ ಈ ಬಗ್ಗೆ ಕಾನೂನು ತಂಡಕ್ಕೆ ಸೂಚನೆ ನೀಡಿದ್ದೇನೆ. ವಿಜಯಪುರ ಜಿಲ್ಲೆಯ ಆಲಮಟ್ಟಿ, ಕೊಡಗು ಸೇರಿದಂತೆ ರಾಜ್ಯದಲ್ಲಿರುವ ಸಂತ್ರಸ್ತರಿಗೆ ಮನೆ ಕೊಡಲು ಯೋಗ್ಯತೆ ಇಲ್ಲ ಎಂದಿದ್ದಾರೆ.
For More Updates Join our WhatsApp Group :




