ಬೆಂಗಳೂರಿನ ಪೌರಕಾರ್ಮಿಕರಿಗೆ ಬಂಪರ್ ಬೋನಸ್ & ಗುಡ್ನ್ಯೂಸ್ !

ಬೆಂಗಳೂರಿನ ಪೌರಕಾರ್ಮಿಕರಿಗೆ ಬಂಪರ್ ಬೋನಸ್ & ಗುಡ್ನ್ಯೂಸ್ !

ಬೆಂಗಳೂರು: ಬೆಂಗಳೂರಿನ ಪೌರಕಾರ್ಮಿಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಬಿಬಿಎಂಪಿ ವತಿಯಿಂದ ಕೇಂದ್ರ ಕಚೇರಿಯ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿದ್ದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಹಾಗೂ ಪೌರಕಾರ್ಮಿಕರ ದಿನಾಚರಣೆ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರುವ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ಎಸ್.ಆರ್ ಉಮಾಶಂಕರ್ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಲಿಖಿತ ರೂಪದಲ್ಲಿರುವ ಅತ್ಯುತ್ತಮ ಸಂವಿಧಾನ ನಮ್ಮ ಭಾರತ ಸಂವಿಧಾನ. ಡಾ. ಬಿ.ಆರ್ ಅಂಬೇಡ್ಕರ್ ಅವರು ಇಡೀ ದೇಶಕ್ಕೆ ಅತ್ಯುತ್ತಮ ಸಂವಿಧಾನವನ್ನು ಕಲ್ಪಿಸಿಕೊಟ್ಟವರು. ಅದು ಇಡೀ ಪ್ರಪಂಚದಲ್ಲಿಯೇ ಉತ್ತಮವಾದ, ವಿವರಾತ್ಮಕವಾದ ಸಂವಿಧಾನವಾಗಿದೆ. ಇದು ಕೇವಲ ಭಾರತಕ್ಕೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ವಿಶ್ವದ ಅನೇಕ ದೇಶಗಳಿಗೆ ಮುನ್ನುಡಿಯಾಗಲಿದೆ ಎಂದು ಹೇಳಿದರು.

