ರೈತರಿಗೆ ಗುಡ್ ನ್ಯೂಸ್: ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸಾಧ್ಯತೆ..!

ರೈತರಿಗೆ ಗುಡ್ ನ್ಯೂಸ್: ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸಾಧ್ಯತೆ..!

ಬೆಂಗಳೂರು: ಮುಂಬರುವ ಮುಂಗಾರು ರಾಜ್ಯಾದ್ಯಂತ ರೈತ ಸಮುದಾಯಕ್ಕೆ ಹರ್ಷ ತರುವುದು ಖಚಿತ, ವಿಶೇಷವಾಗಿ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ.

ಉತ್ತಮ ಮುಂಗಾರು ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳು ಉತ್ತಮ ಮಟ್ಟಕ್ಕೆ ತಲುಪುವುದಲ್ಲದೆ, ಅಂತರ್ಜಲ ಮಟ್ಟ ಕೂಡ ಹೆಚ್ಚಾಗುವ ನಿರೀಕ್ಷೆಗಳಿವೆ,

ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕೃಷಿ ಹವಾಮಾನ ತಜ್ಞ ಮತ್ತು ಮಾಜಿ ರಿಜಿಸ್ಟ್ರಾರ್ ಪ್ರೊ. ಎಂ.ಬಿ. ರಾಜೇಗೌಡ ಅವರ ಮಾತನಾಡಿ, ಜೂನ್-ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದ ನಡುವಿನ ನೈಋತ್ಯ ಮಾನ್ಸೂನ್ ಅವಧಿಯಲ್ಲಿ 860 ಮಿ.ಮೀ. ಸಾಮಾನ್ಯ ಮಳೆಯಾಗಿದೆ. ಈ ಬಾರಿ ಸಾಮಾನ್ಯಕ್ಕಿಂತ ಸುಮಾರು 5 ಪ್ರತಿಶತ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಸರಾಸರಿ ಮಳೆಯ 900 ಮಿ.ಮೀ.ಯಾಗಲಿದೆ ಎಂದು ಹೇಳಿದ್ದಾರೆ.

ಈ ವರ್ಷ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಕರ್ನಾಟಕ ಎರಡೂ ಕಡೆ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಗಳಿವೆ ಎಂದು ತಿಳಿಸಿದ್ದಾರೆ.

ಮಳೆಯ ಮಾದರಿಯ ಚಕ್ರವು ಪ್ರತಿ 12 ವರ್ಷಗಳಿಗೊಮ್ಮೆ ಬದಲಾಗುತ್ತದೆ. ಇದರಂತೆ ಮೊದಲಾರ್ಧ (ಆರು ವರ್ಷಗಳು) ಋಣಾತ್ಮಕ ಚಕ್ರ ಎಂದು ಕರೆಯಲಾಗುತ್ತದೆ. ದ್ವಿತೀಯಾರ್ಧವು ಸಕಾರಾತ್ಮಕ ಚಕ್ರವಾಗಿದೆ. ಇದೀಗ ನಾವು ಸಕಾರಾತ್ಮಕ ಚಕ್ರದಲ್ಲಿದ್ದೇವೆ. ಮುಂದಿನ ನಾಲ್ಕರಿಂದ ಐದು ವರ್ಷಗಳವರೆಗೆ ಈ ಪರಿಸ್ಥಿತಿ ಇದೇ ರೀತಿ ಮುಂದುವರಿಯುತ್ತದೆ, ಹೀಗಾಗಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ನಿರೀಕ್ಷಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಈ ವರ್ಷ, ಪೂರ್ವ ಮುಂಗಾರು ಕೂಡ ರೈತರ ಪರವಾಗಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ಕೋಲಾರ, ಕಲಬುರಗಿಯ ಕೆಲವು ಭಾಗಗಳು, ಬೀದರ್ ಮತ್ತು ಇತರ ಸ್ಥಳಗಳು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಉತ್ತಮ ಪೂರ್ವ ಮುಂಗಾರು ಮಳೆಯಾಗಿದೆ.

