ಬೆಂಗಳೂರು: ಪೂರ್ವ ಬೆಂಗಳೂರಿನ ಭಾಗದಲ್ಲಿ ಸುಗಮ ಸಂಚಾರಕ್ಕಾಗಿ ವರ್ತೂರಿನಲ್ಲಿ 488 ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಲೈಓವರ್ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ಇದಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ವರ್ತೂರು ನಾಗರಿಕ ಹಿತ ರಕ್ಷಣಾ ವೇದಿಕೆಯ ಸದಸ್ಯರು ಫ್ಲೈಓವರ್ ನಿರ್ಮಾಣ ವಿರೋಧಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ವಿವರವಾದ ಪತ್ರ ಕೂಡ ಸಲ್ಲಿಸಿದ್ದಾರೆ. ಈ ಮೇಲ್ಸೇತುವೆ ಬೇಡ ಎನ್ನಲು ಕಾರಣವೇನು?

ವರ್ತೂರು ಭಾಗದಲ್ಲಿ ಈ ಫ್ಲೈಓವರ್ ನಿರ್ಮಾಣಕ್ಕೆ 2022ರಲ್ಲಿ ಬಿಜೆಪಿ ಸರ್ಕಾರದ ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ಸಿಕ್ಕಿತ್ತು. ಈ ಸುಮಾರು 1.92 ಕಿ.ಮೀ ಉದ್ದ ಮತ್ತು 60 ಅಡಿ ಅಗಲದ ಈ ಮೇಲ್ಸೇತುವೆಯನ್ನು ಯೋಜಿಸಲಾಗಿದೆ. ಇದನ್ನು ವಿಸ್ತರಿಸುವುದನ್ನು ಕೂಡ ಒಳಗೊಂಡಿತ್ತು. ಆದರೆ ಇದು ಒಮ್ಮೆ ನಿರ್ಮಾಣವಾದರೆ ಫ್ಲೈಓವರ್ನಿಂದ ಹೆಚ್ಚಿನ ಖಾಸಗಿ ವಾಹನಗಳ ಓಡಾಟಕ್ಕೆ ಕಾರಣವಾಗುತ್ತೆ. ಇದರಿಂದ ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಕೂಡ ಹೆಚ್ಚಾಗುತ್ತೆ ಎಂದು ಇಲ್ಲಿನ ಸ್ಥಳೀಯರು ದೂರಿದ್ದಾರೆ. ಈ ಯೋಜನೆಯು ಭವಿಷ್ಯದ ನಗರ ಯೋಜನೆಯನ್ನು ಒಳಗೊಂಡಿಲ್ಲ. ಏಕೆಂದರೆ ಇದು ಕೆಲವೇ ವರ್ಷಗಳಲ್ಲಿ ತುಂಬಿ ಹೋಗುತ್ತೆ ಎಂದು ಕಾರಣ ನೀಡಿದ್ದಾರೆ.
ಇದು ನಗರದಲ್ಲಿ ದೈನಂದಿನ ಸಂಚಾರವನ್ನು ಸುಗಮಗೊಳಿಸುವ ಮತ್ತು ದಟ್ಟಣೆಯನ್ನು ಕಡಿಮೆ ಮಾಡುವುದಾದರೂ ಬೆಂಗಳೂರಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೇಲ್ಸೇತುವೆ ಬದಲಾಗಿ, ಜಿಗಣಿಯಿಂದ ಕಾಡುಗೋಡಿ ಟ್ರೀ ಪಾರ್ಕ್ಗೆ ವರ್ತೂರು ಮೂಲಕ ಸಂಪರ್ಕಿಸುವ ಮೆಟ್ರೋ ಮಾರ್ಗವನ್ನು ವಿಸ್ತರಿಸುವಂತೆ ಅವರು ಕೇಳಿದ್ದಾರೆ. ಭವಿಷ್ಯದ ನಗರವಾಗಿ ಸಿದ್ಧವಾಗಿರುವ ಪೂರ್ವ ಕಾರಿಡಾರ್ಗೆ ಇದು ಬಹಳ ಸಹಾಯ ಮಾಡುತ್ತದೆ ಎಂದು ಇಲ್ಲಿನ ನಿವಾಸಿಗಳು ಹೇಳಿದ್ದಾರೆ.
ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸದೆ ಈ ಮೇಲ್ಸೇತುವೆ ಯೋಜನೆ ಮಾಡಲಾಗಿದೆ ಎಂದು ಆಕ್ಷೇಪಿಸಿದ್ದಾರೆ. ವಿವರವಾದ ಯೋಜನಾ ವರದಿ (ಡಿಪಿಆರ್) ನಂತಹ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ಸಹ ಹಂಚಿಕೊಂಡಿಲ್ಲ. ಎಂದು ಅವರು ಹೇಳಿದರು. 2018ರಿಂದಲೂ ಈ ಯೋಜನೆಯನ್ನು ನಿವಾಸಿಗಳು ವಿರೋಧಿಸುತ್ತಿದ್ದಾರೆ. ಯೋಜನೆಯ ವೆಚ್ಚವು 187 ಕೋಟಿ ರೂಪಾಯಿಗಳಿಂದ 488 ಕೋಟಿ ರೂಪಾಯಿಗಳಿಗೆ ಏರಿದೆ. ಆದರೆ ಸರ್ಕಾರ ಏಕೆ ಎಂದು ಎಂದಿಗೂ ವಿವರಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಮೇಲ್ಸೇತುವೆಗೆ ವಿರೋಧ ಏಕೆ? ಈ ಮೇಲ್ಸೇತುವೆಯು ಕೆಟ್ಟ ಕಲ್ಪನೆಯಿಂದ ಕೂಡಿದೆ, ಅಲ್ಲದೆ ಪರಿಸರಕ್ಕೂ ಹಾನಿಕಾರಕ. ಇದು ಬೆಂಗಳೂರಿನ ಭವಿಷ್ಯದ ಅಗತ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ಈ ಯೋಜನೆ ಮುಂದುವರಿಸುವುದರಿಂದ ತೆರಿಗೆದಾರರ ಹಣ ವ್ಯರ್ಥವಾಗುತ್ತದೆ. ಈ ಯೋಜನೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ವರ್ತೂರು ನಾಗರಿಕ ಹಿತ ರಕ್ಷಣಾ ವೇದಿಕೆ ಆಗ್ರಹಿಸಿದೆ. ಅಲ್ಲದೆ ಈ ಫ್ಲೈಓವರ್ ಅನ್ನು ಕೆರೆಯ ಬಫರ್ ವಲಯದೊಳಗೆ ಯೋಜಿಸಲಾಗಿದೆ. ಇದು ಕರ್ನಾಟಕ ಹೈಕೋರ್ಟ್ನ ತೀರ್ಪಿನ ನೇರ ಉಲ್ಲಂಘನೆಯಾಗಿದೆ. ಈ ಸೂಕ್ಷ್ಮ ವಲಯದಲ್ಲಿ ಯಾವುದೇ ನಿರ್ಮಾಣವು ಪರಿಸರ ಸಂರಕ್ಷಣಾ ಕಾನೂನುಗಳನ್ನು ಉಲ್ಲಂಘಿಸುತ್ತದೆ ಎಂದೂ ದೂರಿದೆ.