ನವಿಲುಗಳ ನಿಗೂಢ ಸಾ*: ತುಮಕೂರಿನಲ್ಲಿ ಹಕ್ಕಿ ಜ್ವರ ಭೀತಿ, ಇಲಾಖೆ ಹೈ ಅಲರ್ಟ್
ತುಮಕೂರು: ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳಲ್ಲಿ 54ಕ್ಕೂ ಹೆಚ್ಚು ನವಿಲುಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ 44 ನವಿಲುಗಳು ಮತ್ತು 30 ಕೋಳಿಗಳು ಸಾವನ್ನಪ್ಪಿದ್ದವು. ನವಿಲುಗಳ ಸಾವಿಗೆ ಹಕ್ಕಿ ಜ್ವರವೇ ಕಾರಣವೆಂದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದ್ದರೆ, ಕೋಳಿಗಳ ಸ್ಯಾಂಪಲ್ಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿಲ್ಲ ಎಂದು ಸ್ಪಷ್ಟವಾಗಿದೆ. ಆದರೂ ಜಿಲ್ಲೆಯಾದ್ಯಂತ ನವಿಲುಗಳ ನಿಗೂಢ ಸಾವು ಮುಂದುವರಿಯುತ್ತಿರುವುದು ಜನರಲ್ಲಿ ಭಯ ಮೂಡಿಸಿದೆ.
ತುಮಕೂರು ತಾಲೂಕಿನ ಹಲವು ಭಾಗಗಳಲ್ಲಿ ನವಿಲುಗಳ ಸಾವು ವರದಿಯಾಗುತ್ತಿದ್ದು, ಇದೀಗ ಕುಣಿಗಲ್ ಭಾಗದಲ್ಲಿಯೂ ನವಿಲಿನ ಕಳೆಬರ ಪತ್ತೆಯಾಗಿರುವುದು ವ್ಯಾಪಕತೆ ಹೆಚ್ಚುವ ಆತಂಕವನ್ನು ಉಂಟುಮಾಡಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಶುಸಂಗೋಪನಾ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು, ಹಕ್ಕಿಗಳ ಚಲನವಲನಗಳ ಮೇಲೆ ಕಠಿಣ ನಿಗಾ ವಹಿಸಲಾಗಿದೆ. ಯಾವುದೇ ಕಾಡು ಹಕ್ಕಿಗಳ ಅಥವಾ ಪ್ರಾಣಿಗಳ ಸಾವು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಇತ್ತ ಬೊಮ್ಮನಹಳ್ಳಿಯ ಕೋಳಿ ಫಾರಂನಲ್ಲಿ ಸಾವನ್ನಪ್ಪಿದ್ದ ಕೋಳಿಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಹಕ್ಕಿ ಜ್ವರ ಇಲ್ಲವೆಂದು ದೃಢಪಟ್ಟಿದೆ. ಆದರೆ ನವಿಲುಗಳ ಸಾವಿನ ಮೂಲ ಇನ್ನೂ ಪತ್ತೆಯಾಗಿಲ್ಲದ ಕಾರಣ, ಸ್ಥಳೀಯರಲ್ಲಿ ಆತಂಕ ಮುಂದುವರಿದಿದೆ.
For More Updates Join our WhatsApp Group :




