ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಷ್ಠಿತ ಏರಿಯಾಗಳಲ್ಲಿ ಒಂದಾದ ಇಂದಿರಾನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ. ಕಳೆದ ಶನಿವಾರ ಇಂದಿರಾನಗರದಲ್ಲಿ ಮೂರು ಜನರಿಗೆ ಚೂರಿ ಇರಿತದ ಘಟನೆಗಳು ವರದಿಯಾಗಿವೆ. ಈ ಘಟನೆ ಬಳಿಕ ನಿವಾಸಿಗಳು ಮತ್ತು ಅಂಗಡಿಮುಂಗಟ್ಟಿನವರು ಭಯದಲ್ಲೇ ಮುಳುಗಿದ್ದಾರೆ.
ಸುಮಾರು 20 ವರ್ಷದ ಯುವಕನೊಬ್ಬ ಈ ಕೃತ್ಯ ಎಸಗಿರುವ ಶಂಕೆ ಇದೆ. ದಾಳಿಯ ವೇಳೆ ಕಪ್ಪು ಟೋಪಿ, ಕೆಂಪು ಟಿ-ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಫೆಬ್ರವರಿ 8ರಂದು ಇಲ್ಲಿನ 100 ಅಡಿ ರಸ್ತೆಯ ಬಳಿ ಸುಮಾರು ರಾತ್ರಿ 9.30ರಿಂದ 10 ಗಂಟೆಯ ನಡುವೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಇಬ್ಬರು ಪಾನಿಪುರಿ ಮಾರಾಟಗಾರರು ಹಾಗೂ ಬೈಕ್ ಸವಾರ ಸೇರಿ ಮೂವರಿಗೆ ಚೂರಿಯಿಂದ ಇರಿಯಲಾಗಿದೆ.
ಆತ ಡ್ರಾಪ್ ಕೇಳಿದ ನಂತರ ತನ್ನ ಮೇಲೆ ದಾಳಿ ಮಾಡಿದ ಎಂದು ಬೈಕ್ ಸವಾರ ತಿಳಿಸಿದ್ದಾನೆ. ಊಟ ಸಿಗದಿದ್ದಕ್ಕೆ ಅಥವಾ ಹಣ ಪಾವತಿ ವಿಚಾರವಾಗಿ ತಪ್ಪು ತಿಳುವಳಿಕೆಯಿಂದ ಆತ ಚೂರಿಯಿಂದ ಇರಿದು ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ನಿವಾಸಿಗಳು ಭಯಪಡಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಶಂಕಿತನನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಈ ಘಟನೆ ನಡೆದ ಬಳಿಕವೂ ಇಲ್ಲಿನ ನಿವಾಸಿಗಳು ಭಯದಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿನ 100 ಫೀಟ್ ರಸ್ತೆಯಲ್ಲಿರುವ ಕುಂಡ್ ಇಂಡಿಯನ್ ಬಾರ್ಬೆಕ್ಯು ಹೋಟೆಲ್ ಬಳಿ ಈ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ತನ್ನ 28 ವರ್ಷಗಳಲ್ಲೇ ಕಂಡ ಅತ್ಯಂತ ಭಯಾನಕ ಘಟನೆ ಎಂದು ಸ್ಥಳೀಯರು ವಿವರಿಸಿದ್ದಾರೆ.
ಒಬ್ಬ ಬಡ ಪಾನಿ ಪುರಿ ಮಾರಾಟಗಾರನ ಮೇಲೆ ಯಾವುದೇ ಕಾರಣವಿಲ್ಲದೆ ಚೂರಿ ಇರಿಯಲಾಗಿದೆ. ಅದನ್ನು ನಾನು ನೋಡಿದೆ. ಅಲ್ಲಿ ಯಾವುದೇ ವಾದವಿಲ್ಲ, ಯಾವುದೇ ಪ್ರಚೋದನೆಯೂ ಇರಲಿಲ್ಲ. ಎಲ್ಲವೂ ಸರಿಯಾಗಿತ್ತು, ಆದರೆ ನಂತರ ಅವರ ಮೇಲೆ ಹಲ್ಲೆ ನಡೆಸಿದೆ ಎಂದು ಹೇಳಿದ್ದಾರೆ. ಅಂದು ರಾತ್ರಿ 9.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಆ ಘಟನೆ ನಡೆದ ನಂತರ ಇಲ್ಲಿನ ಪಾನಿ ಪುರಿ ಸ್ಟಾಲ್ ಮತ್ತು ಚಿಕನ್ ಮತ್ತು ಮೊಮೊಸ್ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲಾಗಿದೆ. ಶನಿವಾರ ರಾತ್ರಿ ವಿನಾಕಾರಣ ಮೂರು ಮಂದಿ ಮೇಲೆ ಹಲ್ಲೆಯಾಗಿದೆ. ಹಲ್ಲೆಗೊಳಗಾದ ನಾಲ್ವರ ಪೈಕಿ ಇಬ್ಬರು ಪಾನಿ ಪುರಿ ಮಾರಾಟಗಾರರು ಹಾಗೂ ಇಬ್ಬರು ಲಿಫ್ಟ್ ನೀಡಲು ನಿರಾಕರಿಸಿದವರು. ಇವರ ಮೇಲೆ ರೌಡಿಶೀಟರ್ವೊಬ್ಬ ದಾಳಿ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಹಲ್ಲೆಗೆ ಒಳಗಾದವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಮೂರು ಕೊಲೆ ಯತ್ನ ಹಾಗೂ ದರೋಡೆ ಕೇಸ್ ದಾಖಲಿಸಿದ್ದಾರೆ. ಸದ್ಯ ದಾಳಿ ನಡೆಸಿರುವ ಆರೋಪಿಯನ್ನು ಭಿನ್ನಮಂಗಲ ನಿವಾಸಿ ಕದಂಬ ಎಂದು ಗುರುತಿಸಲಾಗಿದೆ. ಈತ ಹಲ್ಲೆ, ಸುಲಿಗೆ ಕೃತ್ಯಗಳಲ್ಲಿ ಕುಖ್ಯಾತಿ ಗಳಿಸಿದ್ದು, 2024ರಲ್ಲಿ ಇಂದಿರಾನಗರ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿತ್ತು. ಜೈಲು ಸೇರಿ ಹೊರಬಂದಿರುವ ಈತ ಮತ್ತೆ ಸರಣಿ ಅಪರಾಧಗಳಲ್ಲಿ ತೊಡಗಿ ಆತಂಕ ಸೃಷ್ಟಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಇಂದಿರಾನಗರದಲ್ಲಿ ತನ್ನ ಹವಾ ತೋರಿಸಲು ಸ್ಥಳೀಯರು ಮತ್ತು ಅಂಗಡಿ ಮಾರಾಟಗಾರರನ್ನು ಬೆದರಿಸುತ್ತಿದ್ದ ಎನ್ನಲಾಗಿದೆ.