ಈ ವರ್ಷ ಮಾರ್ಚ್-ಅಂತ್ಯ/ಏಪ್ರಿಲ್ನಲ್ಲಿ ಬಿತ್ತನೆ ಪ್ರಾರಂಭಿಸುವ ರೈತರು ಎರಡು ಬಾರಿ ಬೆಳೆಗಳನ್ನು ಬೆಳೆಯಬಹುದು. ಜೂನ್ ಎರಡನೇ ವಾರದಲ್ಲಿ 65-85 ದಿನಗಳ ಬೆಳೆ ಕೊಯ್ಲು ಮಾಡಬಹುದು. ಕರ್ನಾಟಕದಲ್ಲಿ, ಕೃಷಿಗೆ ಮಳೆ ಜುಲೈನಲ್ಲಿ ಪ್ರಾರಂಭವಾಗುತ್ತದೆ. ಆ ಹೊತ್ತಿಗೆ ಅವರು ಎರಡನೇ ಬೆಳೆಗೆ ಹೋಗಬಹುದು. ಈ ಬಾರಿ, ನಿಯಮಿತ, ಸಾಮಾನ್ಯ ಮತ್ತು ದೀರ್ಘಾವಧಿಯ ಬೆಳೆಗಳನ್ನು ಬೆಳೆಯಬಹುದು ಎಂದು ಹೇಳಿದರು.

ಭಾರೀ ಮಳೆ ರೈತರಿಗೆ ಉತ್ತಮವಾಗಿದ್ದರೂ, ಸಾಮಾನ್ಯ ಜನ ಜೀವನಕ್ಕೆ ಅಡ್ಡಿಯುಂಟು ಮಾಡುವ ಸಾಧ್ಯತೆಗಳಿವೆ. ಹೀಗಾಗಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತರಿಗೆ ಮಳೆಗಾಲಕ್ಕೆ ಸಿದ್ಧತೆಗಳ ನಡೆಸುವಂತೆ ಸೂಚನೆಗಳನ್ನು ನೀಡಿದೆ.

ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸುವುದು, ಈ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಸಲಹೆ ನೀಡಿದೆ.

24X7 ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರಗಳನ್ನು ತೆರೆಯುವುದು, ಅಧಿಕಾರಿಗಳ ಫೋನ್ ಸಂಖ್ಯೆಗಳನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚುವುದು. ಇದರಿಂದ ಸಂಕಷ್ಟಕ್ಕೊಳಗಾಗುವ ನಿರ್ದಿಷ್ಟ ಪ್ರದೇಶಗಳ ಜನರು ನೆರವಿಗೆ ಯಾರನ್ನು ಸಂಪರ್ಕಿಸಬೇಕೆಂದು ತಿಳಿದಂತಾಗುತ್ತದೆ ಎಂದು ತಿಳಿಸಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (KSNDMC) ಮತ್ತು ಇತರ ಅಧಿಕಾರಿಗಳು ಮಳೆಗಾಲದ ಸಮಯದಲ್ಲಿ ಪ್ರವಾಹದ ಬಗ್ಗೆ ಕಾಲಕಾಲಕ್ಕೆ ಜನರಿಗೆ -ಕರಾವಳಿ ಪ್ರದೇಶಗಳಲ್ಲಿರುವವರಿಗೆ ಎಚ್ಚರಿಕೆ ನೀಡಬೇಕು. ಅಣೆಕಟ್ಟುಗಳು ತುಂಬಿದಾಗ ನೆರೆಯ ರಾಜ್ಯಗಳಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಸೂಚನೆಗಳನ್ನು ನೀಡಬೇಕು ಎಂದು ಹೇಳಿದೆ.

ಈ ನಡುವೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರವು ಸನ್ನದ್ಧರಾಗಿರುವಂತೆ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು (SDRF ಮತ್ತು NDRF) ಸೂಚನೆ ನೀಡಿದೆ. ಜೊತೆಗೆ ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಮಳೆನೀರಿನ ಚರಂಡಿಗಳಲ್ಲಿ ನೀರು ಸುಗಮವಾಗಿ ಹರಿಯಲು ಹೂಳು ತೆಗೆಯುವಂತೆ ಸೂಚನೆ ನೀಡಿದೆ.

Leave a Reply

Your email address will not be published. Required fields are marked *