ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನೇ 5 ವರ್ಷ ಸಿಎಂ ಅಂದಾಗಲೆಲ್ಲಾ ಅನುಮಾನ ಹೆಚ್ಚು ಆಗಲಿದೆ. ಈ ಸರ್ಕಾರದಲ್ಲಿ 2 ವರ್ಷಕ್ಕೆ ಹಲವು ತಪ್ಪುಗಳು ಆಗಿದ್ದು, ಕಾಂಗ್ರೆಸ್ ಒಳಜಗಳ ನೋಡ್ತಾ ಇದ್ದರೇ 2026ಕ್ಕೆ ಮಧ್ಯಂತರ ಚುನಾವಣೆ ಬರಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿ, ಮೊನ್ನೆ ಸಿದ್ದರಾಮಯ್ಯ ನಾವು ಅಂದ್ರು . ಇಂದು ನಾನು ಅಂತಿದ್ದಾರೆ. ಅವರು ಎಷ್ಟು ಬಾರಿ 5 ವರ್ಷ ನಾನೇ ಸಿಎಂ ಅನ್ನುತ್ತಾರೋ ಅಷ್ಟು ಸಂಶಯ ಹುಟ್ಟುತ್ತದೆ.

ಕುರ್ಚಿಗಾಗಿ ಕಚ್ಚಾಟ ನಡೆಯುತ್ತಿರುವುದರಿಂದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಡಲು ಆಗದೆ ರಾಜ್ಯದಲ್ಲಿ ಆಡಳಿತ ಕುಸಿದಿದ್ದು, ಭ್ರಷ್ಟಾಚಾರ ಹೆಚ್ಚಾಗಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪಿಸಿದರು. ಅವರ ಪಕ್ಷದ ಶಾಸಕರೇ ನಾಯಕತ್ವ ಬದಲಾವಣೆ ಆಗಲಿದೆ ಎನ್ನುತ್ತಿದ್ದಾರೆ. ಇತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿಗರು ಶೀಘ್ರದಲ್ಲಿಯೇ ಡಿಕೆಶಿ ಸಿಎಂ ಆಗಲಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಜನರು ನಿಮ್ಮನ್ನು (ಕಾಂಗ್ರೆಸ್) ಆಯ್ಕೆ ಮಾಡಿದ್ದು, ಇನ್ನೂ ಎರಡೂವರೆ ವರ್ಷ ಆದರೂ ಉತ್ತಮ ಆಡಳಿತ ನೀಡಿ. ಆಗದಿದ್ದರೆ ಮನೆಗೆ ಹೋಗಿ. ವಿಪಕ್ಷವಾಗಿರುವ ಬಿಜೆಪಿ ಎಲ್ಲವನ್ನೂ ಗಮನಿಸುತ್ತಿದೆ. 2 ವರ್ಷದ ಸರ್ಕಾರದಲ್ಲಿ ಹಲವು ಹಗರಣಗಳು ಆಗಿದ್ದು, ಸರ್ಕಾರ ಉಳಿಯೋದು ಕಷ್ಟವಾಗಿದೆ ಎಂದರು.