ಪೌರಕರ್ಮಿಕರಿಗಾಗಿ ಒಂಟಿ ಮನೆ ಯೋಜನೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿವಿಧ ಸೌಲಭ್ಯ, ಧನಸಹಾಯ, ಬೋನಸ್ ನೀಡಲಾಗುತ್ತಿದೆ. ಹಲವಾರು ಹಿತರಕ್ಷಣಾ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನವನ್ನು ಆಯವ್ಯಯದಲ್ಲಿ ಮೀಸಲಿಡಲಾಗಿದೆ. ಕಳೆದ ಬಾರಿ ಆಯವ್ಯಯಕ್ಕಿಂತ ಹೆಚ್ಚಿನ ಅನುದಾನವನ್ನು ಈ ಬಾರಿ ಮಿಸಲಿಡಲಾಗಿದೆ ಎಂದು ಹೇಳಿದರು. 12,692 ಪೌರಕಾರ್ಮಿಕರ ಭರ್ಜರಿ ಗುಡ್ನ್ಯೂಸ್: ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪೌಕರಕಾರ್ಮಿಕರಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಬೆಂಗಳೂರಿನ ಪೌರಕಾರ್ಮಿಕರ ಒಳಿತಿಗಾಗಿ ಬಿಬಿಎಂಪಿ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ 12,692 ನೇರ ವೇತನ ಪೌರಕಾರ್ಮಿಕರನ್ನು ಕಾಯಂ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳುವ ಮೂಲಕ ಗುಡ್ನ್ಯೂಸ್ ಕೊಟ್ಟಿದ್ದಾರೆ. ಮುಂದುವರಿದು ಪೌರಕಾರ್ಮಿಕರ ಕಾಯಮಾತಿಗೆ ಪ್ರಮುಖ ಕಾರಣೀಕರ್ತರು ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು, ವಲಯ ಆಯುಕ್ತರು ಹಾಗೂ ಇನ್ನಿತರೆ ಅಧಿಕಾರಿಗಳು ಮುತುವರ್ಜಿ ವಹಿಸಿದ್ದು, ಅವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಮೇ 1 ರಂದು ನೇಮಕಾತಿ ಆದೇಶ ವಿತರಣೆ: ಪೌರಕಾರ್ಮಿಕರನ್ನು ಕಾಯಂ ಮಾಡುವ ವೇಳೆ ಸಾಕಷ್ಟು ದೂರುಗಳು, ಮೋಸ, ದುರುಪಯೋಗಗಳಿಗೆ ಯಾವ ಅಧಿಕಾರಿಗಳೂ ಆಸ್ಪದ ನೀಡದೆ, ಕಾಯಮಾತಿ ಪ್ರಕ್ರಿಯೆಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಕಾಯಂ ಆದ ನಂತರ ಪೌರಕಾರ್ಮಿಕರು ಮುಂದಿನ ದಿನಗಳಲ್ಲಿ ನೆಮ್ಮದಿ ಜೀವನ ಸಾಗಿಸಲು ಅನುಕೂಲವಾಗಲಿದೆ. 1ನೇ ಮೇ 2025 ರಂದು ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಕಾಯಂ ಆದವರಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ರವರ ಕುರಿತಂತಹ ಪುಸ್ತಕಗಳನ್ನು ನಾವೆಲ್ಲರೂ ಓದಿ ಅರಿತುಕೊಳ್ಳಬೇಕಿದೆ. ಅವರ ವ್ಯಕ್ತಿತ್ವವನ್ನು ನಾವು ಎಲ್ಲರಿಗೂ ಪರಿಚಯಿಸಬೇಕು. ಅವರ ಎಲ್ಲಾ ವಿಚಾರಧಾರೆಗಳನ್ನು ಇತರರಿಗೂ ತಿಳಿಯುವ ಹಾಗೆ ಮಾಡಬೇಕೆಂದು ಅಭಿಪ್ರಾಯಪಟ್ಟರು. ಪೌರಕಾರ್ಮಿಕರ ಮಕ್ಕಳು ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯಲ್ಲಿ ಉತ್ತಮ ಅಂಕ ಗಳಿಸಿದವರಿಗೆ ಇಂದು ಸನ್ಮಾನ ಮಾಡಿ, ಅವರೆಲ್ಲರಿಗೂ “ಡಾ. ಬಿ.ಆರ್ ಅಂಬೇಡ್ಕರ್ ಅವರ ವಿಚಾರಗಳು” ಎಂಬ ಪುಸ್ತಕವನ್ನು ನೀಡಲಾಗಿದೆ. ಅದನ್ನು ಸಂಪೂರ್ಣವಾಗಿ ಓದಿ ಬೇರೆಯವರಿಗೂ ಅದನ್ನು ಓದಿ ತಿಳಿದುಕೊಳ್ಳಲು ಪ್ರೇರಣೆ ನೀಡಬೇಕೆಂದು ತಿಳಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ: ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪೌರಕಾರ್ಮಿಕರ ದಿನಾಚರಣೆ-2025 ಕಾರ್ಯಕ್ರಮಕ್ಕೂ ಮುಂಚಿತವಾಗಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ ಹಾಗೂ ಪೌರಕಾರ್ಮಿಕರ ಪಿತಾಮಹ ಐ.ಪಿ.ಡಿ ಸಾಲಪ್ಪ ರವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು. ಪೌರಕಾರ್ಮಿಕರ ಮಕ್ಕಳಿಗೆ ಸನ್ಮಾನ: ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯಲ್ಲಿ ಉತ್ತಮ ಅಂಕ ಪಡೆದ ಪೌರಕಾರ್ಮಿಕರ 46 ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಅತ್ಯುತ್ತಮ ಪೌರಕಾರ್ಮಿಕರಿಗೆ ಸನ್ಮಾನ: ಪಾಲಿಕೆಯ ಎಂಟು ವಲಯಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 17 ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪೌರಕಾರ್ಮಿಕರಿಗೆ ಬೋನಸ್: ಡಾ: ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಖಾಯಂ ಪೌರಕಾರ್ಮಿಕರಿಗೆ 22,000 ರೂ. ಹಾಗೂ ನೇರ ವೇತನ ಪೌರಕಾರ್ಮಿಕರಿಗೆ 8,000 ರೂ. ಗಳ ಬೋನಸ್ ನೀಡಲಾಗುವುದು.

