ತುರುವೇಕೆರೆ : ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಆಹಾಕಾರ ಸೃಷ್ಟಿ ಮಾಡಲಿರುವ ಅವೈಜ್ಞಾನಿಕ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ನಮ್ಮ ನೀರು-ನಮ್ಮ ಹಕ್ಕು ಶೀರ್ಷಿಕೆಯಡಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಎನ್ಡಿಎ ಮಿತ್ರ ಪಕ್ಷಗಳ ಹಾಗೂ ಜಿಲ್ಲೆಯ ಮಠಾಧೀಶರುಗಳ ನೇತೃತ್ವದಲ್ಲಿ ನಾಳೆ (ಡಿ.೦7) ಮತ್ತು ಡಿ. ೦8 ರಂದು ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಂ.ಟಿ ಕೃಷ್ಣಪ್ಪ ತಿಳಿಸಿದರು. ಅವರು ಪ್ರವಾಸಿ ಮಂದಿರದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾಳೆ (ಡಿ.೦7) ಬೆಳಿಗ್ಗೆ 10:3೦ಕ್ಕೆ ಸಾಗರನಹಳ್ಳಿ ಗೇಟ್, ಹೇಮಾವತಿ ಚಾನಲ್, ರಾಷ್ಟಿçÃಯ ಹೆದ್ದಾರಿ 206 ಬಿ.ಹೆಚ್. ರಸ್ತೆ, ಗುಬ್ಬಿ ತಾಲ್ಲೂಕಿನಿಂದ ಪಾದಯಾತ್ರೆ ಪ್ರಾರಂಭವಾಗುತ್ತದೆ. ನಿಟ್ಟೂರು ಮಾರ್ಗವಾಗಿ ಸಾಗಿ, ಗುಬ್ಬಿ ಪಟ್ಟಣ ಬಸ್ ನಿಲ್ದಾಣದ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಗುವುದು. ನಂತರ ರಾಷ್ಟ್ರೀಯ ಹೆದ್ದಾರಿ 206 ಮುಖಾಂತರ ಕಳ್ಳಿಪಾಳ್ಯ ಗೇಟ್ ಬಳಿ ಇರುವ ಓಂ ಪ್ಯಾಲೇಸ್ ಭವನ ತಲುಪಿ, ಅಲ್ಲಿ ರಾತ್ರಿ ವಾಸ್ತವ್ಯ ಮಾಡಲಾಗುವುದು.
ಮರುದಿನ ಡಿ. 08 ರಂದು ಬೆಳಿಗ್ಗೆ 9 ಗಂಟೆಗೆ ಎರಡನೆ ದಿನದ ಪಾದಯಾತ್ರೆ ಪ್ರಾರಂಭವಾಗಿ, ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಆವರಣಕ್ಕೆ ತಲುಪಿ, ಕಛೇರಿ ಮುಂಭಾಗದಲ್ಲಿ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಮಸಾಲ ಜಯರಾಮ್ ಮಾತನಾಡಿ, ಯಡಿಯೂರಪ್ಪನವರ ಅವಧಿಯಲ್ಲಿ 1500 ಕೋಟಿ ರೂ. ಗಳ ಅನುದಾನವನ್ನು ನಾಲೆಯ ಅಗಲೀಕರಣಕ್ಕೆ ನೀಡಿದ್ದರು. 800 ಕ್ಯೂಸೆಕ್ಸ್ ನೀರು ಹರಿಯುವ ನಾಲೆಯಲ್ಲಿ 1800 ಕ್ಯೂಸೆಕ್ಸ್ ನೀರು ಹರಿಯುವಂತೆ ಮಾಡಲಾಗಿದೆ. ನೈಸರ್ಗಿಕವಾಗಿ ನೀರು ಹರಿಸಿ ತೆಗೆದುಕೊಂಡು ಕುಣಿಗಲ್ಗೆ ನೀರು ಕೊಡಲು ನಮ್ಮ ವಿರೋಧವಿಲ್ಲ. ಕುಣಿಗಲ್ ತಾಲ್ಲೂಕಿಗೆ ಕುಡಿಯಲು ಮತ್ತು ವ್ಯವಸಾಯಕ್ಕೆ ನೀರಿನ ಕೊರತೆ ಇಲ್ಲ. ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. (ಎನ್.ಡಿ.ಎ), ಕಾರ್ಯಕರ್ತರು ಹಾಗೂ ಪಕ್ಷಾತೀತವಾಗಿ ರೈತ ಬಾಂಧವರು, ಚುನಾಯಿತ ಪ್ರತಿನಿಧಿಗಳು, ಕೃಷಿ ಕಾರ್ಮಿಕರು, ರೈತಪರ ಸಂಘಟನೆಗಳ ಪ್ರತಿನಿಧಿಗಳು, ದಲಿತ ಸಂಘಟನಾ ಪ್ರತಿನಿಧಿಗಳು, ವಕೀಲರ ಸಂಘ, ವರ್ತಕ ಸಂಘಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಮಸ್ತ ನಾಗರಿಕ ಬಂಧುಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿ ಮಾಡಲು ಮನವಿ ಮಾಡುತ್ತೇವೆ ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಕೆ.ವಿ ಮೃತ್ಯುಂಜಯ, ವಿಜಯೇಂದ್ರ ಮಾವಿನಕೆರೆ, ಯೋಗೀಶ್ ವೆಂಕಟಾಪುರ, ಕಾಳಂಜಿಹಳ್ಳಿ ಸೋಮಶೇಖರ್, ಡಿ.ಎಂ ಸುರೇಶ್, ತ್ಯಾಗರಾಜ್, ನಾಗೇಂದ್ರ ಗೋಣಿತುಮಕೂರು, ಮಂಜಣ್ಣ ಮಾವಿನಕೆರೆ, ಪ್ರಕಾಶ್ ಡಿ.ಎಂ, ಸತೀಶ್ ಮಾವಿನಕೆರೆ, ಚೆಲುವರಾಜ್ ಹೊಡಕೆಘಟ್ಟ, ರಂಜಿತ, ರಾಘು, ಸುರೇಶ್, ಸೋಮಣ್ಣ ಸೇರಿದಂತೆ ಇತರರು ಇದ್ದರು.