ಈ ಸಂದರ್ಭದಲ್ಲಿ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಸತೀಶ್, ಕರೀಗೌಡ, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಪೌರಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಬ್ಲೂಗ್ರೀನ್ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಬೆಂಗಳೂರು ಹವಾಮಾನ ಕ್ರಿಯಾಕೋಶದಡಿ “ಬ್ಲೂ ಗ್ರೀನ್” ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು 20ನೇ ಏಪ್ರಿಲ್ 2025 ರವರೆಗೆ ವಿಸ್ತರಿಸಲಾಗಿದೆ ಎಂದು ಹವಾಮಾನ ಕ್ರಿಯಾಕೋಶದ ಅಧ್ಯಕ್ಷರಾದ ಪ್ರೀತಿ ಗೆಹ್ಲೋಟ್ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚಿನ ಹವಾಮಾನ ಬದಲಾವಣೆಯ ಸಂಬಂಧ ಅನೇಕ ಕೆಲಸಗಳು ನಡೆಯುತ್ತಿದ್ದು, ಅದರ ಹೊರತಾಗಿಯೂ “ಬ್ಲೂ ಗ್ರೀನ್” ಪ್ರಶಸ್ತಿಗಳಿಗೆ ನಿರೀಕ್ಷೆಗಿಂತ ಕಡಿಮೆ ಅರ್ಜಿಗಳು ಬಂದ ಕಾರಣ, ಬಿಬಿಎಂಪಿ ಹವಾಮಾನ ಕ್ರಿಯಾ ಕೋಶವು ಬ್ಲೂಗ್ರೀನ್ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಏಪ್ರಿಲ್ 20, 2025 ಕ್ಕೆ ಮುಂದೂಡಲಾಗಿದೆ. ಬೆಂಗಳೂರಿನಲ್ಲಿ ಹವಾಮಾನ ಕ್ರಿಯೆಯ ಕುರಿತು ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳು, ಸಮುದಾಯಗಳು ಮತ್ತು ಸಂಸ್ಥೆಗಳಿಂದ ಹೆಚ್ಚಿನ ಭಾಗವಹಿಸುವಿಕೆಯನ್ನು ನಿರೀಕ್ಷಿಸಲಾಗಿದೆ. ಬ್ಲೂಗ್ರೀನ್ ಪ್ರಶಸ್ತಿಗಳು ಸುಸ್ಥಿರತೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ಗುರುತಿಸುತ್ತವೆ. 5ನೇ ಜೂನ್ 2025 ರಂದು ವಿಶ್ವ ಪರಿಸರ ದಿನದಂದು ಸನ್ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ರವರಿಂದ ವಿಜೇತರನ್ನು ಗೌರವಿಸಲಾಗುವುದು. ಪ್ರಮುಖ ವಿವರಗಳು: * ಯಾರು ಅರ್ಜಿ ಸಲ್ಲಿಸಬಹುದು: ವ್ಯಕ್ತಿಗಳು, ಸಮುದಾಯಗಳು, ಸಂಸ್ಥೆಗಳು ಮತ್ತು ಹವಾಮಾನ ಕ್ರಿಯೆಗೆ ಕೊಡುಗೆ ನೀಡುವ ಮಧ್ಯವರ್ತಿಗಳು. * ಈ ಲಿಂಕಿನ ಮೂಲಕ ಅರ್ಜಿ ಸಲ್ಲಿಸಿ: https://forms.gle/LEeKpUuWP1eU8qyF6 * ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 20ನೇ ಏಪ್ರಿಲ್ 2025 ಪ್ರಮುಖ ಅಂಶಗಳು: * ಮೊದಲ ಸುತ್ತಿನಲ್ಲಿ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. * ತೀರ್ಪುಗಾರರ ಮೌಲ್ಯಮಾಪನದ ನಂತರ ಶಾರ್ಟ್ ಲಿಸ್ಟ್ ಮಾಡಿದ ಅರ್ಜಿದಾರರಿಗೆ ಇಮೇಲ್ ಮೂಲಕ ತಿಳಿಸಲಾಗುತ್ತದೆ. * ಹವಾಮಾನ ಕ್ರಿಯಾ ಕೋಶದ ವೆಬ್ ಸೈಟ್, ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್ ಗುಂಪುಗಳ ಮೂಲಕ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.

Leave a Reply

Your email address will not be published. Required fields are marked *